ದಾವಣಗೆರೆ: ಕೊರೊನಾ ವೈರಸ್ ಬಗ್ಗೆ ವಿಭಿನ್ನವಾಗಿ ಜಾಗೃತಿ ಮೂಡಿಸಿದ ಯುವಕ
ದಾವಣಗೆರೆ, ಜೂನ್ 9: ಕೊರೊನಾ ಸೋಂಕು ಹರಡದಂತೆ ಎಲ್ಲೆಡೆ ಜಾಗೃತಿ ಮೂಡಿಸುವ ಕೆಲಸ ಜೋರಾಗಿಯೇ ನಡೆಯುತ್ತಿದೆ. ಆದರೆ, ದಾವಣಗೆರೆಯಲ್ಲಿ ಕಲಾವಿದರೊಬ್ಬರು ವಿಭಿನ್ನವಾಗಿ ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
Recommended Video
ದಾವಣಗೆರೆ ನಗರದ ಭಾರತ್ ಕಾಲೋನಿ ನಿವಾಸಿ ರಾಕೇಶ್ ಸೊಮ್ಲಿ ಈ ಕಾರ್ಯ ಮಾಡುತ್ತಿರುವ ಯುವಕ. ಬೆಣ್ಣೆನಗರಿಯಲ್ಲೂ ಕೋವಿಡ್ -19 ಪ್ರಕರಣಗಳು ಹೆಚ್ಚಾಗಿ ದೃಢಪಡುತ್ತಿವೆ. ಅನ್ಲಾಕ್ ಆದಾಗ ನಗರದ ಕೆ.ಆರ್ ಪೇಟೆ, ಮಂಡಿಪೇಟೆ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಜನಸಂದಣಿ ಇರುತ್ತದೆ. ಯಾವಾಗಲೂ ಜನರ ನಿರ್ಲಕ್ಷ್ಯ ಕಂಡು ಬರುತ್ತದೆ, ಜನರು ಕೋವಿಡ್ ನಿಯಮಾವಳಿ ಉಲ್ಲಂಘಿಸುತ್ತಾರೆ ಎಂಬ ವಿಚಾರ ಗಮನಿಸಿದ್ದ ರಾಕೇಶ್, ಕೊರೊನಾ ರೀತಿಯ ವೇಷ ಧರಿಸಿ ಜನರಲ್ಲಿ ಕೊರೊನಾ ಅಪಾಯದ ಬಗ್ಗೆ ಎಚ್ಚರಿಸುವ ಕೈಂಕರ್ಯ ನಡೆಸುತ್ತಿದ್ದಾರೆ.
ಕೆ.ಆರ್ ಮಾರುಕಟ್ಟೆಯಲ್ಲಿ ಮಾಸ್ಕ್ ಧರಿಸದವರಿಗೆ ಸೂಚನೆ ನೀಡುತ್ತಾ, ನಿಮ್ಮ ಮನೆಯಲ್ಲಿ ಮಕ್ಕಳಿದ್ದಾರೆ, ಹಿರಿಯರಿದ್ದಾರೆ. ಮುಖಗವಸು ಧರಿಸದಿದ್ದರೆ ಅಪಾಯ ಎದುರಾಗುತ್ತದೆ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ನೀವೂ ಹುಷಾರಾಗಿರಿ. ಕೋವಿಡ್ ಮಾರ್ಗಸೂಚಿ ಪಾಲಿಸಿ, ಕೊರೊನಾದಿಂದ ದೂರ ಇರಿ, ಮನೆಯಲ್ಲೇ ಇರಿ ಎಂಬ ಕಿವಿಮಾತು ಹೇಳುತ್ತಾ ರಸ್ತೆಯಲ್ಲಿ ಹೋಗುತ್ತಿದ್ದರೆ ಎಲ್ಲರ ಚಿತ್ತ ರಾಕೇಶ್ ಅವರತ್ತ ನೆಟ್ಟಿರುತ್ತದೆ.
ವೃತ್ತಿಯಲ್ಲಿ ಕಲಾವಿದರಾದರೂ ಜನರಿಗೆ ತನ್ನಿಂದಾದಷ್ಟು ಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಕೈಗೊಂಡಿದ್ದಾರೆ. ಕೊರೊನಾದಂತ ವಿಷಮ ಪರಿಸ್ಥಿತಿಯಲ್ಲಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಕೊರೊನಾ ವೇಷ ಧರಿಸಿ ಜಾಗೃತಿ ಮೂಡಿಸುತ್ತಿದ್ದೇನೆ. ಜನರೆಲ್ಲರೂ ಆರೋಗ್ಯವಾಗಿರಬೇಕು. ಜೊತೆಗೆ ಕೊರೊನಾ ಸೋಂಕು ಹೊಡೆದೋಡಿಸಬೇಕು ಎಂದು ರಾಕೇಶ್ ಹೆಳುತ್ತಾರೆ.
ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆಯೂ, ಮಾಸ್ಕ್ ಧಾರಣೆಯನ್ನು ಮಾಡುವಂತೆ ಮನವಿ ಮಾಡಿದ ಯುವಕನ ಕಾರ್ಯಕ್ಕೆ ದಾವಣಗೆರೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.