ಕರುನಾಡಿನ ತುಂಗಭದ್ರೆಯ ತಟದಲ್ಲಿ ನೆಲೆಸಿದ್ದನಾ ಅಯೋಧ್ಯೆಯ ಶ್ರೀರಾಮ?
ದಾವಣಗೆರೆ, ನವೆಂಬರ್ 13: ರಾಮ ಜನ್ಮಭೂಮಿ - ಬಾಬರಿ ಮಸೀದಿ ಪ್ರಕರಣದ ಶತಮಾನದ ಅಯೋಧ್ಯೆ ವಿವಾದಕ್ಕೆ ಸರ್ವೋಚ್ಚ ನ್ಯಾಯಾಲಯ ನವೆಂಬರ್ 9ರಂದು ತೆರೆ ಎಳೆದಿತ್ತು. ವಿವಾದಿತ ಭೂಮಿಯನ್ನು ಮಂದಿರಕ್ಕೆ ನೀಡಿ, ಮಸೀದಿಗೆ ಪ್ರತ್ಯೇಕ ಜಾಗ ಹಂಚಿಕೆ ಮಾಡಿ ತೀರ್ಪು ನೀಡಲಾಗಿದ್ದು, ರಾಮ ಮಂದಿರ ನಿರ್ಮಾಣದ ಬಹು ವರ್ಷಗಳ ಕನಸು ಸಾಕಾರಗೊಳ್ಳುವ ಸಮಯವೂ ಹತ್ತಿರಬಂದಾಯ್ತು.
2.77 ಎಕರೆ ವಿವಾದಿತ ಭೂಮಿ ರಾಮಲಲ್ಲಾಗೇ ಸೇರಿದೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ಸರ್ಕಾರ ಟ್ರಸ್ಟ್ ರಚನೆಗೆ ಮುಂದಾಗಿ ರಾಮಮಂದಿರ ನಿರ್ಮಾಣದತ್ತ ಮೊದಲ ಹೆಜ್ಜೆ ಇಟ್ಟಿದೆ. ಮೂರು ತಿಂಗಳೊಳಗೆ ಟ್ರಸ್ಟ್ ರಚನೆಯಾಗಿ, ರಾಮಮಂದಿರ ಕಟ್ಟುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿರು ವುದಾಗಿ ತಿಳಿದುಬಂದಿದೆ.
ಅಯೋಧ್ಯೆ ಕುರಿತ ದಶರಥ ರಾಮೇಶ್ವರನ ಭವಿಷ್ಯ ನಿಜವಾಯ್ತ? ಅಯೋಧ್ಯೆಗೂ, ಚಿತ್ರದುರ್ಗಕ್ಕೂ ಏನಿದು ನಂಟು?
ಈ ನಡುವೆ ದಾವಣಗೆರೆಯ ಹರಿಹರಕ್ಕೂ-ಅಯೋಧ್ಯೆಗೂ ನಂಟೊಂದು ಬೆಸೆದುಕೊಂಡಿದೆ. ಆ ನಂಟು ಏನು? ಉತ್ತರ ಪ್ರದೇಶದ ಅಯೋಧ್ಯೆಗೂ, ಕರ್ನಾಟಕದ ದಾವಣಗೆರೆಗೂ, ರಾಮನಿಗೂ ಏನಿದು ಸಂಬಂಧ?
ತುಂಗಭದ್ರಾ ತಟದಲ್ಲಿ ಅಯೋಧ್ಯೆಯ ಮೂಲ ವಿಗ್ರಹ
ದಾವಣಗೆರೆಯ ಹರಿಹರಕ್ಕೂ ಅಯೋಧ್ಯೆಗೂ ಇರುವ ಸಂಬಂಧ "ಮೂಲ ವಿಗ್ರಹ"ಗಳಲ್ಲಿದೆ ಎಂದು ಹೇಳಲಾಗುತ್ತಿದೆ. ಅಯೋಧ್ಯೆಯ ರಾಮ, ಸೀತೆ ಹಾಗೂ ಲಕ್ಷ್ಮಣರ ಮೂಲ ವಿಗ್ರಹಗಳು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ತುಂಗಾ ಭದ್ರ ನದಿಯ ತಟದಲ್ಲಿವೆ ಎನ್ನಲಾಗಿದೆ. ಹರಿಹರರ ಸಂಗಮಕ್ಷೇತ್ರವಾದ ಹರಿಹರದಲ್ಲಿ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರ ವಿಗ್ರಹಗಳಿದ್ದು, ಅವುಗಳ ಮೂಲ ಅಯೋಧ್ಯೆ ಎನ್ನಲಾಗಿದೆ.
