"ಶೇ.90ರಷ್ಟು ಬಿಜೆಪಿಯಲ್ಲಿ ಇರೋರು ವಲಸಿಗರೇ'': ಬಿಸಿ ಪಾಟೀಲ್
ದಾವಣಗೆರೆ, ಜೂನ್ 8: "ಮದುವೆಯಾದ ಮೇಲೆ ಸೊಸೆ ಮನೆಗೆ ಬಂದಾಗ ಮನೆ ಮಗಳೇ ಆಗ್ತಾಳೆ. ಬಿಜೆಪಿಯಲ್ಲಿ ಮೂಲ, ವಲಸಿಗ ಎಂಬ ಪ್ರಶ್ನೆಯೇ ಇಲ್ಲ. ಯಾಕೆಂದರೆ ಇಲ್ಲಿರುವವರು ಶೇ. 90ರಷ್ಟು ಬೇರೆ ಪಕ್ಷದಿಂದ ಬಂದವರೇ. ಇಲ್ಲಿ ನಮಗೆ ಒಳ್ಳೆಯ ಗೌರವ ಸಿಕ್ಕಿದೆ'' ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, "ನಮ್ಮನ್ನು ಹೊರತುಪಡಿಸಿ ಬಿಜೆಪಿಯಲ್ಲಿ ಹೆಚ್ಚು ಜನ ವಲಸಿಗರಿದ್ದಾರೆ. ಹದಿನೇಳು ಶಾಸಕರು ಯಡಿಯೂರಪ್ಪ ಅವರ ನಾಯಕತ್ವ ನಂಬಿ ಬಂದಿದ್ದೇವೆ'' ಎಂದು ಉತ್ತರಿಸಿದರು.
ಸಿಎಂ ಯಡಿಯೂರಪ್ಪ ಶಿಸ್ತು ಸಮಿತಿ ರಚನೆ ಮಾಡಿದ್ದಾರೆ, ಯಾವ ಶಾಸಕರೂ ಯಾರ ಪರವಾಗಿ ಆಗಲಿ, ವಿರೋಧವಾಗಲಿ ಮಾತನಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದುದು. ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಕಳೆದ ಮೂರು ತಿಂಗಳಿಂದ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ಬಂದ ಕಾರಣ ಸಿಎಂ ಯಡಿಯೂರಪ್ಪ, ಹೈಕಮಾಂಡ್ ಸೂಚನೆ ನೀಡಿದರೆ ರಾಜೀನಾಮೆ ನೀಡುತ್ತೇನೆ ಎಂದಿರಬಹುದು ಎಂದು ಬಿ.ಸಿ ಪಾಟೀಲ್ ಅಭಿಪ್ರಾಯಪಟ್ಟರು.
Recommended Video
ಸಚಿವ ಸಿ.ಪಿ ಯೋಗೇಶ್ವರ್ಗೆ ಮಾತನಾಡಲು ಹೋಗಲ್ಲ. ನಾನು ಇಲ್ಲಿಗೆ ಬಂದಿರುವುದು ಕೃಷಿಗೆ ಸಂಬಂಧಿಸಿರುವ ಕುರಿತ ಚರ್ಚೆಗೆ. ಕೆಲವರು ಅಸೂಯೆಯಿಂದ ಮಾತನಾಡುತ್ತಾರೆ. ಐದು ಬೆರಳುಗಳು ಒಂದೇ ಸಮನೆ ಇರೋದಿಲ್ಲ. ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಸದ್ಯಕ್ಕೆ ಸಿಎಂ ಯಡಿಯೂರಪ್ಪರ ನಾಯಕತ್ವ ಬದಲಾವಣೆ ಇಲ್ಲ. ನಾವೆಲ್ಲರೂ ಅವರ ಜೊತೆಗಿದ್ದೇವೆ ಎಂದು ಕೃಷಿ ಸಚಿವರು ಸ್ಪಷ್ಟಪಡಿಸಿದರು.