"ರಾಜಕೀಯದ ಮುಂದೆ ಅರೇಹಳ್ಳಿಯಲ್ಲಿ ಪ್ರಜಾಕೀಯ ವರ್ಕ್ ಆಗಿದೆ''
ದಾವಣಗೆರೆ, ಜನವರಿ 12: ಪ್ರಜಾಕೀಯ ಸ್ಥಾಪನೆ ಮಾಡುವಾಗ ಕೆಲವರು ಹೇಳಿದ್ದರು ರಾಜಕೀಯದ ಮುಂದೆ ಪ್ರಜಾಕೀಯ ವರ್ಕ್ ಆಗಲ್ಲ ಎಂದು, ಆದರೆ ಅದನ್ನು ಅರೇಹಳ್ಳಿ ಗ್ರಾಮದ ಮತದಾರರು ಸುಳ್ಳು ಮಾಡಿ, ರಾಜಕೀಯದ ಮುಂದೆ ಪ್ರಜಾಕೀಯವನ್ನು ವರ್ಕ್ ಮಾಡಿದ್ದಾರೆ ಎಂದು ನಟ, ನಿರ್ದೇಶಕ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದರು.
ಪ್ರಜಾಕೀಯ ತತ್ವ ಸಿದ್ಧಾಂತಗಳ ಮೂಲಕ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಮ ಪಂಚಾಯತಿ(4ನೇ ವಾರ್ಡ್) ಎಸ್ಸಿ ಮೀಸಲು ಕ್ಷೇತ್ರದಿಂದ ಜಯಗಳಿಸಿದ ಚೇತನ್ ಕುಮಾರ್ ಭೇಟಿಯಾಗಲು ಅರೇಹಳ್ಳಿಗೆ ಆಗಮಿಸಿದ ನಟ, ನಿರ್ದೇಶಕ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರನ್ನು ಅದ್ಧೂರಿಯಾಗಿ ಅರೇಹಳ್ಳಿ ಗ್ರಾಮಸ್ಥರು ಸ್ವಾಗತಿಸಿದರು.
ಈ ವೇಳೆ ಟ್ರಾಕ್ಟರ್ ಟ್ರೈಲರ್ ಮೇಲೆ ನಿಂತು ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಉಪೇಂದ್ರ, ಅರೇಹಳ್ಳಿ ಗ್ರಾಮ ಜನತೆ ಪ್ರಜಾಕೀಯ ಅಭ್ಯರ್ಥಿಯನ್ನು ಗೆಲ್ಲಿಸಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಎಲ್ಲ ಹಳ್ಳಿಗಳಿಗೆ ನಿಮ್ಮ ಮಾದರಿಯನ್ನು ಸಾರುವಂತಾಗಬೇಕು. ನೀವು ಗೆಲಿಸಿರುವ ಚೇತನ್ ಕುಮಾರ್ ಪ್ರಭುವಲ್ಲ, ಅವರು ನಿಮ್ಮ ಜನ ಸೇವಕ. ಈ ಗೆಲವು ಪ್ರತಿ ಹಳ್ಳಿಗೂ ಮದರಿಯಾಗಬೇಕು ಎಂದರು. ಕರ್ನಾಟಕಕ್ಕೆ ನಿಮ್ಮ ಅರೇಹಳ್ಳಿ ಸ್ಪೂರ್ತಿ ಎಂದಾಗ, ಗ್ರಾಮಸ್ಥರು ಉಪೇಂದ್ರ ಅವರಿಗೆ ಬಹುಪರಾಕ್ ಹಾಕಿದರು.
ಹೇಳಿದಂತೆ ಕೆಲಸ ಮಾಡೋರಿಗೆ ಮತ ಹಾಕಬೇಕು. ಇಷ್ಟು ದಿನ ಪಕ್ಷ ನೋಡಿ, ದೊಡ್ಡ ವ್ಯಕ್ತಿ ನೋಡಿ ಮತ ಹಾಕುತ್ತಿದ್ದರು. ಆದರೆ ಈಗ ಅರೇಹಳ್ಳಿ ಗ್ರಾಮಸ್ಥರು ಚೇತನ್ ಕುಮಾರ್ ಅವರ ಸಿದ್ಧಾಂತ ನೋಡಿ ಮತ ಹಾಕಿದ್ದಾರೆ. ಗ್ರಾಮಸ್ಥರ ವಿಶ್ವಾಸವನ್ನು ಪ್ರಜಾಕೀಯ ಬೆಂಬಲಿತ ಅಭ್ಯರ್ಥಿ ಚೇತನ್ ಕುಮಾರ್ ಉಳಿಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
ಪ್ರಜಾಕೀಯ ಸಿದ್ದಾಂತದ ಮೇಲೆ ಗೆದ್ದಿರುವಂತಹ ಅಭ್ಯರ್ಥಿ ಚೇತನ್ ಕುಮಾರ್ ಅವರು, ಆರು ತಿಂಗಳಿಗೆ ಒಮ್ಮೆ ತನ್ನ ಕೆಲಸ ಹೇಗೆ ಮಾಡಿದ್ದೇನೆ ಎಂದು ನಿಮ್ಮನ್ನು ಕೇಳುತ್ತಾರೆ. ಏನಾದರೂ ಎರಡು ಮೂರು ಬಾರಿ ಕೆಲಸ ಚೆನ್ನಾಗಿ ಮಾಡಿಲ್ಲ ಎಂದರೆ ರಾಜೀನಾಮೆ ಕೊಡ್ತಾರೆ ಎಂದು ಉಪೇಂದ್ರ ಹೇಳಿದರು. ಈ ವೇಳೆ ಅಪಾರ ಅಭಿಮಾನಿಗಳು, ಗ್ರಾಮಸ್ಥರು ಸೇರಿದ್ದರು.