ದಾವಣಗೆರೆ ಮೇಯರ್ ಕಾರಿಗೆ ಸಿನಿಮಾ ಸ್ಟೈಲ್ನಲ್ಲಿ ಬೈಕ್ ಡಿಕ್ಕಿ: ಹೆಲ್ಮೆಟ್ ಉಳಿಸಿತು ಪ್ರಾಣ!
ದಾವಣಗೆರೆ, ಅಕ್ಟೋಬರ್ 25: ದಾವಣಗೆರೆ ನಗರದ ರಿಂಗ್ ರಸ್ತೆ ಬಳಿ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಹಾಗೂ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನ ಪ್ರಾಣ ಉಳಿಸಿದ್ದು ಹೆಲ್ಮೆಟ್. ಹೌದು. ತಲೆಗೆ ಪೂರ್ಣಪ್ರಮಾಣ ಹೆಲ್ಮೆಟ್ ಧರಿಸಿದ್ದರಿಂದ ಕಾರಿಗೆ ಡಿಕ್ಕಿ ಹೊಡೆದು ಹಾರಿ ಬಿದ್ದರೂ ಸಣ್ಣಪುಟ್ಟ ಗಾಯಗಳಿಂದ ಬೈಕ್ ಸವಾರ ಪಾರಾಗಿದ್ದಾನೆ.
ನಗರದ ರಿಂಗ್ ರಸ್ತೆ ಬಳಿ ಮೇಯರ್ ವೀರೇಶ್ ಹಾಗೂ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನಿ ಶಿವಕುಮಾರ್ ಕಾರಿನೊಳಗೆ ಕುಳಿತಿದ್ದರು. ಈ ವೇಳೆ ಕಾರಿಗೆ ಸಿನಿಮೀಯ ರೀತಿಯಲ್ಲಿ ಬೈಕ್ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಬೈಕ್ ಸವಾರನ ಮುಖಕ್ಕೆ ಗಾಯಗಳಾಗಿದ್ದು, ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಆದರೆ, ಮೇಯರ್ ಹಾಗೂ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಅಪಾಯದಿಂದ ಪಾರಾಗಿದ್ದಾರೆ. ಕಾರು ನಿಧಾನಗತಿಯಲ್ಲಿ ಇದ್ದ ಕಾರಣ ಬೈಕ್ ಗುದ್ದಿದ ರಭಸಕ್ಕೆ ಕಾರಿನ ಡೋರ್ ನುಜ್ಜುಗುಜ್ಜಾಗಿದೆ. ಅದು ತೆಗೆಯಲು ಬಾರದಷ್ಟು ಒಳಗೆ ಹೋಗಿದೆ.
ಗಾಯಾಳು ಬೈಕ್ ಸವಾರ ವೃತ್ತಿಯಲ್ಲಿ ಮೆಕ್ಯಾನಿಕ್ ಎಂದು ಹೇಳಲಾಗುತ್ತಿದೆ. ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಿತ್ತೂರು ಚೆನ್ನಮ್ಮ ಜಯಂತಿ ಕಾರ್ಯಕ್ರಮ ಮುಗಿಸಿಕೊಂಡು ವೀರೇಶ್ ಹಾಗೂ ದೇವರಮನಿ ಶಿವಕುಮಾರ್ ಒಂದೇ ಕಾರಿನಲ್ಲಿ ಜಿಲ್ಲಾಸ್ಪತ್ರೆಗೆ ತೆರಳುತ್ತಿದ್ದರು. ಜಿಲ್ಲಾಧಿಕಾರಿಗಳ ಕಚೇರಿಯಿಂದ ಬಂದು ಮೇಯರ್ ಕಾರು ರಿಂಗ್ ರಸ್ತೆಯಲ್ಲಿ ಕ್ರಾಸ್ ಆಗುವ ವೇಳೆ ಬೈಕ್ ಏಕಾಏಕಿ ಬಂದು ಕಾರಿಗೆ ಡಿಕ್ಕಿ ಹೊಡೆದಿತ್ತು. ಸಿನಿಮೀಯ ರೀತಿಯಲ್ಲಿ ಕಾರು ಮೇಲೆ ಜಂಪ್ ಆಗಿ ಕೆಳಗೆ ಸವಾರ ಬಿದ್ದಿದ್ದಾನೆ.
