ವಿಡಿಯೋ; ಬೆಲೆ ಏರಿಕೆ ಬಗ್ಗೆ ಮತ್ತೆ ಸಂಸದ ಸಿದ್ದೇಶ್ವರ್ ಯಡವಟ್ಟು ಹೇಳಿಕೆ!
ದಾವಣಗೆರೆ, ಸೆಪ್ಟೆಂಬರ್ 27: ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡುವಾಗ ದಾವಣಗೆರೆ ಸಂಸದ, ಬಿಜೆಪಿ ನಾಯಕ ಜಿ. ಎಂ. ಸಿದ್ದೇಶ್ವರ್ ಯಡವಟ್ ಹೇಳಿಕೆ ನೀಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದಾಗ ಸೈಕಲ್ನಲ್ಲಿ ಹೋಗಿ ಎಂದಿದ್ದ ಸಂಸದರು, ತೈಲ ಬೆಲೆ ಏರಿಕೆಯಾದರೆ ಏನ್ ಮಾಡಲು ಆಗುತ್ತೆ? ಎಂಬ ಉಡಾಫೆ ಹೇಳಿಕೆ ಕೊಟ್ಟಿದ್ದರು. ಈಗ ಮತ್ತೆ ಅಂತಹ ಹೇಳಿಕೆ ಕೊಟ್ಟಿದ್ದಾರೆ.
ಸೋಮವಾರ ಮಾತನಾಡಿದ ಸಂಸದರು, "ನಾನು ಚಣ್ಣ ಹಾಕ್ತಿದ್ದಾಗ ಗೋಧಿ, ಜೋಳ ಕ್ವಿಂಟಾಲ್ 30 ರೂಪಾಯಿಗೆ ಸಿಗ್ತಿತ್ತು. ಈಗ ಪ್ಯಾಂಟ್ ಹಾಕ್ಲಿಕ್ಕೆ ಶುರು ಮಾಡಿದ್ಮೇಲೆ 3 ಸಾವಿರ ರೂ. ಆಗೈತೆ. ಕಾಲ ಬದಲಾದ ಹಾಗೆ ರೇಟ್ ಹೆಚ್ಚಾಗುತ್ತದೆ" ಎಂದು ಹೇಳುವ ಮೂಲಕ ನಗೆಪಾಟಲಿಗೆ ಈಡಾಗಿದ್ದಾರೆ.
ದಾವಣಗೆರೆಯ ಜಿಎಂಐಟಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಮತ್ತೊಮ್ಮೆ ನಾಲಗೆ ಹರಿಬಿಟ್ಟಿದ್ದಾರೆ. ಈ ಮೂಲಕ ಪದೇ ಪದೇ ಉಡಾಫೆ ಹೇಳಿಕೆ ನೀಡುವ ಮೂಲಕ ವಿಪಕ್ಷಗಳಿಗೆ ಆಹಾರವಾಗುತ್ತಿದ್ದಾರೆ. ಈ ಹಿಂದೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಬಗ್ಗೆ ಉಡಾಫೆ ಹೇಳಿಕೆ ಕೊಟ್ಟು ಟೀಕೆಗೂ ಗುರಿಯಾಗಿದ್ದರು. ಈಗ ಮತ್ತೆ ಅದೇ ದಾಟಿಯಲ್ಲಿ ಮಾತನಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ದಾವಣಗೆರೆ ವಿಶೇಷ; ಶಾಮನೂರು ಫ್ಯಾಮಿಲಿ v/s ಸಿದ್ದೇಶ್ವರ್ ವಾರ್!
"ಆಗ ಕೂಲಿಗೆ ಬರುವವರಿಗೆ 5 ರೂಪಾಯಿ ನೀಡುತ್ತಿದ್ದೆವು. ಎಂಟಾಣೆಗೆ ಪೆಟ್ರೋಲ್ ಸಿಗ್ತಾ ಇತ್ತು. ಆದ್ರೆ ಕಾಲ ಬದಲಾದಂತೆ ರೇಟ್ ಜಾಸ್ತಿಯಾಗುತ್ತದೆ. ಅದನ್ನೇ ದೊಡ್ಡದಾಗಿ ಮಾಡಿದರೆ ಹೇಗೆ?. ನಾವು ಸಹ ಬೆಲೆ ಏರಿಕೆ ನಿಯಂತ್ರಿಸಲು ತಲೆಕೆಡಿಸಿಕೊಂಡಿದ್ದೇವೆ" ಎಂದು ಮೂವತ್ತು ವರ್ಷಗಳ ಹಿಂದಿಗೂ ಇಂದಿಗೂ ಹೋಲಿಕೆ ಮಾಡುವಾಗ ಯಡವಟ್ ಮಾಡಿಕೊಂಡಿದ್ದಾರೆ.
