ಈಶ್ವರಪ್ಪ ಹೇಳಿಕೆಗೆ ಸಚಿವ ಭೈರತಿ ಬಸವರಾಜ ಅಸಮಾಧಾನ!
ದಾವಣಗೆರೆ, ಡಿಸೆಂಬರ್ 02; "ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈಗ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. 2023ರ ಚುನಾವಣೆಯ ಬಳಿಕ ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ಧರಿದ್ದೇವೆ" ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹೇಳಿದರು.
ದಾವಣಗೆರೆಯಲ್ಲಿ ಗುರುವಾರ ಮಾತನಾಡಿದ ಅವರು, ಸಚಿವ ಕೆ. ಎಸ್. ಈಶ್ವರಪ್ಪ ಮುರುಗೇಶ್ ನಿರಾಣಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು. "ಸಿಎಂ ಬದಲಾವಣೆ ಎನ್ನುವ ವಿಚಾರವೇ ಅಸಂಬದ್ಧ. ಈ ರೀತಿಯ ಹೇಳಿಕೆ ಕೊಡುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಪಕ್ಷದಲ್ಲಿ ಗೊಂದಲ ಸೃಷ್ಟಿಸುವಂತೆ ಯಾರೂ ನಡೆದುಕೊಳ್ಳಬಾರದು" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗುತ್ತಾರೆ: ಈಶ್ವರಪ್ಪ ಭವಿಷ್ಯ
"ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ ರೂಪಿಸಿದ್ದ ಬಗ್ಗೆ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ. ಯಾರೇ ತಪ್ಪು ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಘಟನೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಗಮನಕ್ಕೆ ತಂದಿದ್ದಾರೆ. ತನಿಖೆಗೆ ಆದೇಶಿಸಲಾಗಿದೆ, ಯಾರು ಈ ರೀತಿಯ ಹೇಯ ಕೃತ್ಯ ಮಾಡಲು ಹೊರಟಿದ್ದರೂ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ರೀತಿಯಾದ ಕೃತ್ಯಗಳು ನಿಜಕ್ಕೂ ಖಂಡನೀಯ" ಎಂದರು.
ತಾವು ಬೃಹತ್ ಕೈಗಾರಿಕಾ ಸಚಿವರಾಗಿದ್ದು ಹೇಗೆ? ಗುಟ್ಟು ಬಿಚ್ಚಿಟ್ಟ ಮುರುಗೇಶ್ ನಿರಾಣಿ!
ಸ್ಪರ್ಧೆಯಿಂದ ಹಿನ್ನೆಡೆ ಆಗದು; "ಬೆಳಗಾವಿಯಲ್ಲಿ ಪಕ್ಷೇತರರಾಗಿ ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಬಿಜೆಪಿಗೆ ಹಿನ್ನೆಡೆ ಆಗಲ್ಲ. ಅಲ್ಲಿ ಬಿಜೆಪಿ ಶಾಸಕರಿದ್ದಾರೆ, ಪ್ರಜ್ಞಾವಂತ ಮತದಾರರಿದ್ದಾರೆ. ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಪಕ್ಷಕ್ಕೇನೂ ಹಾನಿಯಾಗುವುದಿಲ್ಲ. ನಮಗೆ ಮೊದಲ ಪ್ರಾಶಸ್ತ್ಯ ಮತವನ್ನು ನೀಡುವಂತೆ ಮಾಡಲು ಶ್ರಮಿಸುವುದಾಗಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಎರಡನೇ ಪ್ರಾಶಸ್ತ್ಯ ಮತವನ್ನು ಏನು ಮಾಡುತ್ತಾರೋ ಗೊತ್ತಿಲ್ಲ. ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ" ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಬೂಸ್ಟರ್ ಡೋಸ್; ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
"ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಹೆಚ್ಚು ಮಾತನಾಡಲು ಹೋಗಲ್ಲ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಜಿ. ಟಿ. ದೇವೇಗೌಡ ಕಾರ್ಯಕ್ರಮ ನಡೆಸಿದ್ದಾರೆ. ಜಿಟಿಡಿ ಕಾಂಗ್ರೆಸ್ ಸೇರುತ್ತಾರೋ? ಇಲ್ಲವೋ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡೋಣ. ಎ. ಮಂಜು ಬಿಜೆಪಿ ಪಕ್ಷ ಬಿಟ್ಟರೆ ಪಕ್ಷಕ್ಕೆ ಬೇಕಾದಷ್ಟು ಮಂದಿ ಇದ್ದಾರೆ. ಮೊದಲು ಕಾಂಗ್ರೆಸ್ನಲ್ಲಿದ್ದರು, ಬಳಿಕ ಬಿಜೆಪಿಗೆ ಬಂದರು. ಅಧಿಕಾರಕ್ಕೋಸ್ಕರ ಪಕ್ಷ ಬದಲಾವಣೆ ಮಾಡಿದ್ದಾರೆ. ಅಧಿಕಾರಕ್ಕೋಸ್ಕರ ಪಕ್ಷ ಬಿಟ್ಟು ಹೋಗುವುದು ಉತ್ತಮವಾದ ಬೆಳವಣಿಗೆ ಅಲ್ಲ" ಎಂದು ತಿಳಿಸಿದರು.
ಗೆಲುವು ನಮ್ಮದೇ; "ಚಿತ್ರದುರ್ಗ- ದಾವಣಗೆರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ ನವೀನ್ ಕಣಕ್ಕಿಳಿದಿದ್ದಾರೆ. ಎರಡೂ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನವರು ಬಿಜೆಪಿ ಸದಸ್ಯರನ್ನು ಹೊಂದಿದೆ. ಚಿತ್ರದುರ್ಗದಲ್ಲಿ ಬಿಜೆಪಿ ಐವರು ಶಾಸಕರಿದ್ದಾರೆ. ಅಲ್ಲಿಯೂ ಉತ್ತಮ ವಾತಾವರಣ ಇದೆ. ನವೀನ್ ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸ ಇದೆ. ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿ ಸುಮ್ಮನೆ ಕುಳಿತಿಲ್ಲ. ಲೋಕಸಭಾ ಸದಸ್ಯರು, ಶಾಸಕರು, ಬಿಜೆಪಿ ಮುಖಂಡರು ಸೇರಿದಂತೆ ನಾವೆಲ್ಲರೂ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ವಿರೋಧ ಪಕ್ಷದವರು ಬೆಂಗಳೂರಿನ ಸೋಮಶೇಖರ್ ಅವರನ್ನು ಕಣಕ್ಕಿಳಿಸಿದ್ದಾರೆ. ಸ್ಥಳೀಯವಾಗಿ ಇರುವವರು ನವೀನ್. ಕಳೆದ ಎರಡು ಬಾರಿ ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದರು" ಎಂದು ಭೈರತಿ ಬಸವರಾಜ ಹೇಳಿದರು.
