ದಾವಣಗೆರೆ; ಹೋಟೆಲ್ ಉಪಾಹಾರ ಸೇವಿಸಿ 30 ಗ್ರಾಹಕರು ಅಸ್ವಸ್ಥ
ದಾವಣಗೆರೆ, ನವೆಂಬರ್ 23: ಹದಡಿ ರಸ್ತೆಯ ಹೋಟೆಲ್ ವೊಂದರಲ್ಲಿ ಆಹಾರ ಸೇವಿಸಿದ ಸುಮಾರು 30 ಗ್ರಾಹಕರು ಅಸ್ವಸ್ಥರಾಗಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆಯ ಹಳ್ಳಿ ಸೊಗಡು ಹೋಟೆಲ್ ನಲ್ಲಿ ಭಾನುವಾರ ಇಡ್ಲಿ, ದೋಸೆ ಸೇವಿಸಿದ್ದ ಗ್ರಾಹಕರು ಮನೆಗೆ ಹಿಂತಿರುಗಿದ್ದಾರೆ. ಆನಂತರ ಅವರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತು ಆಸ್ಪತ್ರೆಗೆ ದಾಖಲಾಗಿದ್ದಾರೆ. ಫುಡ್ ಪಾಯ್ಸನ್ ಆಗಿ ಇವರು ಅಸ್ವಸ್ಥಗೊಂಡಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮಂಡ್ಯ; ದೇವಾಲಯದಲ್ಲಿ ಪ್ರಸಾದ ವಿತರಣೆಗೆ ತಡೆ
ಘಟನೆ ನಡೆದ ಬೆನ್ನಲ್ಲೇ ಹೋಟೆಲ್ ಗೆ ಆರೋಗ್ಯ ಶಾಖೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪಾಲಿಕೆಯಿಂದ ಹೋಟೆಲ್ ಗೆ ಈ ಮುನ್ನ ಎರಡು ಬಾರಿ ನೋಟಿಸ್ ನೀಡಿದ್ದರೂ ಒಂದು ವರ್ಷದಿಂದ ಪರವಾನಗಿಯನ್ನು ನವೀಕರಿಸಲಿಲ್ಲ. ಆಹಾರ ಸುರಕ್ಷತಾ ಇಲಾಖೆಯಡಿ ಲೈಸೆನ್ಸ್ ಪಡೆದಿರಲಿಲ್ಲ ಎಂದು ತಿಳಿದುಬಂದಿದೆ. ಜೊತೆಗೆ ಹೋಟೆಲ್ ನಲ್ಲಿ ಶುದ್ಧವಾದ ಕುಡಿಯುವ ನೀರು ವಿತರಣೆಗೆ ಕ್ರಮ ವಹಿಸಿರಲಿಲ್ಲ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಪಾಲಿಕೆ ಸಿಬ್ಬಂದಿ ಹೋಟೆಲ್ ಗೆ ಬೀಗ ಜಡಿದಿದ್ದಾರೆ. ಹೋಟೆಲ್ ಬಂದ್ ಮಾಡಿ ಕ್ರಮ ತೆಗೆದುಕೊಂಡಿರುವುದಾಗಿ ಪಾಲಿಕೆ ಆರೋಗ್ಯ ಶಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.