ದಾವಣಗೆರೆ ಗ್ರಾಮೀಣ ಜನರಿಗೆ ಲಕ್ಷಾಂತರ ರೂಪಾಯಿ ಬಿಲ್ ಶಾಕ್ ನೀಡಿದ ಬೆಸ್ಕಾಂ...!
ದಾವಣಗೆರೆ, ಜೂ24: ಗ್ರಾಮೀಣ ಪ್ರದೇಶದ ಒಂದು ಸಣ್ಣ ಮನೆಗೆ ಎಷ್ಟು ವಿದ್ಯುತ್ ಬಿಲ್ ಬರಬಹುದು. ಅಬ್ಬಬ್ಬಾ ಅಂದರೆ 500ರೂಪಾಯಿ ಆಗಬಹುದು. ಆದ್ರೆ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ನೀಡುವ ಮೂಲಕ ವಿದ್ಯುತ್ ಬಳಕೆದಾರರಿಗೆ ಬೆಸ್ಕಾಂ ಶಾಕ್ ನೀಡಿದೆ. ಅಲ್ಲದೇ, ಬಿಲ್ ಕಟ್ಟದಿದ್ದರೆ ಸಂಪರ್ಕ ಕಟ್ ಮಾಡಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದ್ದು, ಬೆಸ್ಕಾಂ ಯಡವಟ್ಟಿಗೆ ಜನರು ಕಂಗಾಲಾಗಿದ್ದಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಬೆಸ್ಕಾಂ ಸಿಬ್ಬಂದಿ ಮಾಡಿರುವ ಪ್ರಮಾದಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಒಂದು ಮನೆಯ ವಿದ್ಯುತ್ ಬಿಲ್ 1.48 ಲಕ್ಷ ರೂಪಾಯಿ, ಮತ್ತೊಂದು 80 ಸಾವಿರ, 72 ಸಾವಿರ ಹೀಗೆ ಸಾವಿರಾರು ರೂಪಾಯಿ ಬಿಲ್ ನೀಡುವ ಮೂಲಕ ಬೆಸ್ಕಾಂ ಜನರಿಗೆ ತಡೆದುಕೊಳ್ಳಲಾಗದ ಶಾಕ್ ನೀಡಿದೆ.
ದಾವಣಗೆರೆ; ಕಾನನಕಟ್ಟೆಯಲ್ಲಿ ನಿಗೂಢ ಜ್ವರ, ಜನರಲ್ಲಿ ಆತಂಕ
ನಲ್ಲೂರಿನ ಸಂತೆ ಬೀದಿಯ ನವಗ್ರಾಮದಲ್ಲಿ ಕಳೆದ 30 ವರ್ಷಗಳ ಹಿಂದೆ ಸರ್ಕಾರ ಬಡವರಿಗೆ ಮನೆಗಳನ್ನ ನಿರ್ಮಿಸಿಕೊಟ್ಟಿದೆ. ಇನ್ನು, ಮನೆಗಳಿಗೆ ಭಾಗ್ಯಜ್ಯೋತಿ ಹಾಗೂ ಕುಟೀರ್ ಜ್ಯೋತಿ ಯೋಜನೆಗಳಡಿ ವಿದ್ಯುತ್ ಸಂಪರ್ಕ ನೀಡಿ ಮೀಟರ್ ಕೂಡ ಅಳವಡಿಸಲಾಗಿದೆ. ಆದರೆ, ಕಳೆದ 20 ಮತ್ತು 30 ವರ್ಷಗಳಿಂದ ಮನಸ್ಸಿಗೆ ತಿಳಿದಾಗ ಬಂದು ವಿದ್ಯುತ್ ಬಿಲ್ ನೀಡಿ ಹೋಗುತ್ತಿದ್ದರು. ಈಗ ಏಕಾಏಕಿ ಬಂದು ಬಿಲ್ ನೀಡಿ ದಿಢೀರ್ ಕಟ್ಟುವಂತೆ ಫಲಾನುಭವಿಗಳಿಗೆ ಎಚ್ಚರಿಕೆಯನ್ನ ನೀಡಿದ್ದಾರೆ. ತಮ್ಮ ಮನೆಗಳ ವಿದ್ಯುತ್ ಬಿಲ್ ಕಂಡು ಜನರು ದಂಗಾಗಿ ಹೋಗಿದ್ದಾರೆ. ಒಂದು ಮನೆಯ ಬಿಲ್ 1.48 ಲಕ್ಷ ರೂಪಾಯಿ,80 ಸಾವಿರ , 72 ಸಾವಿರ, 64 ಸಾವಿರ ಹೀಗೆ ಎಲ್ಲವೂ ನಲವತ್ತು, ಐವತ್ತು ಸಾವಿರ ರೂಪಾಯಿ ಮೇಲೆಯೇ ಇದು ಜನರು ಇಷ್ಟೊಂದು ಹಣ ಹೇಗೆ ಕಟ್ಟುವುದು ಎಂದು ಚಿಂತಾಕ್ರಾಂತರಾಗಿದ್ದಾರೆ.
