ಮಗುವಿನ ಶಸ್ತ್ರ ಚಿಕಿತ್ಸೆಗೆ ಕೊಟ್ಟಿದ್ದ ಹಣವನ್ನು ಲಪಟಾಯಿಸಿದ ಮಾವಂದಿರು
ದಾವಣಗೆರೆ, ಡಿಸೆಂಬರ್ 25: ಮಗುವಿನ ಶಸ್ತ್ರ ಚಿಕಿತ್ಸೆಗೆ ಇಟ್ಟಿದ್ದ ಹಣವನ್ನು ತವರು ಮನೆಯವರು ಲಪಟಾಯಿಸಿದ್ದಾರೆ ಎಂದು ಮಹಿಳೆಯೊಬ್ಬಳು ಆರೋಪ ಮಾಡುತ್ತಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದರೂ ನ್ಯಾಯ ಸಿಗದೆ ಗೋಳಾಡುತ್ತಿದ್ದಾಳೆ.
ಮಗಳ ಶಸ್ತ್ರ ಚಿಕಿತ್ಸೆಗೆ ಕೂಡಿಟ್ಟ ಹಣವನ್ನು ಕಳೆದುಕೊಂಡು ಮುಂದೆ ಹೇಗೆ ಎಂದು ಗೋಳಾಡುತ್ತಿರುವ ತಾಯಿ ಒಂದು ಕಡೆಯಾದರೆ, ಪ್ಲೀಸ್ ಮಾವ ನಮ್ಮ ಹಣ ಕೊಡಿ, ನನಗೆ ಬದುಕಬೇಕು ಎನ್ನುವ ಆಸೆ ಇದೆ ಎಂದು ಮುದ್ದು ಕಂದಮ್ಮ ಭೂಮಿಕ (11) ಕಣ್ಣೀರಿಡುತ್ತಿದ್ದು, ಈ ಕರುಳು ಹಿಂಡುವ ದೃಶ್ಯ ಕಂಡುಬಂದಿದ್ದು ದಾವಣಗೆರೆಯಲ್ಲಿ.
ಹೀಗೆ ಕಣ್ಣೀರಿಡುತ್ತಿರುವ ಮಹಿಳೆಯ ಹೆಸರು ಗೀತಾ, ಹರಪ್ಪನಹಳ್ಳಿ ತಾಲ್ಲೂಕಿನ ನಂದ್ಯಾಲ ಗ್ರಾಮದ ಈಕೆ ಕಳೆದ ಎರಡು ವರ್ಷಗಳ ಹಿಂದೆ ಗಂಡನ ಜೊತೆ ಮನಸ್ತಾಪ ಉಂಟಾಗಿ, ಗಂಡನ ಮನೆ ಬಿಟ್ಟು ದಾವಣಗೆರೆಯ ಮಹಾವೀರ ನಗರದಲ್ಲಿರುವ ತವರು ಸೇರಿದ್ದಲ್ಲದೆ ವಿಚ್ಚೇದನಕ್ಕೆ ಕೂಡ ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದಳು.
ಮಗಳ ಚಿಕಿತ್ಸೆಗೆ ನಾಲ್ಕುವರೆ ಲಕ್ಷ ರುಪಾಯಿ
ಈ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಚಿಕ್ಕ ಮಗು ಭೂಮಿಕಾಗೆ ಹುಟ್ಟಿದಾನಿಂದ ಹೃದಯದಲ್ಲಿ ಹೋಲ್ ಇದ್ದು, ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಇದರಿಂದ ಮಗಳ ಚಿಕಿತ್ಸೆಗೆ ನಾಲ್ಕುವರೆ ಲಕ್ಷ ರುಪಾಯಿಯನ್ನು ಗೀತಾ ಕೂಡಿಸಿಟ್ಟಿದ್ದಳು. ಇದನ್ನು ಅಣ್ಣಂದಿರ ಕೈಗೆ ಕೊಟ್ಟಿದ್ದಲ್ಲದೆ ಆಕೆಯ ಬಳಿ ಇರುವ ಒಡವೆಗಳನ್ನು ಕೂಡಾ ಕೊಟ್ಟಿದ್ದಳು.
ನಿವೃತ್ತ ಸರ್ಕಾರಿ ಅಧಿಕಾರಿ ಚಿನ್ನಾಭರಣ ದೋಚಿದ ನಕಲಿ ಪೊಲೀಸ್!
ಯಾವ ಹಣ ಕೊಟ್ಟಿಲ್ಲ ಎಂದು ದಬಾಯಿಸಿದರು
ಆದರೆ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದ ಗಂಡ, ತಪ್ಪು ಅರಿತುಕೊಂಡು ಮಕ್ಕಳ ಜೊತೆ ಮನೆಗೆ ಬಾ ಒಂದಾಗಿ ಬಾಳೋಣ ಎಂದು ಹೇಳಿದ್ದಾನೆ. ಇದರಿಂದ ಸಂತೋಷಗೊಂಡಿದ್ದ ಮಹಿಳೆ, ತನ್ನ ಅಣ್ಣಂದಿರಿಗೆ ಮಗಳ ಶಸ್ತ್ರಚಿಕಿತ್ಸೆಗೆಂದು ನೀಡಿದ್ದ ಹಣವನ್ನು ಕೇಳಿದರೆ, ಯಾವ ಹಣ ಕೊಟ್ಟಿಲ್ಲ ಎಂದು ದಬಾಯಿಸಿ ಮನೆಯಿಂದ ಹೊರ ಹಾಕಿದ್ದಾರೆ. ಇದರಿಂದ ದಿಕ್ಕುತೋಚದ ಸ್ಥಿತಿಯಲ್ಲಿ ಮಹಿಳೆ ಬೀದಿಗಿಳಿದು ನ್ಯಾಯಕ್ಕಾಗಿ ಪರದಾಡುತ್ತಿದ್ದಾಳೆ.
