ಮತ್ತೊಮ್ಮೆ ಗುಮ್ಮಿದ ಹೋರಿ; ಹೊನ್ನಾಳಿ ರೇಣುಕಾಚಾರ್ಯಗೆ ಹೋರಿ ಕಂಟಕ!
ದಾವಣಗೆರೆ, ನವೆಂಬರ್ 16: ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯಗೆ ಮತ್ತೊಮ್ಮೆ ಹೋರಿಯೊಂದು ಗುಮ್ಮಲು ಮುಂದಾಗಿದ್ದು, ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ.
ಹೊನ್ನಾಳಿ ಶಾಸಕ ರೇಣುಕಾಚಾರ್ಯಗೆ ಗುಮ್ಮಿದ ಗೂಳಿ
ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಕತ್ತಿಗೆ ಗ್ರಾಮದಲ್ಲಿ ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಹೋರಿ ಬೆದರಿಸುವ ಹಬ್ಬ ಆಯೋಜಿಸಲಾಗಿತ್ತು. ರೇಣುಕಾಚಾರ್ಯ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಸಂದರ್ಭ ಹೋರಿಯೊಂದರ ಹತ್ತಿರ ಹೋಗಿ ಮುಟ್ಟಲು ಮುಂದಾಗಿದ್ದಾರೆ. ರೇಣುಕಾಚಾರ್ಯ ಅವರನ್ನು ನೋಡುತ್ತಿದ್ದಂತೆ ಹೋರಿ ಮೇಲೆರಗಿ ಗುಮ್ಮಲು ಮುಂದಾಗಿದೆ.
ಜೊತೆಗಿದ್ದವರು ತಕ್ಷಣವೇ ಅವರನ್ನು ಹಿಂದಕ್ಕೆ ಎಳೆದುಕೊಂಡಿದ್ದಾರೆ. ಹೀಗಾಗಿ ಸ್ವಲ್ಪದರಲ್ಲೇ ಹೋರಿ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಸರಿಯಾಗಿ ಹದಿನೈದು ದಿನಗಳ ಹಿಂದೆಯೂ ಇಂಥದ್ದೇ ಘಟನೆ ನಡೆದಿತ್ತು. ಜಿಲ್ಲೆಯ ನ್ಯಾಮತಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಹಬ್ಬದಲ್ಲಿ ಏಕಾಏಕಿ ಗೂಳಿಯೊಂದು ಓಡಿಬಂದು ಶಾಸಕ ರೇಣುಕಾಚಾರ್ಯ ಅವರ ಬದಿಗೆ ಗುದ್ದಿತ್ತು. ಗೂಳಿ ಬಂದ ರಭಸಕ್ಕೆ ರೇಣುಕಾಚಾರ್ಯ ಕೆಳಗೆ ಬಿದ್ದಿದ್ದರು. ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.