ದಾವಣಗೆರೆ ಮಹಾನಗರ ಪಾಲಿಕೆ ಉಪ ಚುನಾವಣೆ; ಬಿಜೆಪಿಗೆ ಗೆಲುವು
ದಾವಣಗೆರೆ, ಮೇ 22: ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆಯ 28 ಹಾಗೂ 37ನೇ ವಾರ್ಡ್ನ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. 28ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿ ಜೆ. ಎನ್. ಶ್ರೀನಿವಾಸ್ ಹಾಗೂ 37ನೇ ವಾರ್ಡ್ನ ಶ್ವೇತಾ ಶ್ರೀನಿವಾಸ್ ಗೆಲುವಿನ ನಗೆ ಬೀರಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಹುಲ್ಲುಮನಿ ಗಣೇಶ್ ವಿರುದ್ಧ 681 ಮತಗಳ ಅಂತರದಿಂದ ಗೆದ್ದು ಶ್ರೀನಿವಾಸ್ ಕಮಲ ಅರಳುವಂತೆ ಮಾಡಿದ್ದಾರೆ. ವಾರ್ಡ್ನಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ, ಜನರಿಗೆ ಸ್ಪಂದಿಸಿದ ಬಗೆ, ಬಿಜೆಪಿ ನಾಯಕರ ಸತತ ಪರಿಶ್ರಮ ಶ್ರೀನಿವಾಸ್ ಗೆಲುವಿಗೆ ಶ್ರೀರಕ್ಷೆಯಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಹುಲ್ಲುಮನಿ ಗಣೇಶ್ ಪರ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಭರ್ಜರಿ ಪ್ರಚಾರ ನಡೆಸಿದರೂ ಪ್ರಯೋಜನವಾಗಿಲ್ಲ. ಶಾಸಕ ಶಾಮನೂರು ಶಿವಶಂಕರಪ್ಪ ಸೊಸೆ ಪ್ರಭಾ ಮಲ್ಲಿಕಾರ್ಜುನ್ ನಡೆಸಿದ ಪ್ರಚಾರ ಸಹ ಫಲ ಕೊಟ್ಟಿಲ್ಲ.
ಪ್ರತಿಷ್ಠೆಯ ಕಣ; ಶ್ವೇತಾ ಶ್ರೀನಿವಾಸ್ ಕಾಂಗ್ರೆಸ್ ಅಭ್ಯರ್ಥಿ ರೇಖಾರಾಣಿ ವಿರುದ್ಧ ಭಾರೀ ಮುನ್ನಡೆಯೊಂದಿಗೆ ಜಯ ಗಳಿಸಿದ್ದು, ಕಮಲ ಪಡೆಯಲ್ಲಿ ಸಂಭ್ರಮ ಮನೆ ಮಾಡಿದ್ದರೆ ಕಾಂಗ್ರೆಸ್ ನಿರಾಸೆ ಅನುಭವಿಸಿದೆ. ಈ ಎರಡು ಉಪಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು. ಎರಡೂ ವಾರ್ಡ್ ಗಳಲ್ಲಿ ಸುಲಭವಾಗಿ ಬಿಜೆಪಿ ಗೆಲ್ಲುವ ಮೂಲಕ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗುವಂತೆ ಮಾಡಿದೆ.
ಕಾಂಗ್ರೆಸ್ನ ಹುಲ್ಲುಮನಿ ಗಣೇಶ್ 1884 ಮತಗಳನ್ನು ಪಡೆದರೆ, ಬಿಜೆಪಿಯ ಶ್ರೀನಿವಾಸ್ 2565 ಮತ ಪಡೆದು 681 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಬಿಜೆಪಿಯ ಶ್ವೇತಾ ಶ್ರೀನಿವಾಸ್ 2096 ಮತ ಪಡೆದರೆ, ಕಾಂಗ್ರೆಸ್ನ ರೇಖಾರಾಣಿ 1303 ಮತ ಪಡೆದರು. ಈ ಉಪ ಚುನಾವಣೆ ಗೆಲ್ಲುವ ಮೂಲಕ ಪಾಲಿಕೆಯಲ್ಲಿ ಬಿಜೆಪಿಯ ಸಂಖ್ಯಾಬಲವೂ ಹೆಚ್ಚಿದೆ.
ಜೆ. ಎನ್. ಶ್ರೀನಿವಾಸ್ ಪ್ರತಿಕ್ರಿಯೆ; "ನಾನು ಬಿಜೆಪಿ ಸೇರ್ಪಡೆಗೊಂಡಾಗಲೇ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೀನು ಗೆಲ್ಲುತ್ತೀಯಾ ಎಂದು ಹಾರೈಸಿದ್ದರು, ಇಂದು ಅದು ಫಲಿಸಿದೆ. ನಮ್ಮ ವಾರ್ಡ್ನ ಉಪಚುನಾವಣೆಯು ಧರ್ಮ, ಅಧರ್ಮ ಎಂಬ ವಿಚಾರದಲ್ಲಿ ನಡೆಯಿತು. ಧರ್ಮ ಗೆದ್ದಿತು, ಅಧರ್ಮ ಸೋತಿತು. ಅಧರ್ಮ ರಾಜಕಾರಣ ಮಾಡಲು ನನಗೆ ಇಷ್ಟವಿಲ್ಲ" ಎಂದು 28ನೇ ವಾರ್ಡ್ನ ವಿಜೇತ ಅಭ್ಯರ್ಥಿ ಜೆ. ಎನ್. ಶ್ರೀನಿವಾಸ್ ಹೇಳಿದರು.
"ನನಗೆ ನಾನೇ ಎಂಬಂತೆ ಚುನಾವಣೆ ಎದುರಿಸಿದ್ದೇನೆ. ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಆನೆ ಬಲ ಬಂದಿದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವಾಗಲೇ ನೀನು ಗೆಲ್ಲುತ್ತೀಯಾ ಎಂದಿದ್ದರು. ಅದು ಸತ್ಯವಾಗಿದೆ. ವಾರ್ಡ್ನ ಜನರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು" ಎಂದರು.