ಕಾಂಗ್ರೆಸ್, ಜೆಡಿಎಸ್ ಗೆ ಭೀಮಾಶಂಕರ ಪಾಟೀಲ್ ಸವಾಲು
ದಾವಣಗೆರೆ, ಮೇ 28: ಬೆಂಗಳೂರಿನ ಯಲಹಂಕದಲ್ಲಿನ ಮೇಲ್ಸೇತುವೆಗೆ ಸಾವರ್ಕರ್ ನಾಮಕರಣ ಮಾಡುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ತಾಕತ್ತಿದ್ದರೆ ತಡೆದು ನೋಡಿ ಎಂದು ದಾವಣಗೆರೆಯಲ್ಲಿ ಇಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ಸವಾಲೆಸೆದಿದ್ದಾರೆ.
Recommended Video
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಾವರ್ಕರ್ ಹೆಸರು ಕೇಳಿದರೆ ಏಕೆ ಚೇಳು ಕಡಿದಂತೆ ಆಗುತ್ತೆ? ಈಗಿನ ಕಾಂಗ್ರೆಸ್ ನಾಯಕರಿಗೆ ಸಾವರ್ಕರ್ ಹೆಸರು ಕೇಳಿದ್ರೆ ಇಷ್ಟೊಂದು ಹೆದರಿಕೆ ಆಗುತ್ತೆ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ನಾಯಕರು ಇನ್ನೆಷ್ಟು ಹೆದರಿರಬೇಡ" ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
'ಸಾವರ್ಕರ್' ಮೇಲ್ಸೇತುವೆ: ಕುಮಾರಸ್ವಾಮಿಗೆ ಯಲಹಂಕ ಶಾಸಕ ವಿಶ್ವನಾಥ್ ಸವಾಲು
"ಸಾವರ್ಕರ್ ನಾಮಕರಣದ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬೇಡ. ಬೆಂಗಳೂರು ಮಹಾನಗರ ಪಾಲಿಕೆಯಿಂದ ಅಧಿಕೃತವಾಗಿ ಪರವಾನಗಿ ಪಡೆದು ಫ್ಲೈಓವರ್ ಗೆ ಸಾವರ್ಕರ್ ಹೆಸರು ನಾಮಕರಣ ಮಾಡುತ್ತೇವೆ. ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ" ಎಂದು ತಿರುಗೇಟು ನೀಡಿದರು. "ಬೆಳಗಾವಿ, ಕಲಬುರಗಿ, ವಿಜಯಪುರ ಬಿಜೆಪಿ ಅಧಿಕಾರ ಅವಧಿಯಲ್ಲಿ ಮರುನಾಕರಣಗೊಂಡಿದ್ದು, ಇಂದಿರಾ ಕ್ಯಾಂಟಿನ್ ಗೆ ಅಕ್ಕಮಹಾದೇವಿ ಹೆಸರು ಸೂಚಿಸಿದ್ವಿ. ಸಿದ್ದರಾಮಯ್ಯ ಹಟಕ್ಕೆ ಬಿದ್ದವರಂತೆ ಇಂದಿರಾ ಹೆಸರು ನಾಮಕರಣ ಮಾಡಿದರು. ಆದರೂ ನಾವು ವಿರೋಧಿಸಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ವಿನಾಕಾರಣ ವಿವಾದ ಎಬ್ಬಿಸುತ್ತಿದೆ. ಸ್ವಾತಂತ್ರ ವೀರನಿಗೆ ವಿರೋಧ ಪಕ್ಷಗಳು ಅಪಮಾನ ಮಾಡುತ್ತಿದ್ದಾರೆ" ಎಂದು ಕಿಡಿಕಾರಿದರು.
"ಹೋರಾಟಗಾರರನ್ನು ಅಪಮಾನ ಮಾಡುವ ನೀಚ ಕೆಲಸಕ್ಕೆ ಕಾಂಗ್ರೆಸ್ ಕೈಹಾಕಿದೆ. ಈ ವಿಚಾರಕ್ಕೆ ಬಂದ್ರೆ ತಕ್ಕ ಪಾಠ ಕಲಿಸುತ್ತೇವೆ. ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರು ಇಟ್ಟೇ ಇಡುತ್ತೇವೆ. ತಾಕತ್ತು ಇದ್ದವರು ಎದುರು ಬರಬಹುದು" ಎಂದು ವಿರೋಧ ಪಕ್ಷಗಳಿಗೆ ಸವಾಲು ಹಾಕಿದರು.