ತಮ್ಮದೇ ಸರ್ಕಾರದ ಆದೇಶ ಉಲ್ಲಂಘಿಸಿದ ರೇಣುಕಾಚಾರ್ಯ
Recommended Video
ದಾವಣಗೆರೆ, ಜನವರಿ 29: ಬಿಜೆಪಿ ಹಿರಿಯ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ತಮ್ಮದೇ ಸರ್ಕಾರದ ಮಹತ್ವದ ಆದೇಶವನ್ನು ಉಲ್ಲಂಘಿಸಿದ್ದಾರೆ.
ನಿಷೇಧಿತ 'ಸಿಡಿ ಬಂಡಿ' ಆಚರಣೆಗೆ ತಮ್ಮ ಕ್ಷೇತ್ರ ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಅವರು ನಿನ್ನೆ ಚಾಲನೆ ನೀಡಿದ್ದಾರೆ.
ಇತ್ತೀಚೆಗಷ್ಟೆ ರಾಜ್ಯ ಸರ್ಕಾರವು ಮೌಢ್ಯ ಆಚರಣೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಇದರಲ್ಲಿ ಸಿಡಿ ಆಚರಣೆಯೂ ಸೇರಿತ್ತು. ಆದರೆ ಶಾಸಕ ರೇಣುಕಾಚಾರ್ಯ ಅವರು ಸ್ವತಃ ತಾವೇ ಸಿಡಿ ಆಚರಣೆಗೆ ಚಾಲನೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. ಸರ್ಕಾರಕ್ಕೂ ಮುಜುಗರ ತಂದಿದ್ದಾರೆ.
ರೇಣುಕಾಚಾರ್ಯ ಚಾಲನೆ ನೀಡಿದ ಸಿಡಿ ಯಲ್ಲಿ ಕಂಬದ ತುದಿಗೆ ದಲಿತ ಮಹಿಳೆಯರನ್ನು ಕಟ್ಟಲಾಗಿತ್ತು. ಕಳೆದ ಬಾರಿ ಕೊಕ್ಕೆ ಸಿಗಿಸಿ ಮಹಿಳೆಯರನ್ನು ಎತ್ತಲಾಗಿತ್ತು. ಈ ಬಾರಿ ಕಂಬಕ್ಕೆ ಕಟ್ಟಲಾಗಿತ್ತು.
ನಿಷೇಧಿತ ಆಚರಣೆಗೆ ಚಾಲನೆ ನೀಡಿದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕ ರೇಣುಕಾಚಾರ್ಯ, 'ಸಿಡಿ ಆಚರಣೆ ಮೌಢ್ಯವಲ್ಲ, ಇದು ಜನರ ಭಕ್ತಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ಚಾಲನೆ ಕೊಟ್ಟಿಲ್ಲ, ಸಾಮಾನ್ಯ ವ್ಯಕ್ತಿಯಾಗಿ ಚಾಲನೆ ಕೊಟ್ಟಿದ್ದೇನೆ' ಎಂದಿದ್ದಾರೆ.