ಬಿವೈ ವಿಜಯೇಂದ್ರ ಮುಂದಿನ ಸಿಎಂ? ಪ್ರಶ್ನೆಗೆ ಬಿ.ಸಿ. ಪಾಟೀಲ್ ಉತ್ತರ ಹೀಗಿದೆ..
ದಾವಣಗೆರೆ, ಜೂ 11: ಯಾರಿಗೆ ಯೋಗ ಇದೆಯೋ ಅವರು ಸಿಎಂ ಆಗ್ತಾರೆ. ಅದಕ್ಕೆ ಯೋಗ ಇರಬೇಕು, ಯೋಗ್ಯತೆಯೂ ಇರಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಪುತ್ರ ಬಿ.ವೈ.ವಿಜಯೇಂದ್ರ ಮುಂದೆ ಸಿಎಂ ಆಗುವ ಚರ್ಚೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ದಾವಣಗೆರೆ ತಾಲೂಕಿನ ನಲ್ಕುಂದ ಗ್ರಾಮದಲ್ಲಿ ಶಾಲೆ ಉದ್ಘಾಟನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಸಿಎಂ ಆಗಲು ಜನರ ಹಾಗೂ ಹೈಕಮಾಂಡ್ ಆಶೀರ್ವಾದ ಇರಬೇಕು. ನಾಳೆ ರವಿ ಅಣ್ಣ ಅಂದರೆ ಶಾಸಕ ಎಸ್.ಎ.ರವೀಂದ್ರನಾಥ್ ಅವರೂ ಸಹ ಸಿಎಂ ಆಗಬಹುದು ಎಂದು ತಮಾಷೆ ಮಾಡಿದರು.
ಬಡತನದಲ್ಲಿ ಅರಳಿದ ಹೂವು: ಚಿನ್ನದ ಪದಕಕ್ಕೆ ಮುತ್ತಿಟ್ಟ ದಾವಣಗೆರೆಯ ಉಮೇಶ್
ದೇಶಾದ್ಯಂತ ಮುಸ್ಲಿಂರು ಪ್ರತಿಭಟನೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹೇಳಿಕೆ ಕೊಟ್ಟು 15 ದಿನವಾಗಿ, ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ಯಾರೋ ದುರುದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ. ವ್ಯವಸ್ಥಿತ ಸಂಚು ನಡೆಸಿ ಈ ರೀತಿ ಮಾಡುತ್ತಿದ್ದಾರೆ. ಕಾನೂನು ಇದೆ. ಅಲ್ಲಿ ಪ್ರಶ್ನೆ ಮಾಡಬಹುದಿತ್ತು. ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿ ನಷ್ಟ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಪಠ್ಯಪುಸ್ತಕ ವಿವಾದ ಬಿಟ್ಟರೆ ಕಾಂಗ್ರೆಸ್ ಗೆ ಬೇರೆ ಯಾವುದೇ ವಿಷಯಗಳಿಲ್ಲ
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂವರು ಗೆಲ್ಲಲು ಪ್ರಧಾನಿ ನರೇಂದ್ರ ಮೋದಿಯವರ ಅಡಳಿತ, ಬಸವರಾಜ ಬೊಮ್ಮಯಿ ಆಡಳಿತ, ಬಿಜೆಪಿ ಜನಪರ ಕಾಳಜಿಯೇ ಕಾರಣ. ಬಿಜೆಪಿ ಅಭಿವೃದ್ಧಿ ಕಾರ್ಯ ಮೆಚ್ಚಿ ಮತ ಹಾಕಿರಬಹುದು. ಕಾಂಗ್ರೆಸ್, ಜೆಡಿಎಸ್ ನಿಂದ ಇನ್ನು ಜಾಸ್ತಿ ಜನ ಬಿಜೆಪಿಗೆ ಬರುವವರಿದ್ದಾರೆ. ಈಗಲೇ ಹೇಳಿದರೆ ಅವರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಾರೆ. ಅವರು ಬಂದಾಗ ನಿಮಗೆ ಗೊತ್ತಾಗಲಿದೆ. ಆ ಪಕ್ಷಗಳಲ್ಲಿ ಪ್ರೀತಿ ಕಡಿಮೆಯಾದವರೆಲ್ಲಾ ಬಿಜೆಪಿ ಬರ್ತಾರೆ ಎಂದರು. ಸಚಿವ ಸಂಪುಟ ವಿಚಾರವನ್ನು ಸಿಎಂ ಬೊಮ್ಮಯಿ ಅವರನ್ನು ಕೇಳಿ. ಚುನಾವಣೆ ಮುಗಿದಿದೆ ಈಗ ಸಚಿವ ಸಂಪುಟ ಆಗಬಹುದು ಎಂದು ತಿಳಿಸಿದರು. ಪಠ್ಯಪುಸ್ತಕ ವಿವಾದ ಬಿಟ್ಟರೆ ಕಾಂಗ್ರೆಸ್ ನವರಿಗೆ ಬೇರೆ ಯಾವುದೇ ವಿಷಯಗಳಿಲ್ಲ. ಹಾಗಾಗಿ ಪ್ರತಿಭಟನೆ ಮಾಡುವುದು ಹೇಳಿಕೆಗಳನ್ನು ಕೊಡುವುದನ್ನು ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ವಿಘಟನಕಾರಿ ಶಕ್ತಿಗಳ ಹೆಡೆಮುರಿ ಕಟ್ಟಿ: ದಾವಣಗೆರೆ ಪೊಲೀಸರಿಗೆ ಗೃಹಸಚಿವರ ಸಲಹೆ
ರಾಜ್ಯದ ರೈತರಿಗೆ ಸಿಹಿಸುದ್ದಿ
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಹಂಗಾಮು ಆರಂಭಗೊಂಡಿದೆ. ಮುಂಗಾರು ಪೂರ್ವದಲ್ಲೇ ಉತ್ತಮ ಮಳೆಯಾಗಿದ್ದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಲು ತಯಾರಿ ನಡೆಸುತ್ತಿದ್ದಾರೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ರಾಜ್ಯದ ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ. ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ. ರೈತರು ಯಾವುದೇ ಅಪಪ್ರಚಾರದ ಮಾಹಿತಿಗೆ ಆತಂಕಕ್ಕೆ ಒಳಗಾಗದೇ ರಸಗೊಬ್ಬರವನ್ನು ಖರೀದಿ ಮಾಡಬಹುದು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ 26.76 ಲಕ್ಷ ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು, ಕೇಂದ್ರ ಸರ್ಕಾರ ಇದರ ಅನುಗುಣವಾಗಿ ಮಾಹೆವಾರು ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.