ಕೊರೊನಾ ಸೋಂಕು ಹೆಚ್ಚಳ: ಮಾಜಿ ಸಿಎಂ ಊರಿನವರೆಲ್ಲರೂ ಸೇರಿ ಮಾಡಿದ್ದೇನು?
ದಾವಣಗೆರೆ, ಮೇ 22: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಮದಲ್ಲಿ ೧೫ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ ಮೊರಾರ್ಜಿ ಬಾಲಕರ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಾಜಿ ಸಿಎಂ ದಿ. ಜೆ.ಎಚ್ ಪಟೇಲ್ ತವರೂರು ಕಾರಿಗನೂರು. ಈ ಗ್ರಾಮದಲ್ಲಿ ಕೊರೊನಾ ಸೋಂಕು ಹೆಚ್ಚಳವಾದ ಕಾರಣ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರೆಲ್ಲರೂ ಸೇರಿ ಕೋವಿಡ್ ಸೆಂಟರ್ ಆರಂಭಿಸಿದ್ದಾರೆ. ಇಂಜೆಕ್ಷನ್, ಔಷಧೋಪಚಾರ ಹೊರತುಪಡಿಸಿ ಉಳಿದೆಲ್ಲವನ್ನೂ ಸ್ಥಳೀಯವಾಗಿ ಕ್ರೋಢಿಕರಿಸಿ ಮನೆಯ ವಾತಾವರಣ ಅನುಭವಕ್ಕೆ ಬರುವಂತ ರೀತಿಯಲ್ಲಿ ವ್ಯವಸ್ಥೆ ಮಾಡಿರುವುದು ಗ್ರಾಮಸ್ಥರ ಹೆಗ್ಗಳಿಕೆ.
ಕೋವಿಡ್ ಸೋಂಕಿತರ ಜೊತೆ ಶಾಸಕ ರೇಣುಕಾಚಾರ್ಯ ದಂಪತಿ ಮಸ್ತ್ ಡ್ಯಾನ್ಸ್
ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಅವರ ನೇತೃತ್ವದಲ್ಲಿ ಈ ಸೆಂಟರ್ ಆರಂಭಿಸಲಾಗಿದ್ದು, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯರು ತಮ್ಮ ಕೈಯಲ್ಲಾದಷ್ಟರ ಮಟ್ಟಿಗೆ ಸಹಾಯ ಮಾಡಿದ್ದಾರೆ. ಜೊತೆಗೆ ಸೋಂಕಿತರಿಗೆ ತಾನು ರೋಗಿ, ಆಸ್ಪತ್ರೆಯಲ್ಲಿದ್ದೇನೆ ಎಂಬುದು ನೆನಪಿಗೆ ಬಾರದ ರೀತಿಯಲ್ಲಿ ವಿಶಾಲವಾದ ಜಾಗದಲ್ಲಿ ಸೆಂಟರ್ ರೂಪಿಸಲಾಗಿರುವುದು ಮತ್ತೊಂದು ವಿಶೇಷ.
ಬೆಡ್ ಸಿಗದ ಕಾರಣ ಆಸ್ಪತ್ರೆಗೆ ಹೋಗಿ ಪರದಾಡುವುದನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ. ಎಲ್ಲದಕ್ಕೂ ಸರ್ಕಾರವನ್ನೇ ನಿರೀಕ್ಷಿಸುವುದಕ್ಕಿಂತ ನಮ್ಮಿಂದಾದಷ್ಟು ಸೌಲಭ್ಯ ಒದಗಿಸಿದರೆ, ಎಚ್ಚರಿಕೆ ವಹಿಸಿದರೆ ಕೋವಿಡ್ ನಿಯಂತ್ರಣವನ್ನು ಶೀಘ್ರವಾಗಿ ನಿಯಂತ್ರಿಸಲು ಸಹಕಾರಿಯಾಗುತ್ತದೆ.
Recommended Video
ಮಾರಿಹಬ್ಬ ಸೇರಿದಂತೆ ಬೇರೆಬೇರೆ ಆಚರಣೆಗಳಿಗೆ ಕೋಟಿ ಕೋಟಿ ರೂಪಾಯಿ ವ್ಯಯಿಸುವ ನಾವು ಸಂಘಟಿತರಾಗಿ ಹೋರಾಟ ಮಾಡಿದರೆ ಹೆಮ್ಮಾರಿ ಹೊಡೆದೋಡಿಸಲು ಸುಲಭವಾಗುತ್ತದೆ. ಕೊರೊನಾ ಸೋಂಕಿತರಿಗೆ ಯೋಗ, ಧ್ಯಾನ, ವ್ಯಾಯಾಮ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ರಂಜನೆ ನೀಡುವ ಕಾರ್ಯ ಮಾಡಲಾಗುತ್ತಿದೆ. ಇದರಿಂದಾಗಿ ರೋಗಿಗಳು ಬೇಗ ಗುಣಮುಖರಾಗಿ ಮನೆಗೆ ತೆರಳುತ್ತಿದ್ದಾರೆ ಎಂದು ತೇಜಸ್ವಿ ಪಟೇಲ್ ಹೇಳಿದ್ದಾರೆ.