ಅಮಿತ್ ಶಾಗೆ ಕನ್ನಡಿಗರ ಮೇಲೆ ಅಪಾರ ಪ್ರೀತಿ, ವಿಶ್ವಾಸ: ಸಿಎಂ ಬೊಮ್ಮಾಯಿ
ದಾವಣಗೆರೆ, ಸೆಪ್ಟೆಂಬರ್ 2: "ಕೇಂದ್ರ ಗೃಹ ಸಚಿವ ಅಮಿತ್ ಶಾರವರಿಗೆ ಕನ್ನಡಿಗರ ಮೇಲೆ ಅಪಾರ ಪ್ರೀತಿ ವಿಶ್ವಾಸವಿದ್ದು, ದೇಶದ ಭವಿಷ್ಯ ರೂಪಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ದೇಶದ ಅಖಂಡತೆ, ಐಕ್ಯತೆಗಾಗಿ ದಿಟ್ಟವಾಗಿ ಹೋರಾಡಿದ ಸರ್ದಾರ್ ವಲ್ಲಭಬಾಯಿ ಪಟೇಲ್ ನಂತರ ಅವರಂತೆಯೇ ದೇಶದ ಏಕತೆಗಾಗಿ ಅಮಿತ್ ಶಾರವರು ದಿಟ್ಟತನ ತೋರಿದ್ದಾರೆ," ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
"ಇಂದು ಆಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳು, ಮಕ್ಕಳ ವಿಷಯದಲ್ಲಿ ಭೀತಿಯ ವಾತಾವರಣ ಇದ್ದು, ಅವರ ಜೀವನ ಆತಂಕದಲ್ಲಿದೆ. ಆದರೆ ನಮ್ಮ ದೇಶದಲ್ಲಿ ಜಮ್ಮು ಕಾಶ್ಮೀರದ ಏಕತೆಗೆ ದಿಟ್ಟವಾಗಿ ಹೆಜ್ಜೆ ಇಟ್ಟಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಐತಿಹಾಸಿಕ ಸಾಧನೆ ತೋರಿದ್ದಾರೆ," ಎಂದು ಸಿಎಂ ಬೊಮ್ಮಾಯಿ ಶ್ಲಾಘನೆ ವ್ಯಕ್ತಪಡಿಸಿದರು.
ಬೊಮ್ಮಾಯಿ ನಾಯಕತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ: ಅಮಿತ್ ಶಾ ಘೋಷಣೆ
ದಾವಣಗೆರೆ ನಗರದ ಜಿಎಂಐಟಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಇಂದು ದೇಶದಲ್ಲಿ ಹಲವಾರು ಸಮಸ್ಯೆಗಳಿವೆ. ರಾಜ್ಯದಲ್ಲಿಯೂ ಅನೇಕ ಸಮಸ್ಯೆ ಇವೆ. ಆದರೆ ರಾಜ್ಯದ ಆಂತರಿಕ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಇಲ್ಲ. ಎನ್ಐಎ ಜೊತೆ ಕೈಜೋಡಿಸಿ, ಉಗ್ರ ಸಂಘಟನೆಗಳ ಪತ್ತೆ ಹಚ್ಚಿ, ಭಯೋತ್ಪಾದನೆಯ ಪ್ರಯತ್ನವನ್ನು ಸೆದೆ ಬಡಿಯಲು ದಿಟ್ಟ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ," ಎಂದು ತಿಳಿಸಿದರು.
ಗಾಂಧಿ ಹುಟ್ಟಿದ ನಾಡಿನಿಂದ ಬಂದ ಅಮಿತ್ ಶಾ
"ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ನಿಧಾನವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಅಪರಾಧ ತಡೆಯುವಲ್ಲಿ ವಿಳಂಬವಾಗುತ್ತಿದೆ ಎಂಬ ಉದ್ದೇಶದಿಂದ ಮೊಬೈಲ್ ವಿಧಿ ವಿಜ್ಞಾನ ಪ್ರಯೋಗಾಲಯ ಮಾಡುವಂತೆ ಕೇಂದ್ರ ಗೃಹ ಸಚಿವರು ಸೂಚಿಸಿದಂತೆ ಕ್ರಮ ವಹಿಸಲಾಗುತ್ತಿದೆ. ಹಾಗೂ ಅಪರಾಧ ಸ್ಥಳದಲ್ಲಿ ಅಧಿಕಾರಿಗಳು ಇರಬೇಕೆಂಬುದನ್ನೂ ಸಹ ಪಾಲಿಸಲಾಗುತ್ತಿದೆ. ಗೃಹ ಸಚಿವರ ಮಾರ್ಗದರ್ಶನ ಸದಾ ರಾಜ್ಯಕ್ಕೆ ಇರಲಿದೆ," ಎಂದರು.
"ಗಾಂಧಿ ಹುಟ್ಟಿದ ನಾಡಿನಿಂದ ಬಂದ ಅಮಿತ್ ಶಾರಿಂದಲೇ ಗಾಂಧಿ ಭವನದ ಉದ್ಘಾಟನೆ ನೆರವೇರುತ್ತಿರುವುದು ನಿಜಕ್ಕೂ ಸಂತಸದಾಯಕ ಸಂಗತಿಯಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ದಾವಣಗೆರೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಸಂದರ್ಭದಲ್ಲಿ ಸನ್ಮಾನಿಸುತ್ತಿರುವುದು ಸ್ತುತ್ಯಾರ್ಹವಾಗಿದ್ದು, ಹೋರಾಟಗಾರರಿಗೆ ನನ್ನ ಹೃದಯಪೂರ್ವಕ ನಮನಗಳು," ಎಂದು ಹೇಳಿದರು.