ಅಲ್ಲಿಂದಿಲ್ಲಿಗೆ ಅಲೆಸುತ್ತಿರುವ ಪೊಲೀಸರು
ಇನ್ನು ತನ್ನ ಅಣ್ಣಂದಿರಿಗೆ ನೀಡಿದ ಹಣವನ್ನು ಕೇಳಿದರೆ ಹೊಡೆದು ಹೊರಹಾಕಿದ್ದು, ತಾನು ತನ್ನ ಮಗಳ ಚಿಕಿತ್ಸೆಗಾಗಿ ಕೂಡಿಸಿಟ್ಟ ಹಣವನ್ನು ತವರು ಮನೆಯವರು ಲಪಟಾಯಿಸಿದ್ದಾರೆ. ಅಲ್ಲದೆ ಹಡಗಲಿಯಲ್ಲಿ ಎರಡನೇ ಅಣ್ಣನ ಮದುವೆಗೆ ಹೋದಾಗ ಕೂಡ ಆಕೆಯ ಮೇಲೆ ಹಲ್ಲೆನಡೆಸಿದ್ದಾರೆ. ದಾವಣಗೆರೆಯ ಅಜಾದ್ ನಗರ ಹಾಗೂ ಮಹಿಳಾ ಠಾಣೆಯಲ್ಲಿ ದೂರು ನೀಡಿದರೆ, ಹಡಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ನಡೆದಿದ್ದು, ಅಲ್ಲಿ ಹೋಗಿ ದೂರು ನೀಡಿ ಎನ್ನುತ್ತಿದ್ದಾರೆ. ಹಡಗಲಿಗೆ ಹೋದರೆ ದಾವಣಗೆರೆಯಲ್ಲಿ ದೂರು ನೀಡಿ ಎಂದು ವಾಪಸ್ಸು ಕಳಿಸುತ್ತಿದ್ದಾರೆ. ಬರಿಗಾಲಿನಲ್ಲಿ ಹುಚ್ಚಿಯಂತೆ ಮಕ್ಕಳನ್ನು ಜೊತೆಗೆ ಕರೆದುಕೊಂಡು ಪೊಲೀಸ್ ಠಾಣೆಗೆ ತಿರುಗಾಡಿದರೂ ನ್ಯಾಯ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
Recommended Video
ಹಣ ಕೇಳಲು ಹೋದರೆ ಹಲ್ಲೆ
ಅಲ್ಲದೆ ಚಿಕ್ಕ ಮಗು ಭೂಮಿಕಾ ಓದಿ ದೊಡ್ಡ ಕೆಲಸಕ್ಕೆ ಹೋಗಿ ತನ್ನ ತಾಯಿಯನ್ನು ನೋಡಿಕೊಳ್ಳಬೇಕು ಎನ್ನುವ ಕನಸು ಕಂಡಿದ್ದು, ಈಗ ಶಸ್ತ್ರಚಿಕಿತ್ಸೆಗೆ ಹಣವಿಲ್ಲದೆ ಶಸ್ತ್ರಚಿಕಿತ್ಸೆಯಾಗುವುದಿಲ್ಲ. ತಾನು ಬದುಕುವುದು ಕೂಡ ಡೌಟು ಎಂದು ಮಗು ಕಣ್ಣೀರಿಡುತ್ತಿದೆ.
ಒಟ್ಟಾರೆಯಾಗಿ ಈ ತಾಯಿ ತನ್ನ ತವರು ಮನೆಯವರನ್ನು ಕುರುಡಾಗಿ ನಂಬಿ, ತನ್ನಲ್ಲಿದ್ದ ಹಣವನ್ನು ನೀಡಿ ಬೀದಿಗೆ ಬಿದ್ದಿದ್ದು, ಹಣ ಕೇಳಲು ಹೋದರೆ ಹಲ್ಲೆ ನಡೆಸುತ್ತಿದ್ದಾರೆ. ಇತ್ತ ಹಣವಿಲ್ಲದೆ, ಚಿಕಿತ್ಸೆಯೂ ಸಿಗದೆ ಪುಟ್ಟ ಕಂದಮ್ಮ ಕಣ್ಣೀರಿಡುತ್ತಿದ್ದಾಳೆ. ಇನ್ನಾದರೂ ಈ ತಾಯಿಗೆ ನ್ಯಾಯ ಸಿಗುತ್ತಾ ಎಂದು ಕಾದು ನೋಡಬೇಕಿದೆ.