ದಾವಣಗೆರೆಯಲ್ಲಿ ಕೋವಿಶೀಲ್ಡ್ ಲಸಿಕೆ ನೀಡುವಲ್ಲಿಯೂ ರಾಜಕೀಯ?
ದಾವಣಗೆರೆ, ಜೂನ್ 17: ಕೊರೊನಾ ಸೋಂಕು ದಾವಣಗೆರೆ ಜಿಲ್ಲೆಯಲ್ಲಿ ಕಡಿಮೆ ಆಗುತ್ತಿದ್ದರೂ ಲಸಿಕೆ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಬಿಜೆಪಿ ಗೆದ್ದಿರುವ ವಾರ್ಡ್ಗಳಿಗೆ ಸರ್ಕಾರದಿಂದ ಕೋವಿಶೀಲ್ಡ್ ನೀಡಲಾಗುತ್ತಿದೆ. ಕಾಂಗ್ರೆಸ್ ಕಾರ್ಪೊರೇಟರ್ ಇರುವ ವಾರ್ಡ್ಗಳಲ್ಲಿ ಲಸಿಕೆ ನೀಡುತ್ತಿಲ್ಲವಾ ಎಂಬ ಸಂಶಯ ಕಾಡಲಾರಂಭಿಸಿದೆ.
"ಕೋವ್ಯಾಕ್ಸಿನ್ ಬಂದಾಗ ಲಸಿಕೆ ನೀಡಲಾಗಿತ್ತು. ಆದರೆ ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸವಿರುವ ದಾವಣಗೆರೆಯ ವಾರ್ಡ್ 38ಕ್ಕೆ ಇದುವರೆಗೆ ಕೋವಿಶೀಲ್ಡ್ನ ಒಂದು ಲಸಿಕೆಯನ್ನೂ ನೀಡಿಲ್ಲ,'' ಎಂದು ಪಾಲಿಕೆ ಸದಸ್ಯ ಗಡಿಗುಡಿಹಾಳ್ ಮಂಜುನಾಥ್ ಆರೋಪಿಸಿದ್ದಾರೆ.
ದಾವಣಗೆರೆ: ಕೊರೊನಾ ವೈರಸ್ ಬಗ್ಗೆ ವಿಭಿನ್ನವಾಗಿ ಜಾಗೃತಿ ಮೂಡಿಸಿದ ಯುವಕ
ಕೊರೊನಾ ಲಸಿಕೆ ನೀಡುವಲ್ಲಿಯೂ ರಾಜಕಾರಣ ಮಾಡಲಾಗುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ. ಯಾಕೆಂದರೆ ಪಾಲಿಕೆಯ 38ನೇ ವಾರ್ಡ್ಗೆ ಇದುವರೆಗೆ ಸರ್ಕಾರದ ವತಿಯಿಂದ ಎಷ್ಟೇ ಮನವಿ ಮಾಡಿದರೂ ಒಂದೇ ಒಂದು ಕೋವಿಶೀಲ್ಡ್ ಲಸಿಕೆ ಬಂದಿಲ್ಲವೆಂದು ಹೇಳಲಾಗಿದೆ.
"ಸುಮಾರು ಆರರಿಂದ ಎಂಟು ಸಾವಿರ ಜನಸಂಖ್ಯೆ ಹೊಂದಿರುವ ಎಂಸಿಸಿ ಬಿ ಬ್ಲಾಕ್ ವಾರ್ಡ್ನಲ್ಲಿ ಕೋವಿಶೀಲ್ಡ್ ಸಿಗದೇ ಜನರು ಪರದಾಡುತ್ತಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, 34ನೇ ವಾರ್ಡ್ಗೆ ಭೇಟಿ ಕೊಟ್ಟಾಗ ಜನರು ಲಸಿಕೆ ಪಡೆಯಲು ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಕಾಂಗ್ರೆಸ್ ಮುಖಂಡ ಹುಲಿಮನೆ ಗಣೇಶ್ ಸೇರಿದಂತೆ ಕಾಂಗ್ರೆಸ್ ಕಾರ್ಪೊರೇಟರ್ಸ್ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಸರಿಪಡಿಸುವಂತೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.''
"ನಾನು ಕೋವಿಶೀಲ್ಡ್ ನೀಡಿ ಎಂದು ಪಾಲಿಕೆಯ ಮೇಯರ್ ಹಾಗೂ ಆಯುಕ್ತರಿಗೆ ಕರೆ ಮಾಡಿ ಸಾಕಾಗಿದೆ. ಉಸ್ತುವಾರಿ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಜನರು ನಮಗೆ ವ್ಯಾಕ್ಸಿನ್ ಬೇಕು ಎನ್ನುತ್ತಿದ್ದಾರೆ. ಆದ್ರೆ ಇವರು ಕೊಡುತ್ತಿಲ್ಲ.''
"ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್ ಕೇಳಿದಾಗ 100 ಕೋವಿಶೀಲ್ಡ್ ನೀಡಿದರು. ರಾಜಕಾರಣದಲ್ಲಿ ಪಕ್ಷ ಇರಲಿ, ಜನರ ಪ್ರಾಣ ಉಳಿಸುವ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಬಿಜೆಪಿ ಗೆದ್ದಿರುವ ವಾರ್ಡ್ಗಳಿಗೆ ಲಸಿಕೆ ನೀಡಿದ್ದಾರೆ. ಕಾಂಗ್ರೆಸ್ನವರಿಗೆ ನೀಡದಿದ್ದರೆ ಹೇಗೆ?'' ಎಂದು ಗಡಿಗುಡಿಹಾಳ್ ಮಂಜುನಾಥ್ ಗೌಡ ಪ್ರಶ್ನಿಸಿದ್ದಾರೆ.
"ಇಷ್ಟು ಮಾತ್ರವಲ್ಲ, ಕೆಲ ಕಾಂಗ್ರೆಸ್ ಕಾರ್ಪೊರೇಟರ್ಗಳು ಸಹ ನಮಗೆ ನೀಡಿರುವುದು ತುಂಬಾನೇ ಕಡಿಮೆ. ಬಿಜೆಪಿ ಸದಸ್ಯರಿರುವ ವಾರ್ಡ್ಗಳಲ್ಲಿ ಹೆಚ್ಚಾಗಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ರ ಗಮನಕ್ಕೆ ತಂದಿದ್ದರೂ ಪ್ರಯೋಜನ ಶೂನ್ಯ ಎಂದು,'' ಆಕ್ರೋಶ ವ್ಯಕ್ತಪಡಿಸಿದ್ದಾರೆ.