ತಮಿಳುನಾಡಿನಿಂದ ಅಕ್ರಮವಾಗಿ ತಂದ 102 ಕೆಜಿ ಬೆಳ್ಳಿ ಗೆಜ್ಜೆ ವಶಪಡಿಸಿಕೊಂಡ ದಾವಣಗೆರೆ ಪೊಲೀಸ್
ದಾವಣಗೆರೆ,ಜು.5: ಅಕ್ರಮವಾಗಿ ಬೆಳ್ಳಿ ಗೆಜ್ಜೆ ತಂದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ಸೇಲಂನ ಸೆಲ್ವಂ ಮತ್ತು ಬಾಲಾಜಿ ಬಂಧಿತ ಆರೋಪಿಗಳು. ತಮಿಳುನಾಡಿನ ಸೇಲಂ ನಿಂದ ಅನಧಿಕೃತವಾಗಿ 20 ಲಕ್ಷ ರೂಪಾಯಿ ಮೌಲ್ಯದ 102 ಕೆಜಿ ಬೆಳ್ಳಿ ಗೆಜ್ಜೆ ತಂದಿದ್ದ ಇಬ್ಬರನ್ನು ವಿಚಾರಣೆ ನಡೆಸಿದಾಗ ಯಾವುದೇ ದಾಖಲಾತಿಗಳು ಸಿಕ್ಕಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದಾವಣಗೆರೆಗೆ ಕಳೆದ ಜುಲೈ 3 ರಂದು ಬಂದಿದ್ದಾರೆ. ಇಬ್ಬರ ಬಳಿಯೂ ಬೆಳ್ಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ಇರಲಿಲ್ಲ. ಮಾರಾಟ ಮಾಡಲು ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಯಾವ ಕಾರಣದಿಂದ ಇಷ್ಟೊಂದು ಪ್ರಮಾಣದ ಬೆಳ್ಳಿ ತಂದಿದ್ದರು, ಕಳ್ಳತನ ಮಾಡಿ ಇಲ್ಲಿ ಮಾರಾಟ ಮಾಡಲು ಬಂದಿರಬಹುದಾ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ದಾವಣಗೆರೆ; ಬೋಧಕರ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಹಳೆಯ ಬೆಳ್ಳಿ ಖರೀದಿಸಿ ಪಾಲಿಷ್ ಮಾಡಿ ಮಾರಾಟಕ್ಕೇನಾದರೂ ತಂದಿರಬಹುದೇ ಎಂಬ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಕಳ್ಳತನ ಮಾಡಿಕೊಂಡು ಬಂದು ಕಡಿಮೆ ದರಕ್ಕೆ ಮಾರಾಟಕ್ಕೆ ಯತ್ನಿಸಿರಬಹುದು.ದಾವಣಗೆರೆಯ ಚಿನ್ನ ಬೆಳ್ಳಿ ಮಾರಾಟಗಾರರ ಸಭೆ ನಡೆಸಿ ಬಿಲ್ ಇಲ್ಲದೇ ಇರುವ ಚಿನ್ನ ಬೆಳ್ಳಿ ಆಭರಣ ಖರೀದಿ ಮಾಡದಂತೆ ಸೂಚನೆ ನೀಡಲಾಗಿದೆ. ಯಾವುದೇ ಬಿಲ್ ಇಲ್ಲದಿರುವ ಆಭರಣಗಳ ಖರೀದಿ ಮಾಡುವುದರಿಂದ ಕಳ್ಳರು ಸುಲಭವಾಗಿ ಕದ್ದ ಮಾಲು ಮಾರಾಟ ಮಾಡಬಹುದಾಗಿದೆ. ಹಾಗಾಗಿ ಬಿಲ್ ಇಲ್ಲದೆ ಖರೀದಿ ಮಾಡದಂತೆ ಹಲವಾರು ಸಭೆಯಲ್ಲಿ ತಿಳಿಸಲಾಗಿದೆ ಎಂದ ಅವರು, ಚಿನ್ನ, ಬೆಳ್ಳಿ ವ್ಯಾಪಾರಸ್ಥರು ಬುಲಿಯನ್ ಖಾತೆಯ ಮೂಲಕವೇ ಖರೀದಿ ಮಾಡಬೇಕು. ಅನಧಿಕೃತವಾಗಿ ಖರೀದಿ ಮಾಡುವಂತಿಲ್ಲ ಎಂದು ತಿಳಿಸಿದರು.
ಸಾಕಷ್ಟು ಪರಿಶ್ರಮ ವಹಿಸಿ ಎಲ್ಲರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದೆ. ತಂಡದ ಪ್ರಶಂಸನೀಯ ಕಾರ್ಯಕ್ಕೆ ನಗದು ಬಹುಮಾನ ಸಹ ನೀಡಲಾಗುತ್ತದೆ ಎಂದು ತಿಳಿಸಿದರು.
1.3 ಕೋಟಿ ರೂಪಾಯಿ ದಂಡ ವಸೂಲಿ
ದಾವಣಗೆರೆಯ ಉತ್ತರ ಮತ್ತು ದಕ್ಷಿಣ ಸಂಚಾರಿ ಪೊಲೀಸರು ಕಳೆದ ಆರು ತಿಂಗಳಲ್ಲಿ ಮೋಟಾರು ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ 25,088 ಪ್ರಕರಣ ದಾಖಲಿಸಿಕೊಂಡು 1.3 ಕೋಟಿ ರೂಪಾಯಿ ದಂಡ ವಸೂಲು ಮಾಡಿದ್ದಾರೆ ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ತಿಳಿಸಿದರು.
ಜ.1ರಿಂದ ಜೂ.30 ರವರೆಗೆ ಈ ಪ್ರಕರಣ ದಾಖಲಿಸಿದ್ದಾರೆ. ದಾವಣಗೆರೆ ನಗರದಲ್ಲಿ ಸುಗಮ ಮತ್ತು ಸುಲಲಿತ ಸಂಚಾರಕ್ಕಾಗಿ ಹಲವಾರು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ದಾವಣಗೆರೆ ಕೆಲ ಭಾಗಗಳಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವಂತಹ 36 ಸ್ಥಳಗಳನ್ನು ಗುರುತಿಸಿ ಕ್ರಮ ಜರುಗಿಸಲಾಗುತ್ತಿದೆ. ಇತರೆ ಜಾಗ ಗುರುತು ಮಾಡಲಾಗುವುದು ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎ.ಆರ್. ಬಸರಗಿ, ದಾವಣಗೆರೆ ನಗರ ಪೊಲೀಸ್ ಉಪಾಧೀಕ್ಷಕ ನರಸಿಂಹ ತಾಮ್ರಧ್ವಜ, ಕೆ. ಎನ್. ಗಜೇಂದ್ರಪ್ಪ, ಧನಂಜಯ ಇತರರು ಇದ್ದರು.