ಟಿವಿಯಲ್ಲಿ ಬರುವುದಕ್ಕಾಗಿ ಬಿಜೆಪಿ ಯುವ ಮೋರ್ಚಾದವರ ರಾಜೀನಾಮೆ ನಾಟಕ: ಸಿದ್ದೇಶ್ವರ
ದಾವಣಗೆರೆ, ಜುಲೈ, 30: ಪ್ರವಿಣ್ ಹತ್ಯೆ ಬೆನ್ನಲ್ಲೇ ರಾಜೀನಾಮೆ ನೀಡುತ್ತಿರುವ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಬಗ್ಗೆ ದಾವಣಗೆರೆಯಲ್ಲಿ ಜಿ.ಎಂ.ಸಿದ್ದೇಶ್ವರ ಮಾತನಾಡಿ, ರಾಜೀನಾಮೆ ಕೊಟ್ಟರೆ ಪಕ್ಷ ಮುಳುಗಲ್ಲ. 11 ಕೋಟಿ ಜನರು ಬಿಜೆಪಿಯಲ್ಲಿದ್ದಾರೆ. ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ನಾನು ಇದ್ದೇನೆ. ರಾಜೀನಾಮೆ ಕೊಟ್ಟ ಮಾತ್ರಕ್ಕೆ ಅದು ಸ್ವೀಕೃತ ಆಗಲ್ಲ ಎಂದರು.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಸರ್ಕಾರ ಕ್ರಮ ಕೈಗೊಂಡಿದೆ. ಈ ವಿಚಾರದಲ್ಲಿ ಯುವ ಮೋರ್ಚಾ ಸದಸ್ಯರ ರಾಜೀನಾಮೆ ಪ್ರಶ್ನೆಯೇ ಉದ್ಬವಿಸದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು. ನಮಗ್ಯಾರಿಗೂ ರಾಜೀನಾಮೆ ಕೊಟ್ಟಿಲ್ಲ. ಟಿವಿಯಲ್ಲಿ ಬರುತ್ತೇವೆ ಎನ್ನುವ ಕಾರಣಕ್ಕೆ ಕೆಲವರು ರಾಜೀನಾಮೆ ನಾಟಕ ಆಡಿರಬಹುದು. ಈ ಕಾರಣಕ್ಕೆ ಟಿವಿ ಮುಂದೆ ಹೋಗಿದ್ದಾರೆ ಎಂದರು.
ಕೊಲೆ ಮಾಡಿದವರನ್ನು ಪೊಲೀಸರು ಶೂಟೌಟ್ ಮಾಡಬೇಕು: ಹೊರಟ್ಟಿ
ಸರ್ಕಾರದ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡುವುದಾಗಿ ಹೇಳಿದ್ದ ರೇಣುಕಾಚಾರ್ಯ ಅಭಿಪ್ರಾಯವೇ ಬೇರೆ. ಬೇರೆಯವರು ಹಾಗೆ ಹೇಳಿದ್ದಾರೆ, ನೀವೇನು ಹೇಳುತ್ತೀರಾ ಎಂಬ ಪ್ರಶ್ನೆ ಕೇಳಿ ನಮ್ಮ ನಮ್ಮಲ್ಲೇ ಗುದ್ದಾಟ ಹಚ್ಚುತ್ತೀರಾ? ಇಂಥ ಕೆಲಸ ಮಾಡಬೇಡಿ ಎಂದು ಮಾಧ್ಯಮದವರಿಗೆ ಸಲಹೆ ನೀಡಿದರು.
ಒಂದೆಡೆ ಬಿಜೆಪಿ ಪಕ್ಷದ ಯುವ ಕಾರ್ಯಕರ್ತರು ತಮ್ಮ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದರೆ, ಮತ್ತೊಂದೆಡೆ ಅದನ್ನು ಸರಿಪಡಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಇಂದು ದಾವಣಗೆರೆಯಲ್ಲಿ ರೇಣುಕಾಚಾರ್ಯ ಮಾತನಾಡಿ, ನಾನು ರಾಜೀನಾಮೆ ಕೊಡಲು ಮುಂದಾಗಿದ್ದೆ. ಆದರೆ ಸಿಎಂ, ಪಕ್ಷ ಸಂಘಟನೆ ಬೇಡ ಅಂದಿದ್ದರಿಂದ ನಾನು ಹಿಂದೆ ಸರಿದೆ ಎಂದು ಹೇಳಿದ್ದರು.