ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚ ಸುದೀಪ್ ನೋಡಲು ನೂಕುನುಗ್ಗಲು
ದಾವಣಗೆರೆ, ಫೆಬ್ರವರಿ 10: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ನಟ ಸುದೀಪ್ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.
ಕಾರ್ಯಕ್ರಮ ವೇದಿಕೆಗೆ ಆಗಮಿಸಿದ ಸುದೀಪ್ರನ್ನು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳು ಸನ್ಮಾನಿಸಿದರು. ವೀರ ಮದಕರಿ ಚಿತ್ರದ ಡೈಲಾಗ್ ಮೂಲಕ ಕಾರ್ಯಕ್ರಮಕ್ಕೆ ಸುದೀಪ್ ಕಿಚ್ಚು ಹತ್ತಿಸಿದರು. ಬಳಿಕ ವಾಸುಕಿ ವೈಭವ್ ನ ಹಾಡುನ್ನು ಹಾಡಿ ರಂಜಿಸಿದರು.
ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಮೇಲೆ ಮುನಿಸಿಕೊಂಡರಾ ಸಚಿವ ಶ್ರೀರಾಮುಲು...
ಸುದೀಪ್ ಬರುವ ವೇಳೆ ಅಭಿಮಾನಿಗಳಿಂದ ನೂಕು ನುಗ್ಗಲು ಉಂಟಾಯಿತು. ಬ್ಯಾರಿಕೇಡ್ ತಳ್ಳಿ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ವೇದಿಕೆಯಲ್ಲಿ ಮಾತನಾಡಿದ ನಟ ಸುದೀಪ್, ""ನಾನು ಇಲ್ಲಿಗೆ ಬಂದದ್ದು ಖುಷಿಯಾಗಿದೆ. ಇಷ್ಟೊಂದು ಜನ ಸೇರಿದ್ದಾರೆ ಎಂದುಕೊಂಡಿರಲಿಲ್ಲ. ನಾನು ಸೋತಾಗ, ಗೆದ್ದಾಗಲೂ ನೀವು ನನ್ನ ಕೈಬಿಟ್ಟಿಲ್ಲ. ನಿಮ್ಮ ಅಭಿಮಾನಕ್ಕೆ ನನ್ನ ನಮನಗಳು ಎಂದು ಹೇಳಿದರು.
ಇನ್ನು ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ನೂಕು ನುಗ್ಗಲು ಉಂಟಾಗಿದ್ದರಿಂದ ನೂರಾರು ಕುರ್ಚಿ ಗಳು ಪುಡಿಪುಡಿಯಾಗಿದ್ದು, ಹತ್ತಾರು ವಿಐಪಿ ಚೇರ್ ಗಳು ಮುರಿದು ಬಿದ್ದಿದ್ದವು.