ಲೋಳೆಸರಕ್ಕೆ 50 ಕೆ.ಜಿ ಕಲ್ಲು ನೇತು ಹಾಕಿದರೂ ಬೀಳಲ್ಲ, ಇದು ಬೀರಲಿಂಗೇಶ್ವರ ಪವಾಡ
ದಾವಣಗೆರೆ, ಡಿಸೆಂಬರ್ 9: ಪ್ರತಿ ಕಾರ್ತಿಕ ಮಾಸದಲ್ಲಿ ದಾವಣಗೆರೆಯ ಹರಿಹರದ ಬೆಳ್ಳೋಡಿ ಗ್ರಾಮದಲ್ಲಿ ಹುಣ್ಣಿಮೆಗಿಂತ ಮೊದಲು ನಡೆಯುವ ಈ ಕಾರ್ತಿಕೋತ್ಸವ ಪವಾಡಕ್ಕೆ ಹೆಸರು. ಈ ಬಾರಿಯೂ ಅಂಥದ್ದೊಂದು ಪವಾಡವನ್ನು ಕಾರ್ತಿಕೋತ್ಸವದಲ್ಲಿ ನಡೆಸಲಾಗಿದೆ.
ನಿನ್ನೆ ಭಾನುವಾರ ಗ್ರಾಮದಲ್ಲಿ ಬೀರಲಿಂಗೇಶ್ವರ ಕಾರ್ತೀಕೋತ್ಸವ ನಡೆದಿದೆ. ಈ ಉತ್ಸವದಲ್ಲಿ ಲೋಳೆಸರಕ್ಕೆ ಎರಡು ಕುಡುಗೋಲನ್ನು ಹಾಕಿ ಅದಕ್ಕೆ 50 ಕೆ.ಜಿ ತೂಕದ ಕಲ್ಲು ಕಟ್ಟಿ ತೂಗಿಬಿಟ್ಟು ಪವಾಡ ನಡೆಸಲಾಗಿದೆ.
ತೊಟ್ಟಿಲು ತೂಗಿ ಅಳುತ್ತಿದ್ದ ಮಗು ಮಲಗಿಸಿದ ಬಸವಣ್ಣ, ವಿಡಿಯೋ ವೈರಲ್
ಗ್ರಾಮದಲ್ಲಿ ಪ್ರತಿ ಕಾರ್ತಿಕ ಮಾಸದಲ್ಲಿ ಹುಣ್ಣಿಮೆಗಿಂತ ಮೊದಲು ಈ ಕಾರ್ತಿಕೋತ್ಸವ ನಡೆಯುತ್ತಿದ್ದು, ಕಾರ್ತಿಕೋತ್ಸವದಲ್ಲಿ ಪವಾಡವೇ ಪ್ರಮುಖ ಕಾರ್ಯಕ್ರಮವಾಗಿರುತ್ತದೆ. ಈ ಬಾರಿ ದೇವಾಲಯದಲ್ಲಿ ಒಂದು ಲೋಳಸರಕ್ಕೆ ಎರಡು ಕುಡುಗೋಲನ್ನು ಹಾಕಿ ಅದಕ್ಕೆ 50 ಕೆ.ಜಿ ತೂಕದ ಕಲ್ಲಿನ ಗುಂಡನ್ನು ತೂಗುಬಿಟ್ಟಿದ್ದಾರೆ. ಸಾಮಾನ್ಯವಾದ ಲೋಳೆಸರಕ್ಕೆ 50 ಕೆಜಿ ತೂಕದ ಕಲ್ಲಿನ ಗುಂಡನ್ನು ತೂಗಿ ಹಾಕಿದರೂ ಬೀಳದೇ ತಡೆದುಕೊಳ್ಳುತ್ತದೆ ಎಂಬುದೇ ಇಲ್ಲಿನ ಪವಾಡ.
ಕಾರ್ತಿಕ ಮಾಸದಲ್ಲಿ ಬೀರಲಿಂಗೇಶ್ವರ ದೇವಾಲಯದ ಆರ್ಚಕರು ಉಪವಾಸವಿದ್ದು, ಈ ಪವಾಡ ನಡೆಸುತ್ತಾರೆ. ಈ ಪವಾಡವನ್ನು ನೋಡಿ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿಗಳು ಕೂಡ ಅಚ್ಚರಿಗೊಂಡಿದ್ದಾರೆ. ಪ್ರತಿ ವರ್ಷ ಪವಾಡವನ್ನು ನೋಡಲು ದೂರದೂರಿನಿಂದ ಜನರು ಆಗಮಿಸಿ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.
ಪ್ರತಿ ವರ್ಷವೂ ಇದೇ ರೀತಿಯ ಪವಾಡ ನಡೆಸುತ್ತಿದ್ದು, ಸಂಜೆ ವೇಳೆ ತುಂಬಿದ ಕೊಡಕ್ಕೆ ಪೂಜಿಸಿದ ಬಟ್ಟೆ ಕಟ್ಟಿ ಅದನ್ನು ಉಲ್ಟಾ ಮಾಡಿ ನೇತು ಹಾಕುತ್ತಾರೆ. ತುಂಬಿದ ಕೊಡದಿಂದ ಒಂದು ಹನಿ ನೀರೂ ಹೊರ ಬರುವುದಿಲ್ಲ. ಇದೆಲ್ಲ ಬೀರಲಿಂಗೇಶ್ವರ ದೇವರ ಪವಾಡ ಎನ್ನುತ್ತಾರೆ ಅರ್ಚಕರು.