ದಾವಣಗೆರೆಯಲ್ಲಿ ಲಾಕಪ್ ಡೆತ್ ಆರೋಪ; ಸಿಐಡಿ ತನಿಖೆ ಆರಂಭ
ದಾವಣಗೆರೆ, ಅಕ್ಟೋಬರ್ 8: ದಾವಣಗೆರೆಯ ಮಾಯಕೊಂಡ ಪೊಲೀಸರ ವಶದಲ್ಲಿದ್ದ ಮರಳಸಿದ್ದಪ್ಪ ಎಂಬ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ಚುರುಕುಗೊಳಿಸಿದೆ.
ಮಾಯಕೊಂಡ ಪೊಲೀಸ್ ಠಾಣೆಗೆ ಸಿಐಡಿ ಡಿವೈಎಸ್ಪಿ ಕೆ.ಸಿ. ಗಿರೀಶ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪೊಲೀಸ್ ಠಾಣೆಯಲ್ಲಿದ್ದ ಸಿಸಿಟಿವಿ ಸೇರಿದಂತೆ ಸಾಕ್ಷ್ಯಗಳ ಪರಿಶೀಲನೆ ನಡೆಸಿದ ತಂಡ, ಮೃತದೇಹ ಪತ್ತೆಯಾಗಿದ್ದ ಸ್ಥಳವನ್ನೂ ಪರಿಶೀಲಿಸಿದ್ದಾರೆ.
ಲಾಕಪ್ ಡೆತ್ ಅನುಮಾನ; ಮಾಯಕೊಂಡ ಠಾಣೆಯ ಮೂವರು ಪೊಲೀಸರ ಅಮಾನತು
ಸಿಐಡಿ ತಂಡದಿಂದ ಲಾಕಪ್ ಡೆತ್ ತನಿಖೆ ಆರಂಭಗೊಂಡಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದಾರೆ. ಅ.6ರ ಮಂಗಳವಾರ ವಿಟ್ಟಲಾಪುರದ ಮರಳಸಿದ್ದಪ್ಪರದ್ದು ಲಾಕಪ್ ಡೆತ್ ಎಂಬ ಶಂಕೆ ವ್ಯಕ್ತವಾಗಿತ್ತು. ಪ್ರಕರಣ ಸಂಬಂಧ ಮಾಯಕೊಂಡ ಪಿ ಎಸ್ ಐ ಸೇರಿ ಮೂವರು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ನಿನ್ನೆ ಮೃತ ಮರಳಸಿದ್ದಪ್ಪ ಮರಣೋತ್ತರ ವರದಿ ಬಂದ ನಂತರ ಕುಟುಂಬಕ್ಕೆ ಶವ ಹಸ್ತಾಂತರ ಮಾಡಲಾಗಿದೆ.
ವಿಚಾರಣೆ ನೆಪದಲ್ಲಿ ಠಾಣೆಗೆ ಕರೆದುಕೊಂಡು ಬಂದು ಪೊಲೀಸರು ಥಳಿಸಿದ ಕಾರಣ ಮರಳಸಿದ್ಧಪ್ಪ ಸಾವನ್ನಪ್ಪಿದ್ದರು ಎಂಬ ಆರೋಪ ಕುಟುಂಬದವರಿಂದ ಕೇಳಿ ಬಂದಿತ್ತು. ಮರಳಸಿದ್ದಪ್ಪ ಬಗೆಗಿನ ವೈಯಕ್ತಿಕ ಮಾಹಿತಿಯನ್ನೂ ಸಿಐಡಿ ತಂಡ ಕಲೆ ಹಾಕಿದೆ. ಗಂಡು ಮಗು ಪಡೆಯುವ ಸಲುವಾಗಿ ಮರಳಸಿದ್ಧಪ್ಪ ಎರಡನೇ ವಿವಾಹವಾಗಿದ್ದ ಎನ್ನಲಾಗಿದೆ. ತನ್ನ ಸಂಬಂಧಿಕರಲ್ಲಿಯೇ ಓರ್ವ ಯುವತಿಯನ್ನು ಮದುವೆಯಾಗಿದ್ದು, ಮೊಮ್ಮಗಳಿದ್ದರೂ ಮರಳಸಿದ್ಧಪ್ಪ 2 ನೇ ಮದುವೆಯಾಗಿದ್ದ ಎಂಬ ಕುರಿತು ಕುಟುಂಬದಲ್ಲಿ ಜಗಳವಾಗಿತ್ತು. ಈ ಬಗ್ಗೆ ಸ್ಥಳೀಯ ಮುಖಂಡರು ಇಬ್ಬರನ್ನು ಕೂರಿಸಿ ಚರ್ಚೆ ನಡೆಸಿದ್ದರು ಎನ್ನಲಾಗಿದೆ.
Recommended Video
ಈ ಎಲ್ಲಾ ಆಧಾರಗಳನ್ನಿಟ್ಟುಕೊಂಡು ಹಾಗೂ ವಿವಿಧ ಆಯಾಮಗಳಿಂದ ಸಿಐಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ಅಧಿಕಾರಿಗಳು ಠಾಣೆಯೊಳಗೆ ಥಳಿಸಿ ಮರಳಸಿದ್ಧಪ್ಪ ಸಾವನ್ನಪ್ಪಿದ ಬಳಿಕ ಬಸ್ ನಿಲ್ದಾಣದ ಬಳಿ ಮೃತದೇಹ ಸಾಗಿಸಿದ್ದರಾ ಎಂಬ ಬಗ್ಗೆಯೂ ಸಿಐಡಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.