ದಾವಣಗೆರೆಯಲ್ಲಿ ವಾಕಥಾನ್ ಗೆ ಚಾಲನೆ ನೀಡಿದ ನಟ ವಿಜಯ್ ರಾಘವೇಂದ್ರ
ದಾವಣಗೆರೆ, ಫೆಬ್ರವರಿ 29: ವಿಶ್ವ ವಿರಳ ರೋಗ ದಿನಾಚರಣೆ ಪ್ರಯುಕ್ತ ದಾವಣಗೆರೆಯಲ್ಲಿ ಇಂದು ಹಿಮೊಫಿಲಿಯಾ ಸೊಸೈಟಿಯಿಂದ ವಾಕಥಾನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಟ ವಿಜಯ ರಾಘವೇಂದ್ರ ವಾಕಥಾನ್ ಗೆ ಚಾಲನೆ ನೀಡಿದರು.
"7 ಸಾವಿರ ರೋಗಕ್ಕೆ 7 ಸಾವಿರ ಮೀಟರ್ ನಡಿಗೆ" ಎನ್ನುವ ಘೋಷಣೆ ಮೂಲಕ ನೂರಾರು ಯುವಕ ಯುವತಿಯರು ಈ ವಾಕಥಾನ್ ನಲ್ಲಿ ಭಾಗವಹಿಸಿದ್ದರು. ಆರಂಭಿಕವಾಗಿ ವಾರ್ಮಪ್ ಮಾಡಲು ಝುಂಭಾ ಕ್ಲಾಸ್ ನಡೆಸಿದರು. ನಂತರ ಡಿಜೆ ಸೌಂಡ್ ಮೂಲಕ ನೃತ್ಯ ಮಾಡುತ್ತಾ ವಾಕಥಾನ್ ಆರಂಭಿಸಿದರು.
ಯಶಸ್ವಿಯಾಗಿ ಜರುಗಿದ 'ಸಿಟಿ ಟು ವಿಲೇಜ್' ವಾಕಥಾನ್
ನಟ ವಿಜಯ್ ರಾಘವೇಂದ್ರ ಅವರಿಗೆ ಹಿಮೊಫಿಲಿಯಾ ಸೊಸೈಟಿ ವತಿಯಿಂದ ಸನ್ಮಾನ ಹಮ್ಮಿಕೊಂಡಿದ್ದು, ಸಂಸದ ಜಿ.ಎಂ. ಸಿದ್ದೇಶ್ವರ್, ಎಸ್ ಪಿ ಹನುಮಂತರಾಯ ಸೇರಿದಂತೆ ಹಲವು ಗಣ್ಯರು ವಿಜಯ ರಾಘವೇಂದ್ರ ಅವರಿಗೆ ಸನ್ಮಾನ ಮಾಡಿ ವಾಕಥಾನ್ ಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, "ಈ ರೀತಿಯ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಅತಿ ವಿರಳವಾಗಿ ಬರುವಂತಹ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತದೆ. ಅಲ್ಲದೆ ಪೋಷಕರಿಗೆ ಈ ಕಾರ್ಯಕ್ರಮದಿಂದ ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಜಾಗೃತಿ ವಹಿಸಲು ಸಾಧ್ಯವಾಗುತ್ತದೆ. ಈ ವಾಕಥಾನ್ ನಲ್ಲಿ ಭಾಗವಹಿಸಿದ್ದು ನನಗೆ ಸಂತೋಷವಾಗಿದೆ. ಕಾಯಿಲೆಗೆ ತುತ್ತಾಗಿರುವವರಿಗೆ ನಾವು ಮಾನಸಿಕವಾಗಿ ಧೈರ್ಯ ತುಂಬಾಬೇಕಿದೆ" ಎಂದರು ನಟ ವಿಜಯ್ ರಾಘವೇಂದ್ರ.