ಬಿಲ್ ಕಟ್ಟಲೆಬೇಕೆಂಬ ಒತ್ತಾಯಕ್ಕೆ ಜನರ ಸಿಟ್ಟು
ಬಿಲ್ ಕಟ್ಟಲೆಬೇಕೆಂಬ ಒತ್ತಾಯಕ್ಕೆ ಜನರು ಸಿಟ್ಟು ಹೊರಹಾಕಿದ್ದಾರೆ. ಯಾವಾಗ ಇಲ್ಲದ ಬಿಲ್ ಇವತ್ತು ಯಾಕೆ, ಒಂದು ಸಣ್ಣ ಮನೆಯ ಬಿಲ್ ಇಷ್ಟು ಹೇಗೆ ಬರುತ್ತೆ ಅಂತಾ ಬೆಸ್ಕಾಂ ಸಿಬ್ಬಂದಿ ಚಳಿ ಬಿಡಿಸಿದ್ದಾರೆ. ವಿದ್ಯುತ್ ಸಂಪರ್ಕ ಕಟ್ ಮಾಡಲು ಬಂದಿದ್ದ ಬೆಸ್ಕಾಂ ಸಿಬ್ಬಂದಿ ಹಾಗೂ ಜನರ ಮಧ್ಯೆ ವಾಗ್ವಾದವೂ ಕೂಡ ನಡೆದಿದೆ. ಕೆಲವರು ಭಯದಿಂದ ಮನೆಯಲ್ಲಿದ್ದ ಆಭರಣಗಳನ್ನ ಅಡವಿಟ್ಟು ಬಂದ ಹಣವನ್ನ ವಿದ್ಯುತ್ ಬಿಲ್ ನೀಡಿದ್ದಾರೆ. ಬಳಿಕ, ಒತ್ತಾಯದ ಮೇರೆಗೆ ಬಿಲ್ ಕಟ್ಟಲು 20 ದಿನಗಳ ಕಾಲಾವಕಾಶ ನೀಡಿ ಹೋಗಿದ್ದಾರೆ.
ಉಚಿತ ಸಂಪರ್ಕ ನೀಡಲಾಗಿತ್ತು
ನಮ್ಮ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಈಗ ದಿಢೀರ್ ಅಂತ ಲಕ್ಷ ಮತ್ತು ಸಾವಿರಾರು ರೂಪಾಯಿ ದೊಡ್ಡ ಮೊತ್ತದ ಬಿಲ್ ನೀಡಿ ಬಿಲ್ ಕಟ್ಟು ಎಂದರೆ ಹೇಗೆ? ಇಷ್ಟು ದಿನ ದಿನ ಇಲ್ಲದ್ದು ಈಗ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಬಿಲ್ ಕಂಡು ಬಳಕೆದಾರರು ಕಂಗಾಲಾಗಿದ್ದಾರೆ. ಏಕಾಏಕಿ ಬಿಲ್ ನೀಡಿದ ಬೆಸ್ಕಾಂ ಸಿಬ್ಬಂದಿ ಇದನ್ನ ಕಟ್ಟಬೇಕು, ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಟ್ ಮಾಡುತ್ತೇವೆ ಎಂದು ಸ್ಥಳದಲ್ಲೇ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ.