ರವಿಕುಮಾರ್ ಆಕ್ರೋಶ; "ಕಾಂಗ್ರೆಸ್ ಬೀದಿಕಾಳಗ ನಡೆಸುವ ಪಾರ್ಟಿ. ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಲಪಾಡ್ ಅಧ್ಯಕ್ಷರನ್ನಾಗಿಸಲು ಕಾಳಗವನ್ನೇ ನಡೆಸಿದರು. ಇನ್ನು ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ಬೆಂಕಿ ಹಚ್ಚಿದಾಗ ಕಾಂಗ್ರೆಸ್ನವರು ಖಂಡಿಸಿದ್ರಾ?. ದಲಿತರಿಗೆ ಮಾಡಿದ ಅನ್ಯಾಯ ಅಲ್ಲ. ಸ್ವಲ್ಪ ಯಾಮಾರಿದ್ದರೂ ಶ್ರೀನಿವಾಸ್ ಹತ್ಯೆಯಾಗಿ ಬಿಡುತ್ತಿತ್ತು. ವಿಶ್ವನಾಥ್ ಹತ್ಯೆ ಮಾಡಲು 5 ಕೋಟಿ ರೂಪಾಯಿ ಸುಫಾರಿ ಕೊಟ್ಟಿದ್ದಾರೆ ಎಂಬ ಆರೋಪ ಕಾಂಗ್ರೆಸ್ ಮುಖಂಡನ ಮೇಲಿದೆ. ಇಂತವರನ್ನು ಡಿ. ಕೆ. ಶಿವಕುಮಾರ್ ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಕಾಂಗ್ರೆಸ್ ಗೂಂಡಾ ಪಾರ್ಟಿ ಅಲ್ಲವೇ?" ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಯಥಾ ರಾಜಾ ತಥಾ ಪ್ರಜಾ ಎಂಬಂತೆ ಕಾಂಗ್ರೆಸ್ನವರು ಇದ್ದಾರೆ. ಬೀದಿ ಬೀದಿಗಳಲ್ಲಿ ಹೊಡೆದಾಡುತ್ತಿದ್ದಾರೆ. ಬೆಂಕಿ ಹಚ್ಚಿದವರು ಹಾಗೂ ಸ್ಕೆಚ್ ಹಾಕಿದವರನ್ನು ಸಮರ್ಥಿಸಿಕೊಳ್ಳುವುದು ಕಾಂಗ್ರೆಸ್ನ ಸಂಸ್ಕೃತಿನಾ?, ಜನರು ಇಂತವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ" ಎಂದರು.
"ಜೆಡಿಎಸ್ಗೆ ನಾವು ಬೆಂಬಲ ಕೇಳಿದ್ದೇವೆ. 19 ಕಡೆಗಳಲ್ಲಿ ಅವರ ಅಭ್ಯರ್ಥಿಗಳಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿರುವ ಜೆಡಿಎಸ್ನ ಮತಗಳನ್ನು ನೀಡುವ ಮೂಲಕ ಸಹಾಯ ಮಾಡುವಂತೆ ಕೇಳಿದ್ದೇವೆ. ಅದರಲ್ಲಿ ತಪ್ಪೇನಿದೆ?" ಜೆಡಿಎಸ್ ಸ್ಪರ್ಧೆ ಮಾಡಿದ್ದರೆ ತ್ರಿಕೋನ ಸ್ಪರ್ಧೆ ಏರ್ಪಡುತಿತ್ತು. ನಾವು 15 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಕಾಂಗ್ರೆಸ್ ಧೂಳೀಪಟವಾಗಲಿದೆ" ಎಂದು ಭವಿಷ್ಯ ನುಡಿದರು.
"ಕಾಂಗ್ರೆಸ್ ಅನ್ನು ಹುಡುಕುವಂತಾಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಜಿ. ಪರಮೇಶ್ವರ ಇದ್ದಾರೆ ಎಂಬ ಕಾರಣಕ್ಕೆ ರಾಜ್ಯದಲ್ಲಿ ಸ್ವಲ್ಪ ಕಾಂಗ್ರೆಸ್ಗೆ ಹೆಸರಿದೆ. ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ? ಎಂದು ಹುಡುಕುವ ಪರಿಸ್ಥಿತಿ ಇದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ರಾಹುಲ್ ಗಾಂಧಿ ನೇತೃತ್ವದಲ್ಲಿ ಮುಂದುವರಿದರೆ ಕಾಂಗ್ರೆಸ್ ಸಂಪೂರ್ಣವಾಗಿ ಮುಳುಗುತ್ತದೆ" ಎಂದು ರವಿ ಕುಮಾರ್ ತಿಳಿಸಿದರು.