ಪೊಲೀಸ್ ಪಬ್ಲಿಕ್ ಸ್ಕೂಲ್ ಲೋಕಾರ್ಪಣೆ
"ದಾವಣಗೆರೆ ಜಿಲ್ಲೆಯಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಗುರುವಾರ ಲೋಕಾರ್ಪಣೆಗೊಂಡಿದ್ದು, ಮಿಲಿಟರಿ ಶಾಲೆಯ ಮಾದರಿಯಲ್ಲಿ ಇಲ್ಲಿ ಉತ್ತಮ ಮತ್ತು ಶಿಸ್ತಿನ ಶಿಕ್ಷಣ ನೀಡಲಾಗುವುದು," ಎಂದರು. "ಸ್ವಾತಂತ್ರ್ಯ ಬಂದು 75 ವರ್ಷ ಸಂದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಪ್ರಧಾನಿಯವರು ಕರೆ ನೀಡಿದ್ದು, 100 ವರ್ಷ ತುಂಬುವುದರೊಳಗೆ ನಮ್ಮ ರಾಷ್ಟ್ರ ಇಡೀ ವಿಶ್ವದಲ್ಲೇ ಗುರು ಸ್ಥಾನ ಪಡೆಯುವಂತೆ ಸಂಕಲ್ಪ ತೊಡಬೇಕೆಂದು ಸಹ ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಅಭಿವೃದ್ದಿ ಪಥದಲ್ಲಿ ಸಾಗೋಣ," ಎಂದು ಹೇಳಿದರು.
ಗಾಂಧಿ ಭವನ ಉದ್ಘಾಟನೆ
"ಗಾಂಧಿ ನಾಡಿನ ಅಮಿತ್ ಶಾರವರು ಗಾಂಧಿ ಭವನ ಉದ್ಘಾಟಿಸಿರುವುದು ಅತ್ಯಂತ ಸಂತಸದ ವಿಷಯವಾಗಿದೆ ಎಂದರಲ್ಲದೇ, ಸರ್ಕಾರ ಬಡಜನತೆಗೆ, ಎಸ್ಸಿ, ಎಸ್ಟಿ, ಓಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಕೌಶಲ್ಯ ತರಬೇತಿಗಳು ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. 750 ವಸತಿ ರಹಿತ ಹಳ್ಳಿಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಪಿಯುಸಿಯಿಂದ ಸ್ನಾತಕೋತ್ತರ ಪದವಿವರೆಗೆ ವಿದ್ಯಾರ್ಥಿಗಳಿಗೆ ರೈತನಿಧಿ ಯೋಜನೆಯಡಿ ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು, ಇದಕ್ಕಾಗಿ 1 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದೇವೆ," ಎಂದು ಮಾಹಿತಿ ನೀಡಿದರು.
Recommended Video
20 ಲಕ್ಷ ರೈತ ಮಕ್ಕಳಿಗೆ ವಿದ್ಯಾರ್ಥಿವೇತನ
"ಸೆ.5ರಂದು ಕೇಂದ್ರ ಕೃಷಿ ಸಚಿವರು ಈ ಯೋಜನೆಗೆ ಚಾಲನೆ ನೀಡಲಿದ್ದು, ಸುಮಾರು 20 ಲಕ್ಷ ರೈತ ಮಕ್ಕಳಿಗೆ ಈ ಸೌಲಭ್ಯ ತಲುಪಲಿದೆ. ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ ಮಾಸಾಶನ ಮೊತ್ತವನ್ನು ಹೆಚ್ಚಿಸಲಾಗಿದ್ದು, ಬಡವರ, ಕಾರ್ಮಿಕರ, ರೈತಪರ ಸರ್ಕಾರವಾಗಿದೆ. ದಾವಣಗೆರೆ ಜಿಎಂಐಟಿಯಲ್ಲಿ ಲೋಕಾರ್ಪಣೆಯಾದ ಕೇಂದ್ರ ಗ್ರಂಥಾಲಯದಿಂದ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಜಿ.ಎಂ. ಸಿದ್ದೇಶ್ವರ್ರವರು ಅತ್ಯಂತ ಕ್ರಿಯಾಶೀಲ ಸಂಸದರಾಗಿದ್ದಾರೆ," ಎಂದು ವೇದಿಕೆ ಕಾರ್ಯಕ್ರಮದಲ್ಲಿ ತಿಳಿಸಿದರು.
75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ದಾವಣಗೆರೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ಬಿ.ಎಂ. ಶಿವಲಿಂಗಸ್ವಾಮಿ, ಎಚ್. ಮರುಳಸಿದ್ದಪ್ಪ, ತಿಳುವಳ್ಳಿ ಶೆಟ್ರು ಸಿದ್ದರಾಮಪ್ಪರನ್ನು ಗೌರವಿಸಿ, ಸನ್ಮಾನಿಸಲಾಯಿತು.