"ಕಾರಿನೊಳಗೆ ನಾನು ಹಾಗೂ ದೂಡಾ ಅಧ್ಯಕ್ಷರು ಕುಳಿತಿದ್ದೆವು. ಈ ವೇಳೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆಯಿತು. ಅದೂ ಸಿನಿಮಾ ಸ್ಟೈಲ್ನಲ್ಲಿ ಕಾರಿನ ಡೋರ್ಗೆ ಡಿಕ್ಕಿಯಾಯಿತು. ಅಪಘಾತದ ರಭಸಕ್ಕೆ ಬೈಕ್ ಸವಾರ ಕಾರಿನ ಮೇಲಿಂದ ಹಾರಿ ಕೆಳಗಡೆ ಬಿದ್ದ. ಅದೃಷ್ಟವಶಾತ್ ಆತನಿಗೆ ಹೆಚ್ಚಿನ ಅನಾಹುತ ಏನೂ ಆಗಲಿಲ್ಲ. ಸಣ್ಣಪುಟ್ಟ ಗಾಯಗಳಾದವು. ಕಾರಿನೊಳಗೆ ಕುಳಿತಿದ್ದ ನನ್ನ ಕೈಗೂ ಗಾಜಿನ ಪುಡಿ ಬಿದ್ದವು. ಆನಂತರ ವೈದ್ಯಾಧಿಕಾರಿ ಬಳಿ ಹೋದಾಗ ಕ್ಲೀನ್ ಮಾಡಿದರು. ಸದ್ಯ ಯಾವುದೇ ಅಪಾಯ ಸಂಭವಿಸಲಿಲ್ಲ. ಬೈಕ್ ಸವಾರ ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸದೇ ಇದ್ದಿದ್ದರೆ ಏನಾಗುತಿತ್ತೋ ಏನೋ?," ಎಂದು ಮಹಾನಗರ ಪಾಲಿಕೆಯ ಮೇಯರ್ ಎಸ್.ಟಿ. ವೀರೇಶ್ ಹೇಳಿದ್ದಾರೆ.
"ಇದೊಂದು ಸಣ್ಣ ಆಕಸ್ಮಿಕ ಘಟನೆ. ದೂಡಾ ಅಧ್ಯಕ್ಷರು ಮತ್ತು ನಾವು ಕಾರಿನಲ್ಲಿ ಸಂಚಾರ ಮಾಡುತ್ತಿದ್ದೆವು. ರಸ್ತೆ ಕ್ರಾಸ್ ಮಾಡುವ ವೇಳೆ ವೇಗವಾಗಿ ಬಂದ ಬೈಕ್ ಸವಾರ ಕಾರಿಗೆ ಡಿಕ್ಕಿ ಹೊಡೆದು ಸಣ್ಣ ಅಪಘಾತ ಆಗಿತ್ತು. ಹೆಚ್ಚಿನ ಹಾನಿ ಮತ್ತು ಗಾಯವಾಗಿಲ್ಲ."
"ಬೈಕ್ ಸವಾರ ಪೂರ್ತಿ ಹೆಲ್ಮೆಟ್ ಹಾಕಿದ್ದ. ಹೆಚ್ಚಿನ ಅನಾಹುತ ಆಗಿಲ್ಲ, ಜೀವಕ್ಕೂ ಅಪಾಯ ಆಗಿಲ್ಲ. ಪೂರ್ಣಪ್ರಮಾಣದ ಹೆಲ್ಮೆಟ್ ಧರಿಸಿದ್ದರಿಂದ ಅನಾಹುತ ತಪ್ಪಿತು. ಎಲ್ಲರೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ. ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಹಾಫ್ ಹೆಲ್ಮೆಟ್ ಧರಿಸಿದರೆ ಅಷ್ಟೇನೂ ಸುರಕ್ಷವಾಗಿರುವುದಿಲ್ಲ. ದಯವಿಟ್ಟು ಬೈಕ್ ಸವಾರರು ಪೂರ್ಣಪ್ರಮಾಣದ ಹೆಲ್ಮೆಟ್ ಧರಿಸಿದರೆ ಪ್ರಾಣಾಪಾಯದಿಂದ ಪಾರಾಗಬಹುದು," ಎಂದು ಮೇಯರ್ ವೀರೇಶ್ ಮನವಿ ಮಾಡಿದ್ದಾರೆ.