ಮುಂದಿನ ಒಂದೂವರೆ ವರ್ಷ ಬೊಮ್ಮಾಯಿ ಸಿಎಂ: ಈಶ್ವರಪ್ಪ
ದಾವಣಗೆರೆ: ಹೊನ್ನಾಳಿ ತಾಲೂಕಿನ ಸುರಹೊನ್ನೆ ಹಾಗೂ ಕುಂದೂರು ತಾಲೂಕಿನಲ್ಲಿ ಇಂದು ನಡೆದ ಗ್ರಾಮ ವಾಸ್ತವ್ಯ ಉದ್ಘಾಟನಾ ಕಾರ್ಯಕ್ರಮ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯ್ತು. ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಕುಂದೂರು ಗ್ರಾಮಕ್ಕೆ ಎತ್ತಿನ ಬಂಡಿ ಮೂಲಕ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯ್ತು. ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರು ಸ್ವತಃ ಎತ್ತಿನಗಾಡಿ ಓಡಿಸಿದರು.
ಕಂದಾಯ ಸಚಿವ ಆರ್. ಅಶೋಕ್, ಸಂಸದ ಜಿ. ಎಂ.ಸಿದ್ದೇಶ್ವರ್ ಸಹ ಎತ್ತಿನಗಾಡಿಯಲ್ಲಿಯೇ ವೇದಿಕೆಗೆ ಆಗಮಿಸಿದರು. ಸಚಿವ ಕೆ. ಎಸ್. ಈಶ್ವರಪ್ಪ ಸಹ ಸಮಾರಂಭದಲ್ಲಿ ಪಾಲ್ಗೊಂಡರು. ಡಿಸಿ ಮಹಾಂತೇಶ್ ಆರ್. ಬೀಳಗಿ, ಎಸ್ಪಿ ರಿಷ್ಯಂತ್, ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
"ಎಚ್ಡಿಕೆ' ಗ್ರಾಮ ವಾಸ್ತವ್ಯ ಮತ್ತೆ ಜಾರಿಗೆ ತಂದ ಸಿಎಂ "ಬೊಮ್ಮಾಯಿ'
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೆ. ಎಸ್. ಈಶ್ವರಪ್ಪ ಅವರು ಮುಂದಿನ ಒಂದೂವರೆ ವರ್ಷದವರೆಗೆ ಬಸವರಾಜ್ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಮೂಲಕ ಮೆಚ್ಚುಗೆ ಪಡೆಯುತ್ತಿದ್ದಾರೆ ಎಂದು ಹಾಡಿಹೊಗಳಿದರು.
ಇದೇ ವೇಳೆ ಹೊನ್ನಾಳಿ ಹುಲಿ ಅಂದರೆ ಅದು ರೇಣುಕಾಚಾರ್ಯ. ಕಂದಾಯ ಸಚಿವರು ಹಾಗೂ ಸಿಎಂ ಅವರನ್ನು ಇಲ್ಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಲಿದೆ. ನೇರವಾಗಿ ಏನೇ ಮಾತನಾಡಿದರೂ ರೇಣುಕಾಚಾರ್ಯ ಮಾತ್ರ ಹಿಡಿದ ಕೆಲಸ ಮಾಡಿಯೇ ತೀರುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಇನ್ನು ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, "ಬಸವರಾಜ ಬೊಮ್ಮಾಯಿ ಅವರು ಕೇವಲ ಒಂದೂವರೆ ವರ್ಷ ಮಾತ್ರವಲ್ಲ, ಮುಂದಿನ ಅವಧಿಗೂ ಸಿಎಂ ಆದರೆ ಅಭ್ಯಂತರವೇನಿಲ್ಲ'' ಎಂದು ಹೇಳಿದ್ದು ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.
927 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲು ಈಗಾಗಲೇ ನೋಟಿಫಿಕೇಶನ್ ಹೊರಡಿಸಲಾಗಿದೆ. ಹಟ್ಟಿಗಳು, ಲಂಬಾಣಿ ತಾಂಡಗಳು ಸೇರಿದಂತೆ ಹಿಂದುಳಿದ ಗ್ರಾಮಗಳ ಅಭಿವೃದ್ಧಿಗೆ ಅನುಕೂಲ ಆಗಲಿದೆ. ಈ ಮೂಲಕ ಮೂಲಭೂತ ಸೌಲಭ್ಯ ವಂಚಿತ ಗ್ರಾಮಗಳು ಅಭಿವೃದ್ಧಿ ಪಥದಲ್ಲಿ ಸಾಗಲಿವೆ ಎಂದು ಹೇಳಿದರು.
ಕೊರೊನಾದಿಂದ 37 ಸಾವಿರ ಮಂದಿ ರಾಜ್ಯದಲ್ಲಿ ಮೃತಪಟ್ಟಿದ್ದಾರೆ. ಕೆಲವರು ಪೋಷಕರಿಲ್ಲದೇ ಅನಾಥರಾಗಿದ್ದಾರೆ. ಮಕ್ಕಳೂ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿ ಬಲಿಯಾದವರ ಕುಟುಂಬಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಒಂದೂವರೆ ಲಕ್ಷ ರೂಪಾಯಿ ಪರಿಹಾರ ನೀಡಲಿದೆ. ಇನ್ನೊಂದು ತಿಂಗಳಲ್ಲಿ ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ದಕ್ಷ, ಪ್ರಾಮಾಣಿಕ, ಜನರು ಮೆಚ್ಚುವಂತ ಆಡಳಿತ ನೀಡುವ ನಿರ್ಧಾರ ನನ್ನದು. ಯಾವ ರೀತಿ ಜನಪರ ಆಡಳಿತ ನೀಡುತ್ತೇವೆ ನೀವೇ ನೋಡಿ. ನಮಗೆ ನಿಮ್ಮ ಸಹಕಾರ ಬೇಕು. ಬಡವರು, ರೈತರು, ಜನರು ಶ್ರೀಮಂತರಾದರೆ ಗ್ರಾಮಗಳು ಶ್ರೀಮಂತವಾಗುತ್ತವೆ ಎಂದು ಹೇಳಿದರು.
ಜನವರಿ 21ರಿಂದ ಸರ್ಕಾರಿ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುವ ದೃಷ್ಟಿಯಿಂದ ವಿಶೇಷ ಯೋಜನೆ ರೂಪಿಸಿರುವುದಾಗಿ ಬಸವರಾಜ್ ಬೊಮ್ಮಾಯಿ ಹೇಳಿದರು. ಬೊಮ್ಮಾಯಿ ಅವರೂ ಸಹ ರೇಣುಕಾಚಾರ್ಯ ಅವರನ್ನು ಹಾಡಿಹೊಗಳಿದರು. ಹೊನ್ನಾಳಿ - ನ್ಯಾಮತಿ ತಾಲೂಕಿನ ಅಭಿವೃದ್ಧಿಗೆ ಅನುದಾನ ಕೇಳಿದ್ದು ಇದನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಅತ್ಯುತ್ತಮ ಕಾರ್ಯ ಮಾಡುವ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯನ್ನಾಗಿ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಬೇರೆ ತಾಲೂಕಿನ ಅಭಿವೃದ್ಧಿಗೂ ಶ್ರಮಿಸುವಂತಾಗಲಿ ಎಂದು ಹೇಳಿದರು.
Recommended Video