ಬಿಜೆಪಿ ಯುವ ಮೋರ್ಚಾದಿಂದ ರೇವಣ್ಣಗೆ ಕ್ಯಾಂಡಲ್ ಸ್ಪೀಡ್ ಪೋಸ್ಟ್
ದಾವಣಗೆರೆ, ಏಪ್ರಿಲ್ 04: ಲಾಕ್ ಡೌನ್ ಇದೆ, ಮೇಣದ ಬತ್ತಿ ತರಲು ಹೋದರೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಾರೆ ಎಂದಿರುವ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ದಾವಣಗೆರೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕ್ಯಾಂಡಲ್ ಬಾಕ್ಸ್ ಅನ್ನು ಸ್ಪೀಡ್ ಪೋಸ್ಟ್ ಮಾಡಿದ್ದಾರೆ.
"ದೀಪ ಹಚ್ಚಿದರೆ ವೈರಸ್ ಗಳು ಶಾಖಕ್ಕೆ ಸಾಯುತ್ತವೆ": ಶಾಸಕ ರಾಮದಾಸ್
ಈ ವೇಳೆ ಮಾತನಾಡಿದ ದಕ್ಷಿಣ ಯುವಮೋರ್ಚಾ ಅಧ್ಯಕ್ಷ ಶಿವನಗೌಡ ಪಾಟೀಲ್, "ಪ್ರಧಾನಿ ನರೇಂದ್ರ ಮೋದಿಯವರ ದೀಪ ಪ್ರಜ್ವಲನ ಕರೆಗೆ ಪರೋಕ್ಷವಾಗಿ ಓಗೊಟ್ಟಿರುವ ಎಚ್.ಡಿ ರೇವಣ್ಣ ಅವರಿಗೆ ನಮ್ಮ ಧನ್ಯವಾದಗಳು. ದೇಶ ವ್ಯಾಪಿ ಲಾಕ್ ಡೌನ್ ಇರುವುದರಿಂದ ಮೇಣದ ಬತ್ತಿ ತರಲು ಹೊರಗೆ ಹೋದರೆ ಲಾಠಿ ಚಾಚ್ ಮಾಡುತ್ತಾರೆ ಎಂದು ಅಸಹಾಯಕತೆ ತೋರಿರುವುದು ನಮಗೆ ಗೊತ್ತಾಯಿತು. ಈ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಯಾಗಲು ರೇವಣ್ಣನಂಥವರ ದೈವ ಭಕ್ತರ ಸಹಕಾರವೂ ಅತ್ಯವಶ್ಯಕ. ಅವರ ಅಸಹಾಯಕತೆ ಮನಗಂಡು ಹೊಳೆನರಸೀಪುರ ಮನೆಯ ವಿಳಾಸಕ್ಕೆ ಮೇಣದ ಬತ್ತಿ ಪ್ಯಾಕೆಟ್ ಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡುತ್ತಿದ್ದೇವೆ" ಎಂದು ವ್ಯಂಗ್ಯ ಮಾಡಿದರು.
"ತಾವು ಕುಟುಂಬ ಪರಿವಾರ ಸಮೇತರಾಗಿ ನಿರ್ಮಲ ಮತ್ತು ನಿಶ್ಚಲ ಮನಸ್ಸಿನಿಂದ ದೇಶಕ್ಕೆ ಬಂದ ಕೊರೊನಾ ಕಂಟಕ ಹೊಡೆದೋಡಿಸಲು ನಮ್ಮ ಪ್ರಧಾನಿಯವರು ಕರೆ ನೀಡಿದ ಈ ದೀಪ ಪ್ರಜ್ವಲನ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ತಮ್ಮ ಪಕ್ಷದ ಯಾವುದಾದರೂ ಶಾಸಕರು ಈ ಅಸಹಾಯಕತೆಯ ಅಳಲು ತೋಡಿಕೊಂಡಿದ್ದರೆ ನಮಗೆ ತಿಳಿಸಿ. ನಾವು ಅವರಿಗೂ ಕಳುಹಿಸಿ ಕೊಡಲು ಸಿದ್ಧರಿದ್ದೇವೆ" ಎಂದಿದ್ದಾರೆ. ಈ ವೇಳೆ ಆನಂದ್ ರಾವ್ ಶಿಂಧೆ, ಶ್ರೀಕಾಂತ್ ನೀಲಗುಂದ, ಟಿಂಕರ್ ಮಂಜಣ್ಣ, ಅಭಿಷೇಕ್ ಪಿ.ಮತ್ತಿತರರು ಉಪಸ್ಥಿತರಿದ್ದರು.