ದಾವಣಗೆರೆ ಜಿಲ್ಲೆಗೆ ಮಾದರಿಯಾದ ಮದ್ಯ ಮುಕ್ತ ಆಲೂರು ಹಟ್ಟಿ ಗ್ರಾಮ
ದಾವಣಗೆರೆ, ಅಕ್ಟೋಬರ್ 29: ಇಡೀ ಗ್ರಾಮಸ್ಥರು ಕೈಗೊಂಡ ನಿರ್ಣಯದಿಂದ ಇಡೀ ದಾವಣಗೆರೆ ಜಿಲ್ಲೆಗೆ ಮಾದರಿ ಗ್ರಾಮವಾಗಿ ಹೊರ ಹೊಮ್ಮಿದ್ದು, ಗ್ರಾಮದಲ್ಲಿ ನೆಮ್ಮದಿ ನೆಲೆಸಿದೆ.
ಭಟ್ಟಿ ಸಾರಾಯಿ ಮಾಡುತ್ತಿರುವಾಗ ಪೊಲೀಸರ ದಾಳಿಯಾಗಿದ್ದರಿಂದ, ಊರಿಗೆ ಅವಮಾನ ಆದ ಕಾರಣ ಇಡೀ ಗ್ರಾಮವನ್ನೇ ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಿ ದಾವಣಗೆರೆ ಜಿಲ್ಲೆಯ ಆಲೂರ ಹಟ್ಟಿ ಗ್ರಾಮ ಮಾದರಿಯಾಗಿದೆ.
ದಾವಣಗೆರೆ: ಒಂದು ಮಳೆ ರೈತರ ಬದುಕನ್ನೇ ಮೂರಾಬಟ್ಟೆ ಮಾಡಿದೆ
ಈ ಗ್ರಾಮವು ದಾವಣಗೆರೆಯಿಂದ ಜಗಳೂರಿಗೆ ಹೋಗುವ ಮಾರ್ಗದಲ್ಲಿದ್ದು, ಗ್ರಾಮದಲ್ಲಿ ಬಹುತೇಕ ಲಂಬಾಣಿ ಸಮುದಾಯದವರೇ ಹೆಚ್ಚಾಗಿದ್ದಾರೆ. ಕಳ್ಳಭಟ್ಟಿ ತಯಾರಿಸುವಲ್ಲಿ ಈ ಗ್ರಾಮ ಹೆಸರು ವಾಸಿಯಾಗಿತ್ತು. ಅದಲ್ಲದೆ ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಅತಿ ಹೆಚ್ಚಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದರು.
ಮದ್ಯದ ಅಂಗಡಿಗಳನ್ನು ಹೊರ ಹಾಕಿದರು
ಇದರ ಸುಳಿವು ಪಡೆದ ಪೊಲೀಸರು ಹಾಗೂ ಅಬಕಾರಿ ಇಲಾಖೆಯವರು ದಾಳಿ ನಡೆಸಿದರು. ದಾಳಿಯಿಂದಾಗಿ ಇಡೀ ಗ್ರಾಮಕ್ಕೆ ಅವಮಾನವಾದಂತಾಯಿತು. ಇದರಿಂದ ಈ ಗ್ರಾಮದ ಹಿರಿಯರು ಸೇರಿ ಇಡೀ ಗ್ರಾಮವನ್ನೇ ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಲು ಗ್ರಾಮ ದೇವತೆಯ ದೇವಸ್ಥಾನದ ಮುಂದೆ ಕಂಕಣ ಕಟ್ಟಿಕೊಂಡು ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಲು ಹೊರಟರು.
ಮೊದಲಿಗೆ ಗ್ರಾಮದ ಮುಂದಿದ್ದ ಎಗ್ ರೈಸ್ ಅಂಗಡಿ ಹಾಗೂ ಅನಧಿಕೃತವಾಗಿದ್ದ ಮದ್ಯದ ಅಂಗಡಿಗಳನ್ನು ಗ್ರಾಮದಿಂದಲೇ ಹೊರ ಹಾಕಿದರು. ಆ ಜಾಗದಲ್ಲಿ ಗಿಡಗಳನ್ನು ನೆಟ್ಟು ಹಸಿರುಮಯಾವಾಗಿರಿಸಿದ್ದಾರೆ.
ಮದ್ಯ ಮಾರಾಟ ನಿಷೇಧ
ಅಲ್ಲದೆ ಯಾರಾದರೂ ಗ್ರಾಮದಲ್ಲಿ ಮದ್ಯ ಹಾಗೂ ಭಟ್ಟಿ ಸಾರಾಯಿ ಮಾರಾಟ ಮಾಡಿದವರಿಗೆ 25 ಸಾವಿರ ರೂ. ದಂಡ ವಿಧಿಸಿ ದಂಡದ ಹಣವನ್ನು ಗ್ರಾಮದ ಅಭಿವೃದ್ಧಿಗೆ ಬಳಕೆ ಮಾಡಲು ನಿರ್ಧಾರ ಮಾಡಿದ್ದು, ಇದರಿಂದ ಗ್ರಾಮದಲ್ಲಿ ಸಂಪೂರ್ಣ ಮದ್ಯ ಮಾರಾಟ ನಿಷೇಧವಾಗಿದೆ ಎನ್ನುತ್ತಾರೆ ಗ್ರಾಮದ ಮುಖಂಡರು. ಇನ್ನು ಗ್ರಾಮದಲ್ಲಿ ಅತಿ ಹೆಚ್ಚು ಭಟ್ಟಿ ಸಾರಾಯಿ ಮಾರಾಟವಾಗುತ್ತಿತ್ತು. ಹಬ್ಬ ಹರಿದಿನಗಳಲ್ಲಿ ಗಲಾಟೆಯಾಗಿ ಪೊಲೀಸ್ ಠಾಣೆಯ ಮೆಟ್ಟಿಲು ಏರುತ್ತಿದ್ದರು. ಅಲ್ಲದೆ ಈ ಗ್ರಾಮದಲ್ಲಿ 150ಕ್ಕೂ ಹೆಚ್ಚು ಜನರು ಸರ್ಕಾರಿ ಹುದ್ದೆಯಲ್ಲಿದ್ದು, ಸಾಕಷ್ಟು ಜನರು ಹೊರ ರಾಜ್ಯ, ಹೊರ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಮೆರವಣೆಗೆ ಮೂಲಕ ಜನರಲ್ಲಿ ಜಾಗೃತಿ
ಭಟ್ಟಿ ಸಾರಾಯಿ, ಅಕ್ರಮ ಮದ್ಯ ಮಾರಾಟ ವಿಚಾರದಲ್ಲಿ ಗ್ರಾಮಕ್ಕೆ ಕೆಟ್ಟ ಹೆಸರು ಹಾಗೂ ಜನರ ನೆಮ್ಮದಿ ಹಾಳಾಗುತ್ತಿದೆ ಎಂದು ಮನಗಂಡು ಗ್ರಾಮದ ಮುಖಂಡರು ಈ ರೀತಿಯಾದ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ ಇದೇ ಗ್ರಾಮದವರಾದ ಸಿಪಿಐ ಜೈರಾಜ್ ಎನ್ನುವವರು ಗ್ರಾಮದಲ್ಲಿ ಪಂಜಿನ ಮೆರವಣೆಗೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಮದ್ಯ, ಮಾಂಸ, ಜೂಜು ಇವೆಲ್ಲವು ಗ್ರಾಮದಿಂದ ಹೊರ ಹಾಕಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದರು.
ಗಾಂಧಿ ಕನಸು ಕಂಡ ರಾಮ ರಾಜ್ಯ
ಇದರಂತೆ ಗ್ರಾಮದ ಜನರು ಸೇರಿ ಇಡೀ ಗ್ರಾಮವನ್ನು ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಿ ಇಡೀ ಜಿಲ್ಲೆಗೆ ಮಾದರಿಯಾಗಿದ್ದಾರೆ. ಹಬ್ಬ ಬಂತೆಂದರೆ ಸಾಕು ಗಲಾಟೆಗಳನ್ನು ನೋಡುತ್ತಿದ್ದ ಮಹಿಳೆಯರು ಈಗ ನೆಮ್ಮದಿ, ಸಂತೋಷದಿಂದ ಹಬ್ಬವನ್ನಾಚರಿಸುವಂತಾಗಿದೆ ಎನ್ನುತ್ತಾರೆ ಗ್ರಾಮದ ಮಹಿಳೆಯರು. ಒಟ್ಟಾರೆ ಆಲೂರ ಹಟ್ಟಿ ಗ್ರಾಮ ಮದ್ಯ ಮುಕ್ತ ಗ್ರಾಮವಾಗಿ ಹೊರಹೊಮ್ಮಿದ್ದು, ಅತಿ ಹೇರಳವಾಗಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಗ್ರಾಮಗಳು ಇದೇ ರೀತಿ ನಿರ್ಧಾರ ಕೈಗೊಂಡರೆ ಗಾಂಧಿ ಕಂಡ ರಾಮ ರಾಜ್ಯ ಸೃಷ್ಠಿಯಾಗುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ಗ್ರಾಮಸ್ಥೆ ಮಧುಮತಿ.