ಸಿದ್ದರಾಮಯ್ಯ ವಿರುದ್ಧ ಬೆಂಕಿಯುಗುಳಿದ ರೇಣುಕಾಚಾರ್ಯ
ದಾವಣಗೆರೆ, ಅಕ್ಟೋಬರ್ 18: "ಮತಾಂಧ, ದೇಶ ದ್ರೋಹಿ ಟಿಪ್ಪು ಅವರ ಜಯಂತಿ ಮಾಡಿದ್ದೀರಿ. ಮಡಿಕೇರಿಯಲ್ಲಿ ಬೆಂಕಿ ಹಚ್ಚಿದಿರಿ. ಈಗ ನೀತಿ ಪಾಠ ಹೇಳುತ್ತಾ ದೇಶ ಭಕ್ತನಿಗೆ ಭಾರತ ರತ್ನ ನೀಡುತ್ತಿರುವುದನ್ನು ವಿರೋಧಿಸುತ್ತಿದ್ದೀರಿ" ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ- ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಶುಕ್ರವಾರ ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕೀಟ್ ಹೌಸ್ ನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕರು. ಅವರ ಬಗ್ಗೆ ಗೌರವ ಇದೆ. ಆದರೆ ವೀರ ಸಾವರ್ಕರ್ ಬಗ್ಗೆ ಹೇಳಿಕೆ ನೀಡಿದ ವಿಚಾರ ಖಂಡಿಸುತ್ತೇನೆ. ದುಷ್ಟರಿಗೆ ಪ್ರಶಸ್ತಿ ಕೊಟ್ಟರೆ ಟೀಕೆ ಮಾಡಿ. ಅದನ್ನು ಬಿಟ್ಟು ಅಪ್ರತಿಮ ದೇಶ ಭಕ್ತನ ಬಗ್ಗೆ ಮಾತನಾಡೋದು ಸರಿಯಲ್ಲ ಎಂದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಹೀಗೆಲ್ಲಾ ಮಾತಾಡಬೇಕಾ?; ರೇಣುಕಾಚಾರ್ಯ
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನಲ್ಲಿ ಮೂಲೆ ಗುಂಪು ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಅಂಥದರಲ್ಲಿ ಸಾವರ್ಕರ್ ಬಗ್ಗೆ ಸಿದ್ದರಾಮಯ್ಯ ಮಾತನಾಡಿರುವುದನ್ನು ಖಂಡಿಸುತ್ತೇನೆ. ಅಲ್ಲದೆ ಬಿಜೆಪಿ ಮತ ಬ್ಯಾಂಕ್ ರಾಜಕಾರಣ ಯಾವತ್ತೂ ಮಾಡಲಿಲ್ಲ. ಗಾಂಧೀಜಿ ಕಲ್ಪನೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದು, ಗಾಂಧೀಜಿ ನಮಗೆ ಆದರ್ಶ ವ್ಯಕ್ತಿ ಎಂದು ಹೇಳಿದರು.
ಆದರೆ, ಕಾಂಗ್ರೆಸ್ ನವರು ಬುದ್ಧ, ಬಸವ, ಅಂಬೇಡ್ಕರ್ ರನ್ನು ಮತ ಬ್ಯಾಂಕ್ ಗಾಗಿ ಬಳಸಿಕೊಳ್ಳುತ್ತಿದ್ದಾರೆ. ಟಿಪ್ಪುವಿನ ಜಯಂತಿ ಮಾಡಿದಿರಿ. ಮಡಿಕೇರಿಯಲ್ಲಿ ಬೆಂಕಿ ಹಚ್ಚಿದಿರಿ. ಈಗ ನೀತಿ ಪಾಠ ಮಾಡಲು ಬರುತ್ತೀರಾ ಎಂದು ಕಿಡಿ ಕಾರಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷಾತೀತ ನಾಯಕ. ಅವರನ್ನು ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಅಮಿತ್ ಶಾ, ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಇದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಈಗ ಸಿಎಂ ಮಾಡಿದ್ದಾರೆ ಎಂದು ಹೇಳಿದರು.
ಪರಮೇಶ್ವರ್ ಆಪ್ತ ಸಹಾಯಕನನ್ನು ಮುಗಿಸಲಾಗಿದೆ: ರೇಣುಕಾಚಾರ್ಯ
ಶಾಸಕರು, ಕಾರ್ಯಕರ್ತರು ಎಲ್ಲ ಒಟ್ಟಿಗೆ ಇದ್ದೇವೆ. ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬುದೆಲ್ಲ ಊಹಾಪೋಹದ ಮಾತುಗಳಷ್ಟೇ. ಅವರ ನೇತೃತ್ವದಲ್ಲಿ ಉಪ ಚುನಾವಣೆ ಮಾಡುತ್ತೇವೆ. 2023ನೇ ಇಸವಿಯಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆ ನಂತರವೂ ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿ ಎಂದರು.
ಇನ್ನು ವಿಶ್ವನಾಥ್ ಹಾಗೂ ಸಾ. ರಾ. ಮಹೇಶ್ ಆಣೆ- ಪ್ರಮಾಣ ವಿಚಾರವಾಗಿ ಮಾತನಾಡಿದ ಅವರು, ವಿಶ್ವನಾಥ್ ಅವರ ಬಗ್ಗೆ ಸಾ. ರಾ. ಮಹೇಶ್ ಲಘು ಹೇಳಿಕೆ ನೀಡುವುದು ಸರಿಯಲ್ಲ. ವಿಶ್ವನಾಥ್ ಹಿರಿಯ ರಾಜಕಾರಣಿ, ರಾಜ್ಯಾಧ್ಯಕ್ಷರಾಗಿದ್ದರು. ಅವರನ್ನು ಆಣೆ- ಪ್ರಮಾಣಕ್ಕೆ ಕರೆಯುವುದು ಸಮಂಜಸವಲ್ಲ. ಸಾ. ರಾ. ಮಹೇಶ್ ಸಚಿವರಾಗಿದ್ದಾಗ ಏನೆಲ್ಲಾ ಮಾಡಿದರು ಎನ್ನುವುದು ಗೊತ್ತಿದೆ. ಜೆಡಿಎಸ್ ಅಪ್ಪ- ಮಕ್ಕಳ ಪಕ್ಷ. ಇನ್ನೂ ಎಷ್ಟು ಜನ ಹೊರಗೆ ಹೋಗ್ತಾರೆ ನೋಡಿ ಎಂದು ಭವಿಷ್ಯ ನುಡಿದರು.