ಮಠ ತಗೊಂಡು ನಾವೇನ್ರೀ ಮಾಡೋಣ: ಸಿಎಂ
ಹರಿಹರ, ಫೆಬ್ರವರಿ 09: ಮಠಗಳನ್ನು ಸುಪರ್ಧಿಗೆ ತೆಗೆದುಕೊಳ್ಳುವ ಉದ್ದೇಶ ಸರ್ಕಾರಕ್ಕೆ ಇಲ್ಲ, 'ಮಠ ತಗೊಂಡು ನಾವೇನ್ರಿ ಮಾಡೋಣ' ಎಂದು ಸಿಎಂ ಸಿದ್ದರಾಮಯ್ಯ ಲೋಕಾಭಿರಾಮವಾಗಿ ಹೇಳಿದರು.
ದಾವಣೆಗೆರೆ ಜಿಲ್ಲೆಯ ಹರಿಹರದ ಬೆಳ್ಳೋಡಿ ಕನಕಗುರುಪೀಠ ದ ಬೆಳ್ಳಿ ಉತ್ಸವಕ್ಕೆ ಆಗಮಿಸಿದ್ದ ವೇಳೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಠಗಳು, ದೇವಸ್ಥಾನಗಳನ್ನು ವಶಕ್ಕೆ ಪಡೆಯುವ ಯಾವ ಉದ್ದೇಶವೂ ನಮಗೆ ಇಲ್ಲ, ಈಗಲೂ ನಾನು ಮಠಕ್ಕೇ ಬಂದಿದ್ದೇನೆ. ಮಠಗಳನ್ನು, ದೇವಸ್ಥಾನಗಳನ್ನು ವಶಕ್ಕೆ ಪಡೆದು ಏನು ಮಾಡಲಿ ಹೇಳಿ? ಎಂದು ಸುದ್ದಿಗಾರರನ್ನೇ ಪ್ರಶ್ನಿಸಿದರು.
ಮಠಗಳ ಸುಪರ್ದಿ ಸರಕಾರಕ್ಕೆ: ಒನ್ ಇಂಡಿಯಾ ಓದುಗರು ಏನಂತಾರೆ?
ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗಲೂ ಕೂಡ ಇಂತಹುದೇ ಪ್ರಕಟಣೆ ಹೊರಡಿಸಿದ್ದರು, ಅವರೇನು ಮಠಗಳನ್ನು ವಶಕ್ಕೆ ಪಡೆಯಲು ಮಾಡಿದ್ದರೇ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಅವರು 2006ರಲ್ಲಿ ಡಿವಿಷನ್ ಬೆಂಚ್ನಿಂದ ಬಂದ ತೀರ್ಪಿಗೆ ಅನುಗುಣವಾಗಿ ಆ ಪ್ರಕಟಣೆಯನ್ನು ಹೊರಡಿಸಲಾಗಿತ್ತಷ್ಟೆ ನಮಗೆ ಮಠಗಳನ್ನು ಸುಪರ್ಧಿಗೆ ತೆಗೆದುಕೊಳ್ಳುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣಾ ಮೈತ್ರಿ ಬಗ್ಗೆ ಮಾತನಾಡಿದ ಅವರು, ನಮಗೆ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವ ಅಗತ್ಯ ಇಲ್ಲ, ಏಕಾಂಗಿಯಾಗಿ ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸದಿಂದ ನುಡಿದರು.
ಈಗಾಗಲೇ ಹೈಕಮಾಂಡ್ನಿಂದ ಚುನಾವಣಾ ವೀಕ್ಷಕರನ್ನು ರಾಜ್ಯದ ಕ್ಷೇತ್ರಗಳಿಗೆ ಕಳುಹಿಸಿದ್ದು, ಪಕ್ಷದ ವತಿಯಿಂದ ಸಮೀಕ್ಷೆ ಜಾರಿಯಲ್ಲಿದೆ. ಸಮೀಕ್ಷೆ ಆಧರಿಸಿ ಟಿಕೆಟ್ ನೀಡಲಾಗುತ್ತದೆ ಎಂದರು.