ದಾವಣಗೆರೆಯ ಗಡಿಭಾಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ
ಹರಿಹರ. ಏಪ್ರಿಲ್ 24: ಕೊರೊನಾ ವೈರಸ್ ಸೋಂಕಿತರ ಪ್ರಮಾಣ ಮುಕ್ತಗೊಳಿಸುವ ನಿಟ್ಟಿನಲ್ಲಿ ಬೇರೆ ಜಿಲ್ಲೆಗಳಿಂದ ವಾಹನಗಳು, ಸಾರ್ವಜನಿಕರು ದಾವಣಗೆರೆ ಜಿಲ್ಲೆಯನ್ನು ಪ್ರವೇಶಿಸದಂತೆ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗುತ್ತಿದೆ.
ಹರಿಹರ ತಾಲ್ಲೂಕಿಗೆ ಪ್ರವೇಶಿಸಿದಂತೆ ಬೈಪಾಸ್ ರಸ್ತೆಯ ತುಂಗಭದ್ರಾ ಸೇತುವೆಯ ಸಮೀಪ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಶಿವಪ್ರಸಾದ್.ಎಂ ಹೇಳಿದರು.
ನಗರಸಭೆ ವತಿಯಿಂದ ಸುಮಾರು ನೂರಕ್ಕೂ ಹೆಚ್ಚು ಹೊಸದಾಗಿ ಬ್ಯಾರಿಕೇಡ್ ಗಳನ್ನು ತಯಾರಿಸಿ ಅವುಗಳನ್ನು ಬೈಪಾಸ್ ರಸ್ತೆ ಮತ್ತು ಇತರ ಭಾಗಗಳಲ್ಲಿ ಅಳವಡಿಸುವುದಕ್ಕೆ ಮುಂದಾದ ಸಂದರ್ಭದಲ್ಲಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ವೈರಸ್ ಶಂಕಿತರ ಪ್ರಮಾಣ ಹೆಚ್ಚಾಗುತ್ತಿದೆ ಎಂದರು.
ಇದರ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆ ಇತರ ಇಲಾಖೆಯವರು ಸಾಕಷ್ಟು ಜಾಗೃತಿಗಳನ್ನು ನೀಡಿದರೂ ಸಹ ನಾಗರಿಕರು, ಬೈಕ್ ಸವಾರರು ಇತರ ವಾಹನ ಸವಾರರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾಗರಿಕರು ಮಹಾಮಾರಿ ಕೊರೊನಾ ವೈರಸ್ ಭೀತಿ ಇಲ್ಲದೇ ದಿನಸಿ ಅಂಗಡಿಗಳು ತರಕಾರಿ ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ನಿಂತುಕೊಂಡು ಖರೀದಿಯಲ್ಲಿ ತೊಡಗಿದರೆ, ವೈರಸ್ ಮುಕ್ತ ಹೇಗೆ ಸಾಧ್ಯವಾಗುತ್ತದೆ ಎಂದರು.
ಹರಿಹರ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪೊಲೀಸ್ ಇಲಾಖೆ ವತಿಯಿಂದ ಧ್ವನಿ ವರ್ಧಕದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುತ್ತಾ ಬಂದಿರುತ್ತೇವೆ. ಪ್ರತಿಯೊಬ್ಬ ಸಾರ್ವಜನಿಕರು, ವಾಹನ ಸವಾರರು ಅನಾವಶ್ಯಕವಾಗಿ ರಸ್ತೆಗಿಳಿಯದೇ ವೈರಸ್ ನ್ನು ಮುಕ್ತಗೊಳಿಸುವುದಕ್ಕೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಹೇಳಿದರು.
ಹಾವೇರಿ, ರಾಣೆಬೆನ್ನೂರು, ಕುಮಾರಪಟ್ಟಣಂ, ನಲವಾಗಲ, ಕವಲೆತ್ತು ಇತರೆ ಭಾಗಗಳಿಂದ ಸಾಕಷ್ಟು ಬೈಕ್ ಮತ್ತು ವಾಹನ ಸವಾರರು ಸಾರ್ವಜನಿಕರು ಹರಿಹರ ಮಾರ್ಗಕ್ಕೆ ಸಂಚರಿಸುತ್ತಿದ್ದವು. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂಚಾರ ಮಾರ್ಗಗಳ ಬಂದ್ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಡಿವೈಎಸ್ಪಿ ಮಂಜುನಾಥ್ ಗಂಗಲ್, ಹರಿಹರ ಗ್ರಾಮಾಂತರ ಪಿಎಸ್ಐ ಡಿ.ರವಿಕುಮಾರ, ಪೊಲೀಸ್ ಪೇದೆ ನಿಂಗರಾಜ್, ಶಿವರಾಜ್ ಇದ್ದರು.