ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪ ಚುನಾವಣೆಗೆ ಬಿಜೆಪಿ ಸಿದ್ಧ: ಕಟೀಲ್
ದಾವಣಗೆರೆ, ಸೆಪ್ಟೆಂಬರ್ 29: ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರ ಹಾಗೂ ತುಮಕೂರು ಜಿಲ್ಲೆ ಶಿರಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಕೇಂದ್ರ ಚುನಾವಣಾ ಆಯೋಗ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದ್ದು, ಎರಡೂ ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿದೆ.
ಈ ಕುರಿತು ದಾವಣಗೆರೆಯಲ್ಲಿ ಇಂದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪ ಚುನಾವಣೆಗೆ ಬಿಜೆಪಿ ಪಕ್ಷದಲ್ಲಿ ಐದಾರು ಜನ ಆಕಾಂಕ್ಷಿಗಳಿದ್ದಾರೆ. ಬೂತ್ ಮಟ್ಟದಲ್ಲಿ ಪೂರ್ವ ತಯಾರಿ ನಡೆದಿದೆ. ಸೂಕ್ತ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಶಿರಾ, ಆರ್ಆರ್ ನಗರ ಉಪ ಚುನಾವಣೆಗೆ ದಿನಾಂಕ ಪ್ರಕಟ!
ದಾವಣಗೆರೆಯ ವಿದ್ಯಾನಗರದಲ್ಲಿರುವ ದಿವಂಗತ ಡಾ.ಮಂಜುನಾಥ ಗೌಡ, ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ""ದಿವಂಗತ ಡಾ.ಮಂಜುನಾಥ ಗೌಡ, 22 ಕೆರೆಗಳ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದರು. ಕೋವಿಡ್ ನಿಂದ ಕಳೆದ ಕೆಲ ದಿನಗಳ ಹಿಂದೆ ಸಾವನ್ನಪ್ಪಿರುವುದು ದುರಂತದ ಸಂಗತಿ'' ಎಂದು ಶೋಕ ವ್ಯಕ್ತಪಡಿಸಿದರು.
ಮಂಜುನಾಥ್ ಗೌಡ ಅವರ ಕುಟುಂಬಕ್ಕೆ ದೇವರು ದುಃಖ ಬರಿಸುವ ಶಕ್ತಿ ನೀಡಲಿ. ಅವರು ಅಗಲಿಕೆಯಿಂದ ಬಿಜೆಪಿ ಪಕ್ಷಕ್ಕೆ ನಷ್ಟವಾಗಿದೆ ಎಂದರು.
ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗದ ಬಗ್ಗೆ ಬೇಳೂರು ಗೋಪಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಳಿನ್ ಕುಮಾರ್ ಕಟೀಲ್, ರಾಜ್ಯದಲ್ಲಿ ಈಗ ಗೋಹತ್ಯೆ ಕಡಿಮೆಯಾಗಿದೆ, ನಿಮ್ಮ ಕಾಲ ಘಟ್ಟದಲ್ಲಿ ಏನಾಗಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಿ ಎಮದು ತಿರುಗೇಟು ನೀಡಿದರು.
ಕರಾವಳಿ ಭಾಗದಲ್ಲಿ ಹಟ್ಟಿಗೆ ನುಗ್ಗಿ ಗೋವು ಕಳುವು ಮಾಡುತ್ತಿದ್ದರು. ಮನೆಗೆ ಬಂದು ತಲವಾರ್ ತೋರಿಸುತ್ತಿದ್ದರು. ಶೃಂಗೇರಿಯಲ್ಲಿ ಪೊಲೀಸ್ ಎನ್ಕೌಂಟರ್ ಮಾಡಿದ್ದು ನೆನಪಿಸಿಕೊಳ್ಳಬೇಕು ಎಂದರು.
ದಿವಂಗತ ಸುರೇಶ ಅಂಗಡಿ ಕುಟುಂಬದವರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ, ಸುರೇಶ್ ಅಂಗಡಿ ಅವರ ಕುಟಂಬದವರು ದುಃಖದಲ್ಲಿ ಇದ್ದಾರೆ. ಮೊದಲು ಅವರ ಕುಟುಂಬದವರಿಗೆ ಸಾಂತ್ವನ ಹೇಳುವ ಕೆಲಸ ಮಾಡಬೇಕು. ನಂತರ ಯೋಚಿಸುತ್ತೇವೆ ಎಂದು ತಿಳಿಸಿದರು.
Recommended Video