ಅಮ್ಮನ ನರಳಾಟ ನೋಡಲಾಗದೇ ವೀಡಿಯೋ ಮೂಲಕ ದೂರಿದ ಯುವಕರು
ದಾವಣಗೆರೆ, ಅಕ್ಟೋಬರ್ 10: "ನಮ್ಮ ತಾಯಿ ನರಳಾಡುತ್ತಿದ್ದರೂ ಯಾರೂ ಇಲ್ಲಿಗೆ ಬಂದು ಚಿಕಿತ್ಸೆ ನೀಡುತ್ತಿಲ್ಲ. ಇಲ್ಲಿ ವೈದ್ಯರು ಸಹ ಇಲ್ಲ. ನಮಗೆ ಯಾರು ಚಿಕಿತ್ಸೆ ಕೊಡುತ್ತಾರೆ? ಖಾಸಗಿ ಆಸ್ಪತ್ರೆಗೆ ಹೋಗಲು ನಮ್ಮ ಬಳಿ ಹಣವಿಲ್ಲ. ಈಗ ನಮ್ಮ ಮುಂದಿನ ಪರಿಸ್ಥಿತಿ ಏನು?" ಎಂದು ಸೆಲ್ಫೀ ವೀಡಿಯೋ ಮಾಡುತ್ತಾ ಅಳಲು ತೋಡಿಕೊಂಡಿದ್ದಾರೆ ಅರಸೀಕೆರೆಯ ಈ ಯುವಕರು.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ 45ಕ್ಕೂ ಹೆಚ್ಚು ವೈದ್ಯರಿಗೆ ನೋಟಿಸ್ ಜಾರಿ
ಬಳ್ಳಾರಿ ಜಿಲ್ಲೆಯಲ್ಲಿ ಹರಪ್ಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿನ್ನೆ ರಾತ್ರಿ ಕೆರೆಗುಡಿಹಳ್ಳಿ ಗ್ರಾಮದ ಯಂಕಮ್ಮ ಎಂಬುವರು ಬೆನ್ನು ಮೂಳೆ ಮುರಿದುಕೊಂಡು ಚಿಕಿತ್ಸೆಗಾಗಿ ಬಂದಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ. ವೈದ್ಯರ ಮಾತಿರಲಿ, ಪ್ರಥಮ ಚಿಕಿತ್ಸೆ ನೀಡುವವರೂ ಇರಲಿಲ್ಲ. ಎಷ್ಟು ಹೊತ್ತು ಕಾದರೂ ಪ್ರಯೋಜನವಾಗಿಲ್ಲ. ಯಾರ ಸುಳಿವೂ ಸಿಕ್ಕಿಲ್ಲ. ಆಗ ನರಳಾಡುತ್ತಿರುವ ತಾಯಿಯನ್ನು ನೋಡಲಾಗದೇ, ಆಕೆಯ ಮಕ್ಕಳು ಸೆಲ್ಫೀ ವೀಡಿಯೋ ಮಾಡಿ ಚಿಕಿತ್ಸೆ ನೀಡುವಂತೆ ಅಳಲು ತೋಡಿಕೊಂಡಿದ್ದಾರೆ.
ಅಷ್ಟಕ್ಕೂ ಇದು ಬಿಜೆಪಿ ಸಂಸದ ದೇವೇಂದ್ರಪ್ಪ ಅವರ ಸ್ವಗ್ರಾಮದಲ್ಲಿನ ಸರ್ಕಾರಿ ಆಸ್ಪತ್ರೆ. ಈ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲವಾಗಿದ್ದು, ಚಿಕಿತ್ಸೆ ಸಿಗದೆ ರೋಗಿಗಳು ಹೈರಾಣಾಗಿದ್ದಾರೆ. ವೈದ್ಯರಿಲ್ಲದೆ ಪರದಾಡುವಂತಾಗಿದೆ ಇಲ್ಲಿನ ಸ್ಥಿತಿ. ಇದರತ್ತ ಯಾರೂ ಗಮನ ಹರಿಸುತ್ತಿಲ್ಲ, ಯಾರೂ ಕ್ರಮ ತೆಗೆದುಕೊಂಡಿಲ್ಲ. ಈಗಲಾದರೂ ಅಧಿಕಾರಿಗಳು, ಸಂಸದ ದೇವೇಂದ್ರಪ್ಪ ಅವರು ಇತ್ತ ಗಮನಹರಿಸಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೌಲಭ್ಯ ಒದಗಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.