ಜಿ.ಎಂ ಸಿದ್ದೇಶ್ವರ್ ವಿರುದ್ಧ ಕೆಟ್ಟದಾಗಿ ಮಾತಾಡಿದರೆ ಅಪ್ಪ-ಮಗನ ಹಗರಣ ಬಯಲಿಗೆ
"ಇನ್ನು ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ರೈತ ಸಂಘಟನೆಗಳು ಹೋರಾಟ ಮಾಡುವ ಅವಶ್ಯಕತೆ ಇರಲಿಲ್ಲ. ಬಂದ್ನ ಅಗತ್ಯವೂ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಅನುಕೂಲವಾಗುವಂತ ಹಲವು ಯೋಜನೆಗಳನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಭೀಮಾ, ಕೃಷಿ ಸಮ್ಮಾನ್ ಸೇರಿದಂತೆ ಹಲವು ಯೋಜನೆಗಳು ರೈತರಿಗೆ ಪ್ರಯೋಜನ. ಅದೇ ರೀತಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ನೆರವಾಗುವ ಕೆಲಸ ಮಾಡಿದ್ದಾರೆ. ಆದರೂ ರೈತರು ಹೋರಾಟ ಮಾಡುತ್ತಿರುವುದು ಸರಿಯಲ್ಲ" ಎಂದು ಹೇಳಿದರು.
ಕಾಂಗ್ರೆಸ್ ನವರೇ ಬಿಜೆಪಿಗೆ ಬರ್ತಾರೆ; "ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬುದಾಗಿ ಹೇಳಿರುವುದು ಶುದ್ಧ ಸುಳ್ಳು. ಯಾವುದೇ ವಿಚಾರ ನಮ್ಮಲ್ಲಿ ಇಲ್ಲ. ನಾವೆಲ್ಲರೂ ಸುಭದ್ರವಾಗಿದ್ದೇವೆ. ಮುಂದಿನ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ಎದುರಿಸುತ್ತೇವೆ" ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.
"ಇನ್ನು ಕಾಂಗ್ರೆಸ್ ಕಡೆಯಿಂದಲೇ ಬಿಜೆಪಿಗೆ ಬರಲು ಸಜ್ಜಾಗಿದ್ದಾರೆ. ಬೊಮ್ಮಾಯಿ ಆಡಳಿತ ಮೆಚ್ಚಿ ಬರಲು ಸಿದ್ದರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಯಾರ್ಯಾರು ಬರುತ್ತಾರೆ? ಎಂಬುದನ್ನು ಹೇಳುತ್ತೇನೆ. ಈಗಲೇ ಹೇಳಲು ಆಗದು. ಕಾಂಗ್ರೆಸ್ನ ಬಹಳಷ್ಟು ಸದಸ್ಯರು ತುದಿಗಾಲ ಮೇಲೆ ನಿಂತಿರುವುದಂತೂ ಸತ್ಯ" ಎಂದರು.
Recommended Video
"ಚುನಾವಣೆ ಬರಲಿ, ಯಾರ್ಯಾರು ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬರುತ್ತಾರೆ? ಎಂಬುದನ್ನು ಪರದೆ ಮೇಲೆ ನೀವೇ ನೋಡ್ತೀರಿ. ಯಾರ್ಯಾರು ಬರುತ್ತಾರೆ ಎಂದು ಈಗಲೇ ಹೇಳುವುದಿಲ್ಲ. ಸೇರಿಸಿಕೊಳ್ಳುವ ಬಗ್ಗೆ ಈಗಾಗಲೇ ಚರ್ಚೆ ಮಾಡುತ್ತಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ" ಎಂದು ತಿಳಿಸಿದರು.