ಪ್ರೀತಿಯಿಂದ ಸಾಕಿದ ಜೋಡೆತ್ತುಗಳನ್ನು ಸಿಂಗರಿಸಿ ಮದುವೆ ಮನೆಗೆ ಕರೆತಂದ ಯುವರೈತ
ಸರಿಯಾಗಿ ಬಿಲ್ ನೀಡಿದರೆ ನಾವು ಬಿಲ್ ಕಟ್ಟಲು ಸಿದ್ಧ
ಇನ್ನು, ನಾವು ಯಾವುದೇ ಕಾರಣಕ್ಕೂ ಬಿಲ್ ಕಟ್ಟುವುದಿಲ್ಲ ಎಂದು ಜನರು ಕೂಡ ಪಟ್ಟು ಹಿಡಿದಿದ್ದಾರೆ. ನಮಗೆ ಸರ್ಕಾರ ಮನೆಗಳನ್ನ ಕಟ್ಟಿಕೊಟ್ಟು ಭಾಗ್ಯಜ್ಯೋತಿ ಹಾಗೂ ಕುಟೀರ್ ಜ್ಯೋತಿ ಯೋಜನೆಗಳಡಿ ಉಚಿತ ಸಂಪರ್ಕ ನೀಡಿದೆ. ಕಳೆದ 20-30 ವರ್ಷಗಳಿಂದ ಬಿಲ್ ನೀಡದೇ ಇದೀಗ ಬಿಲ್ ನೀಡಿ ಕಟ್ಟು ಎಂದು ಒತ್ತಡ ಹೇರುತ್ತಿದ್ದಾರೆ. ಇದರಲ್ಲಿ ಬೆಸ್ಕಾಂ ಸಿಬ್ಬಂದಿ ಯಡವಟ್ಟು ಮಾಡಿ ಮನಬಂದಂತೆ ಬಿಲ್ ನೀಡಿದ್ದಾರೆ. ನಾವು ಇಷ್ಟು ಮೊತ್ತದ ಬಿಲ್ ಕಟ್ಟಲು ಸಾಧ್ಯವಿಲ್ಲ. ಇದೆಲ್ಲವನ್ನು ಮನ್ನಾ ಮಾಡಿ ಮುಂದೆ ಸರಿಯಾಗಿ ಬಿಲ್ ನೀಡಿದರೆ ನಾವು ಬಿಲ್ ಕಟ್ಟಲು ಸಿದ್ದವಿದ್ದು, ಬೆಸ್ಕಾಂ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.
ಬೆಸ್ಕಾಂ ಯದ್ವಾತದ್ವಾ ಬಿಲ್
ಇತ್ತೀಚಿನ ದಿನಗಳಲ್ಲಿ ದಿನಬಳಕೆ ವಸ್ತುಗಳಿಂದ ಹಿಡಿದು ಎಲ್ಲವೂ ಗಗನಮುಖಿ ಆಗುತ್ತಿರುವುದು ಸಾಮಾನ್ಯ ಜನರಿಗೆ ದೊಡ್ಡ ತಲೆನೋವಾಗಿದೆ. ಇಂತಹ ಹೊತ್ತಿನಲ್ಲಿ ವಿದ್ಯುತ್ ಮೀಟರ್ ರೀಡಿಂಗ್ ನಿಂದ ಆದ ಯಡವಟ್ಟು ಮನೆ ಮಾಲೀಕರ ನಿದ್ದೆ ಕೆಡಿಸಿದೆ. ಹಲವು ಮನೆಗಳಿಗೆ ಇದೇ ರೀತಿ ಯದ್ವಾತದ್ವಾ ಬಿಲ್ ನೀಡಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದ್ದು, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಲಕ್ಷ ಹಾಗೂ ಸಾವಿರಾರು ರೂಪಾಯಿ ಬಿಲ್ ನೀಡುವ ಮೂಲಕ ಬೆಸ್ಕಾಂ ತನ್ನ ಯಡವಟ್ಟುತನ ಪ್ರದರ್ಶನ ಮಾಡಿದೆ. ಈ ಮೂಲಕ ಜನರಿಗೆ ಶಾಕ್ ನೀಡಿದ್ದು, ಇದೀಗ ಬಳಕೆದಾರರ ಆಕ್ರೋಶಕ್ಕೆ ಗುರಿಯಾಗಿದೆ. ಈ ಬಗ್ಗೆ ಬೆಸ್ಕಾಂ ಎಚ್ಚೆತ್ತು ಜನರ ಸಮಸ್ಯೆ ಬಗೆಹರಿಸಬೇಕಿದೆ.