ಅಯೋಧ್ಯೆ ವಿಗ್ರಹಗಳೊಂದಿಗೆ ಓಡಿಬಂದ ಅರ್ಚಕ
ಅಯೋಧ್ಯೆಯ ಮೇಲೆ ಮೊಘಲ್ ದೊರೆ ಬಾಬರ್ ಆಕ್ರಮಣ ಮಾಡಿದ ಸಂದರ್ಭ ಅಯೋಧ್ಯೆಯ ರಾಮ ಮಂದಿರದ ಅರ್ಚಕ ಶ್ಯಾಮಾನಂದ ಮಹಾರಾಜರು ಮೂಲ ವಿಗ್ರಹಗಳನ್ನು ಕಾಪಾಡಲು ಅಲ್ಲಿಂದ ವಿಗ್ರಹಗಳೊಂದಿಗೆ ತಪ್ಪಿಸಿಕೊಂಡರು. ವಿಗ್ರಹಗಳೊಂದಿಗೆ ಜೋಪಾನವಾಗಿ ದಕ್ಷಿಣ ಭಾರತದ ಕಡೆಗೆ ಪ್ರಯಾಣ ಬೆಳೆಸಿದ ಅವರು, ದಕ್ಷಿಣ ಭಾಗದ ಮಹಾರಾಷ್ಟ್ರದ ಪೈಟಾನ್ ಎನ್ನುವ ನಗರಕ್ಕೆ ಬಂದರು. ನಂತರ ಅಲ್ಲಿನ ಅರಸ ಏಕನಾಥ ಮಹಾರಾಜ್ ಎನ್ನುವವರಿಗೆ ರಾಮ, ಸೀತೆ, ಲಕ್ಷ್ಮಣ ಮೂರ್ತಿಗಳನ್ನು ಹಸ್ತಾಂತರಿಸಿ, ಪೂಜಿಸಲು ಸೂಚಿಸಿದರು ಎಂದು ಹೇಳುತ್ತದೆ ಇತಿಹಾಸ. ಏಕನಾಥ ಮಹಾರಾಜ್ ಅವರು ದತ್ತಾತ್ರೆಯನ ಆರಾಧಕರಾಗಿದ್ದು, ರಾಮನ ಮೂರ್ತಿಯನ್ನು ಹೇಗೆ ಪೂಜಿಸಲಿ ಎಂದು ಕೇಳಿದಾಗ, ಮುಂದೆ ಸಮರ್ಥ ರಾಮದಾಸ್ ಅವರಿಗೆ ಹಸ್ತಾಂತರಿಸಲು ಅರ್ಚಕ ಶ್ಯಾಮಾನಂದ ಮಹಾರಾಜ್ ಸೂಚಿಸಿದ್ದರು ಎನ್ನಲಾಗಿದೆ.
2024ರಲ್ಲಿ ಮಂದಿರ ನಿರ್ಮಾಣ ಪೂರ್ಣ, ರಾಮ ದರ್ಶನ ಪ್ರಾಪ್ತಿ
ನಾರಾಯಣಾಶ್ರಮದಲ್ಲಿ ಪ್ರತಿಷ್ಠಾಪನೆಗೊಂಡ ವಿಗ್ರಹಗಳು
ಸಮರ್ಥ ರಾಮದಾಸ್ ಸ್ವಾಮಿ ದಕ್ಷಿಣ ಕ್ಷೇತ್ರಕ್ಕೆ ತೀರ್ಥಯಾತ್ರೆಗೆ ಬಂದಾಗ ಅಯೋಧ್ಯೆ ಮೂಲದ ಮೂರ್ತಿಗಳನ್ನು ಹರಿಹರದ ತುಂಗಾಭದ್ರ ನದಿಯ ದಡದಲ್ಲಿ ಪ್ರತಿಷ್ಠಾಪಿಸಿದ್ದಾರೆ ಎನ್ನಲಾಗುತ್ತಿದೆ. ನೂರಾರು ವರ್ಷಗಳಿಂದ ಹರಿಹರ ಸಮೀಪದ ನಾರಾಯಣಾಶ್ರಮ ಎಂದು ಪ್ರಖ್ಯಾತಿ ಹೊಂದಿರುವ ಸ್ಥಳದಲ್ಲಿ ಇಂದಿಗೂ ಪ್ರತಿನಿತ್ಯ ಈ ವಿಗ್ರಹಗಳಿಗೆ ಪೂಜೆ, ಅಭಿಷೇಕ, ಪ್ರಸಾದ ವಿಧಿ ವಿಧಾನಗಳು ನಡೆಯುತ್ತಲೇ ಬಂದಿವೆ. ಅಂದು ರಾಮದಾಸ್ ಸ್ವಾಮಿ ಅವರು ತಮ್ಮ ಶಿಷ್ಯನಿಗೆ ಈ ಮೂಲ ವಿಗ್ರಹ ಅಯೋಧ್ಯೆಯದ್ದಾಗಿದ್ದು, ಮುಂದೊಂದು ದಿನ ಈ ಮೂರ್ತಿಗಳನ್ನು ಅಲ್ಲಿಯೇ ಪ್ರತಿಷ್ಠಾಪಿಸಬೇಕು ಎಂದು ಹೇಳಿರುವುದು ದಾಖಲೆಯಾಗಿದೆ. ಗುರುಗಳಾದ ಸಮರ್ಥ ರಾಮದಾಸರು ಹೇಳಿರುವ ಆದೇಶದಂತೆ ಶಿಷ್ಯವೃಂದ ರಾಮ, ಸೀತೆ ಹಾಗೂ ಲಕ್ಷ್ಮಣ ವಿಗ್ರಹಗಳಿಗೆ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿದ್ದು, ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರಕ್ಕೆ ಮೂಲ ವಿಗ್ರಹಗಳನ್ನು ನೀಡಲು ಕಾಯುತ್ತಿದ್ದಾರೆ.
ನ್ಯಾಯಾಲಯದ ಮೊರೆಹೋಗಿದ್ದ 11ನೇ ಪೀಠಾದಿಪತಿ
ಅಲ್ಲದೆ ಸಮರ್ಥ ರಾಮದಾಸರ ಆದೇಶದಂತೆ 11ನೇ ಪೀಠಾಧಿಪತಿ ಸಮರ್ಥ ನಾರಾಯಣ ಮಹಾರಾಜರು ಈ ವಿಷಯದ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದ ದಾಖಲೆಗಳಿವೆ. ಆದರೆ ಈ ಎಲ್ಲಾ ಮಾಹಿತಿಗಳಿಗೆ ಸೂಕ್ತ ದಾಖಲೆಗಳು ಇರದೇ ಇರುವುದರಿಂದ ಶಿಷ್ಯಂದಿರು ಈ ವಿಚಾರದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ. ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ರಾಮ ಮಂದಿರದಲ್ಲಿ ಹರಿಹರದ ನಾರಾಯಣಾಶ್ರಮದಲ್ಲಿರುವ ಅಯೋಧ್ಯೆ ಮೂಲ ಮೂರ್ತಿಗಳೆನ್ನುವ ರಾಮ, ಸೀತೆ, ಲಕ್ಷ್ಮಣರ ವಿಗ್ರಹಗಳು ಪ್ರತಿಷ್ಠಾಪನೆಗೊಳ್ಳಬೇಕು ಎಂಬುದು ಸಮರ್ಥ ನಾರಾಯಣ ಮಹಾರಾಜರ ಭಕ್ತರು ಹಾಗೂ ಶಿಷ್ಯವೃಂದದ ಒತ್ತಾಸೆಯಾಗಿದೆ.
"ಈ ಮೂರ್ತಿಗಳು ಮೂಲತಃ ಅಯೋಧ್ಯೆಯಲ್ಲಿನವು ಎಂದು ನಮ್ಮ ಹಿರಿಯ ಗುರುಗಳು ಹೇಳುತ್ತಿದ್ದರು. ಇದರ ಕುರಿತು ಅನೇಕ ಬಾರಿ ನ್ಯಾಯಾಲಯದ ಮೆಟ್ಟಿಲನ್ನು ಏರಿದ್ದರು. ಹರಿಹರದಲ್ಲಿನ ಈ ಮೂಲವಿಗ್ರಹಗಳು ಅಯೋಧ್ಯೆಗೇ ಸೇರಬೇಕು" ಎನ್ನುತ್ತಿದ್ದಾರೆ ರಾಮದಾಸರ ಶಿಷ್ಯವೃಂದ.