ದಾವಣಗೆರೆ: ಚಾಕೊಲೆಟ್ ಆಸೆ, ಮಹಿಳೆಯ ಪ್ರಾಣ ಉಳಿಸಿದ ಬಾಲಕ
ದಾವಣಗೆರೆ, ನವೆಂಬರ್ 18: ