ಮಳೆಯಾದರೂ ದಾವಣಗೆರೆಯಲ್ಲಿ ನಡೆಯಿತು "ಅಜ್ಜಿ ಹಬ್ಬ"
ದಾವಣಗೆರೆ, ಆಗಸ್ಟ್ 24: ಊರಿನಲ್ಲಿ ಸರಿಯಾಗಿ ಮಳೆಯಾಗಲೆಂದು ಬೇಡಿಕೊಂಡು ಶ್ರಾವಣದಲ್ಲಿ "ಅಜ್ಜಿ ಹಬ್ಬ" ಮಾಡುವುದು ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಜನರ ರೂಢಿ. ಆದರೆ ಈ ಬಾರಿ ದಾವಣಗೆರೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿದೆ. ಪ್ರವಾಹವೂ ಸಂಭವಿಸಿದೆ. ಈ ನಡುವೆಯೇ ಅಲ್ಲಿ ಅಜ್ಜಿ ಹಬ್ಬವನ್ನು ನಿನ್ನೆ ಆಚರಿಸಲಾಯಿತು.
ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಭಾಗದಲ್ಲಿ ವಿಶೇಷವಾಗಿ ಅಜ್ಜಿ ಹಬ್ಬ ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಉತ್ತಮ ಮಳೆ ಬೆಳೆಯಾಗಲಿ, ಜನ ಜಾನುವಾರುಗಳಿಗೆ ಯಾವುದೇ ರೋಗಗಳು ಬರದಂತಿರಲಿ ಎಂದು ಬೇಡಿಕೊಂಡು ಅಜ್ಜಿ ಅಮ್ಮನ ಹಬ್ಬವನ್ನು ಆಚರಿಸುವುದು ರೂಢಿ. ಇಂದಿಗೂ ಈ ಹಬ್ಬವನ್ನು ಈ ಭಾಗದ ಪ್ರತಿ ಹಳ್ಳಿಗಳಲ್ಲೂ ಆಚರಿಸಲಾಗುತ್ತದೆ.
ಪ್ರಕೃತಿಯನ್ನು ನಾವು ಉಳಿಸಿದರೆ, ಅದು ನಮ್ಮನ್ನು ಉಳಿಸುತ್ತದೆ
ಹಲವೆಡೆ ಆಷಾಢ ಮಾಸದಲ್ಲಿ ಈ ಹಬ್ಬವನ್ನು ಮಾಡುತ್ತಾರೆ. ಆದರೆ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಶ್ರಾವಣ ಮಾಸದಲ್ಲಿ ಈ ಹಬ್ಬ ಆಚರಿಸುವುದು ವಿಶೇಷ. ಹಬ್ಬದ ದಿನ ಗ್ರಾಮಸ್ಥರೆಲ್ಲರೂ ಒಂದೆಡೆ ಸೇರುತ್ತಾರೆ. ಗ್ರಾಮದ ಎಲ್ಲಾ ದೇವಸ್ಥಾನಗಳಲ್ಲೂ ದೇವರಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಮಾಡಲಾಗುತ್ತದೆ.
ಈ ಹಬ್ಬದ ಮತ್ತೂ ಒಂದು ವಿಶೇಷ ಎಡೆ ಇಡುವುದು. ಒಂದು ಮೊರದಲ್ಲಿ ಕುಡಿಕೆ, ಬೇವಿನ ಸೊಪ್ಪು, ದೇವಿಗೆ ಇಷ್ಟವಾದ ಹೋಳಿಗೆ, ಹಣ್ಣು ಕಾಯಿ ಇಟ್ಟು ಪೂಜೆ ಮಾಡಲಾಗುತ್ತದೆ, ನಂತರ ಕುಟುಂಬಕ್ಕೆ ಯಾವುದೇ ರೋಗ ರುಜಿನಗಳು ತಗಲದೇ ಇರಲಿ ಎಂದು ಅಜ್ಜಿ ಅಮ್ಮನನ್ನು ಬೇಡಿಕೊಂಡು ಮೊರವನ್ನು ಗ್ರಾಮದ ಪಾದಗಟ್ಟೆ ಹತ್ತಿರ ಇಟ್ಟು ಪೂಜಿಸಲಾಗುತ್ತದೆ.
ಸಂಜೆ ಊರಿನ ಗ್ರಾಮಸ್ಥರು ವಿವಿಧ ವಾದ್ಯಗಳೊಂದಿಗೆ ಅಜ್ಜಿ ಅಮ್ಮನ ಮೂರ್ತಿಯನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಾ ಪಾದಗಟ್ಟೆ ಹತ್ತಿರ ಬರುತ್ತಾರೆ. ನಂತರ ಉಚ್ಚoಗೆಮ್ಮನ ಪಾದಗಟ್ಟೆಗೆ ಪೂಜೆ ಮಾಡಿ ಅಜ್ಜಿ ಅಮ್ಮನ ಮೊರಗಳನ್ನು ಊರಿನಾಚೆ ಇಟ್ಟು ಪೂಜೆ ಸಲ್ಲಿಸಿ ಬರುತ್ತಾರೆ.