ಅಬ್ಬಾ, ನೀರು ತುಂಬಿದ ಸೇತುವೆ ಮೇಲೇ ಬಸ್ ಸಂಚಾರ
ದಾವಣಗೆರೆ, ಆಗಸ್ಟ್ 9: ಮಲೆನಾಡಿನ ಭಾಗಗಳಲ್ಲಿ ಭಾರೀ ಮಳೆಯಾಗಿರುವುದರಿಂದ ದಾವಣಗೆರೆಯ ಪಕ್ಕದಲ್ಲಿರುವ ತುಂಗಾಭದ್ರ ನದಿಯ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಉಕ್ಕಿ ಹರಿಯುತ್ತಿದೆ.
ಹೊಳೆ ಉಕ್ಕಿ ಹರಿಯುತ್ತಿರುವುದರಿಂದ ನದಿಯ ತಟದಲ್ಲಿರುವ ಹಳ್ಳಿಗಳು ಸಂಪೂರ್ಣ ಜಲಾವೃತವಾಗುತ್ತಿದ್ದು, ಕೆಲ ಗ್ರಾಮಗಳ ಸಂಪರ್ಕವೇ ಕಡಿತಗೊಂಡಿದೆ. ಹಾಗೆಯೇ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಕಡತಿ, ಹಲವಾಗಿಲು ಗ್ರಾಮಗಳ ಸಂಪರ್ಕ ಸೇತುವೆಯೂ ಮುಳುಗಿ ಹೋಗುವ ಹಂತದಲ್ಲಿದೆ. ಸೇತುವೆ ಮುಕ್ಕಾಲು ಭಾಗ ನೀರು ಆವರಿಸಿದ್ದು, ನೋಡುತ್ತಿದ್ದರೆ, ಕೆಲವೇ ಕ್ಷಣಗಳಲ್ಲಿ ಮುಳುಗಿಬಿಡಬಹುದು ಎನಿಸುತ್ತದೆ.
ಆದರೆ ಹೀಗೆ ನೀರು ತುಂಬಿ ಹರಿಯುತ್ತಿರುವುದನ್ನೂ ಲೆಕ್ಕಿಸದ ಕೆಎಸ್ಆರ್ ಟಿಸಿ ಬಸ್ ಚಾಲಕ ಸೇತುವೆ ಮೇಲೆ ಬಸ್ ಚಾಲನೆ ಮಾಡಿ ದಡ ಸೇರಿದ್ದಾರೆ. ನೋಡಲು ಅಚ್ಚರಿ ಎನಿಸಿದ್ದರೂ ಇದು ಅಪಾಯದ ಚಾಲನೆ ಎಂಬುದನ್ನು ತಳ್ಳಿಹಾಕುವಂತಿಲ್ಲ.
ನೀರು ಹರಿಯುತ್ತಿರುವ ನಡುವೆಯೇ ಬಸ್ ಚಲಾಯಿಸಿದ್ದನ್ನು ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಆದರೆ ಬಸ್ ತುಂಬಾ ಪ್ರಯಾಣಿಕರಿದ್ದು, ಸ್ವಲ್ಪ ಎಡವಟ್ಟಾಗಿದ್ದರೂ ಎಲ್ಲರ ಜೀವವೇ ಹೋಗುವ ಅಪಾಯವಿತ್ತು.