ಹಸುವಿನ ಸೀಮಂತ ಮಾಡಿ ಊರಿಗೆ ಊಟ ಹಾಕಿದ ಯುವರಾಜ
ದಾವಣಗೆರೆ, ಜುಲೈ 31: ಮನೆ ಮಗಳು ಗರ್ಭಿಣಿ ಆದರೆ ಮನೆ ಮಂದಿಯಲ್ಲಿ ಎಲ್ಲಿಲ್ಲದ ಸಂಭ್ರಮ, ಸಡಗರ. ಆ ಸಂಭ್ರಮದ ಧ್ಯೋತಕವಾಗಿಯೇ ಸೀಮಂತ ಮಾಡುತ್ತಾರೆ, ಮುದ್ದು ಮಗುವಿನ ನಿರೀಕ್ಷೆಯಲ್ಲಿರುತ್ತಾರೆ.
ಹಾಗೇ, ತನ್ನ ಸಹೋದರಿಯರಿಗೆ ಸೀಮಂತ ಮಾಡಿದಂತೆಯೇ ತಮ್ಮ ಮನೆಯ ಹಸುವಿಗೂ ಸೀಮಂತ ಮಾಡಿದ್ದಾರೆ ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ ಗ್ರಾಮದ ಯುವರಾಜ ಎಂಬುವರು. ಇವರ ಮನೆಯಲ್ಲಿ ಒಂದು ಆಳಕು ಬಸಿರಾಗಿದ್ದು, ನೆನ್ನೆ ಅದರ ಸೀಮಂತ ಕಾರ್ಯ ನೆರವೇರಿಸಿದ್ದಾರೆ.
ಬೆಂಗಳೂರಿನಲ್ಲಿ ತಾಯ್ತನದ ನಿರೀಕ್ಷೆಯಲ್ಲಿರುವ ಅಮ್ಮಂದಿರ ಕ್ಯಾಟ್ ವಾಕ್
ಮನೆ ಮುಂದೆ ರಂಗೋಲಿ ಹಾಕಿ ಮಾವಿನ ತೋರಣಗಳಿಂದ ಸಿಂಗಾರ ಮಾಡಿದ್ದಾರೆ. ದೂರದ ಸಂಬಂಧಿಕರು ಮತ್ತು ಒಡಹುಟ್ಟಿದವರನ್ನು ಕರೆಸಿದ್ದಾರೆ. ಮನೆಯಲ್ಲಿ ಹಸುವಿಗೆ ಸಿಂಗಾರ ಮಾಡಿಸಿ ಆರತಿ ಮಾಡಿದ್ದಾರೆ. ಐದು ಬಗೆಯ ಸಿಹಿತಿಂಡಿ, ಐದು ಬಗೆ ಹಣ್ಣು ಹಂಪಲು, ಐದು ಬಗೆಯ ಆರತಿ ಮಾಡಿಸಿದ್ದಾರೆ. ಊರಿನ ಐದು ಮುತ್ತೈದೆಯರನ್ನು ಕರಸಿ ಶಾಸ್ತ್ರೋಕ್ತವಾಗಿ ಸೀಮಂತ ನೆರವೇರಿಸಿದ್ದಾರೆ.
"ನಾವು ನಮ್ಮ ಜಾನುವಾರುಗಳಿಂದ ಆರ್ಥಿಕವಾಗಿ ಬೆಳೆವಣಿಗೆ ಆಗಿದ್ದೇವೆ. ಹಾಗಾಗಿ ನಮ್ಮ ಮನೆಯಲ್ಲಿ ಜಾನುವಾರು ಬಸಿರಾದರೆ ಸೀಮಂತ ಮಾಡುತ್ತೇವೆ. ಇಡೀ ಊರಿನ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಕಾರ್ಯಕ್ರಮಕ್ಕೆ ಬಂದವರಿಗೆ ಊಟೋಪಚಾರವನ್ನೂ ಮಾಡಲಾಗುತ್ತದೆ. ಈ ರೀತಿ ಮಾಡಿದರೆ ನಮ್ಮ ಮನೆಯಲ್ಲಿ ಹೈನುಗಾರಿಕೆ ಸಂಪನ್ನವಾಗಿರುತ್ತದೆ ಎಂಬ ನಂಬಿಕೆ ನಮ್ಮದು" ಎನ್ನುತ್ತಾರೆ ಯುವರಾಜ.