ಪಂಚಮಸಾಲಿ ಸ್ವಾಮೀಜಿ ವಿರುದ್ಧ ಕನಲಿದ ಬಿಎಸ್ವೈ: ರಾಜೀನಾಮೆ ಕೊಡುವ ಮಾತು
ದಾವಣಗೆರೆ, ಜನವರಿ 14: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ. ಸ್ವಾಮೀಜಿಯೊಬ್ಬರು ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಮುಂದೆ ಬೇಡಿಕೆ ಇಟ್ಟರು. ಮುಖ್ಯಮಂತ್ರಿಗಳು ವೇದಿಕೆಯಲ್ಲಿಯೇ ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಮಂಗಳವಾರ ಸಂಜೆ ವೈರಲ್ ಆಗಿದೆ.
ಮಂಗಳವಾರ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆಯುತ್ತಿರುವ ಹರ ಜಾತ್ರೆಯ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಪಾಲ್ಗೊಂಡಿದ್ದರು. ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಹೈಕಮಾಂಡ್ ಸಮಯ ನೀಡದ ಕಾರಣ ಯಡಿಯೂರಪ್ಪ ದೆಹಲಿ ಪ್ರವಾಸ ರದ್ದುಗೊಳಿಸಿ ಚಿಕ್ಕಮಗಳೂರು, ದಾವಣಗೆರೆ ಪ್ರವಾಸದಲ್ಲಿದ್ದರು. ಹರಿಹರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸ್ಥಾನದ ಬೇಡಿಕೆ ಪ್ರತಿಧ್ವನಿಸಿದೆ.
ಸ್ವಾಮೀಜಿ ಏನಂದ್ರು?
ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡುವಾಗ, ""ಯಡಿಯೂರಪ್ಪ ಅವರೇ, ನೀವು ರಾಜ್ಯದ ಮುಖ್ಯಮಂತ್ರಿ ಆಗಿದ್ದೀರಿ. ವೀರಶೈವ ಪಂಚಮಸಾಲಿ ಸಮುದಾಯ ನಿಮ್ಮ ಬೆನ್ನಿಗಿದೆ. ನೀವು ನಮ್ಮ ಸಮುದಾಯದ ನಾಲ್ಕು ಶಾಸಕರಿಗೆ ಸಚಿವ ಸ್ಥಾನ ನೀಡಲೇಬೇಕು. ಮುರುಗೇಶ ನಿರಾಣಿ ನಮ್ಮ ಸಮುದಾಯದ ಪ್ರಶ್ನಾತೀತ ನಾಯಕ. ನೀವು ಅವರನ್ನು ಕೈ ಬಿಟ್ಟರೇ ನಮ್ಮ ಸಮುದಾಯ ನಿಮ್ಮನ್ನು ಕೈ ಬಿಡಲಿದೆ'' ಎಂದು ಹೇಳಿದರು.
ಎಲ್ಲರೆದುರೇ ಪರಿಹಾರ ಕೇಳಿದ್ದಕ್ಕೆ ಬಿಎಸ್ವೈ ವಿರುದ್ಧ ಅಮಿತ್ ಶಾ ಕಿಡಿ?
ಎದ್ದು ಹೊರಟು ನಿಂತ ಸಿಎಂ
ಸ್ವಾಮೀಜಿಗಳ ಪಕ್ಕದಲ್ಲಿ ಕೂತಿದ್ದ ಯಡಿಯೂರಪ್ಪ ಈ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವೇದಿಕೆಯಲ್ಲಿಯೇ ನೂರಾರು ಜನರ ಮುಂದೆಯೇ ಬಹಿರಂಗವಾಗಿ ಸಿಟ್ಟನ್ನು ಹೊರಹಾಕಿದ ಮುಖ್ಯಮಂತ್ರಿಗಳು ಎದ್ದು ನಿಂತು, ""ಏನು ಮಾತನಾಡುತ್ತಿದ್ದಾರಾ ನೀವು?. ಹೀಗೆ ಮಾತನಾಡಿದರೇ ಇಲ್ಲಿಂದ ಹೊರಟು ಹೋಗುತ್ತೇನೆ'' ಎಂದು ಅಸಮಾಧಾನ ಹೊರಹಾಕಿದರು. ಯಡಿಯೂರಪ್ಪ ಪಕ್ಕದಲ್ಲಿ ಕುಳಿತಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಮುರುಗೇಶ ನಿರಾಣಿಯನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಅಂತಿಮವಾಗಿ ಬಸವರಾಜ ಬೊಮ್ಮಾಯಿ ಯಡಿಯೂರಪ್ಪರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.
ಎಚ್ಚರಿಕೆ ಕೊಡುವುದು ಬೇಡ
ಸ್ವಲ್ಪ ಸಮಾಧಾನಗೊಂಡ ಯಡಿಯೂರಪ್ಪ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುವಾಗ, ""ಪಂಚಮಸಾಲಿ ಸಮಾಜ ನನ್ನ ಜೊತೆ ಇದೆ ಎಂದು ನನಗೆ ಗೊತ್ತಿದೆ. ಎಲ್ಲ ಮಠಾಧೀಶರನ್ನು ಸೇರಿಸುತ್ತೇನೆ. ಸಲಹೆ ಕೊಡಿ ಎಚ್ಚರಿಕೆ ಕೊಡುವುದು ಬೇಡ. ಸ್ವಾಮೀಜಿಗಳು ಕೈ ಎತ್ತಿ ಎಚ್ಚರಿಕೆ ಕೊಡುವುದು ಬೇಡ. ಸಲಹೆ ಕೊಡಿ ಸ್ವೀಕರಿಸುತ್ತೇನೆ. ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ನನಗಾಗಿ 17 ಶಾಸಕರು ಸ್ಥಾನಕ್ಕೆ ರಾಜೀನಾಮೆ ನೀಡಿ, ನಾಲ್ಕು ತಿಂಗಳಿಂದ ವನವಾಸದಲ್ಲಿದ್ದಾರೆ'' ಎಂದು ತರಾತುರಿಯಲ್ಲಿ ಭಾಷಣ ಮುಗಿಸಿ ಹೊರಟು ನಿಂತರು.
ದಾವೋಸ್ ಗೆ ಹೋಗುವ ಮುನ್ನವೇ ಸಂಪುಟ ವಿಸ್ತರಣೆ: ಯಡಿಯೂರಪ್ಪ
ವಿಡಿಯೋ ವೈರಲ್
ಯಡಿಯೂರಪ್ಪ ಸ್ವಾಮೀಜಿ ವಿರುದ್ಧ ಅಸಮಾಧಾನ ಹೊರಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೆಡಿಎಸ್ ಈ ವಿಡಿಯೋವನ್ನು ಫೇಸ್ ಬುಕ್ನಲ್ಲಿ ಹಾಕಿದೆ. ಅದಕ್ಕೆ ನೂರಾರು ಕಮೆಂಟ್ ಗಳು ಬರುತ್ತಿವೆ. ಯೋಗ ಗುರು ಆಗಿದ್ದ ವಚನಾನಂದ ಶ್ರೀಗಳನ್ನು ಪಂಚಮಸಾಲಿ ಸಮುದಾಯದ ಮುಖಂಡರು ಇತ್ತೀಚೆಗೆ ಹರಿಹರ ಪೀಠಕ್ಕೆ ಪೀಠಾಧಿಪತಿಯನ್ನಾಗಿ ಮಾಡಿದ್ದು, ಮುರುಗೇಶ ನಿರಾಣಿ ಅವರಿಗೆ ಆಪ್ತರಾಗಿದ್ದಾರೆ.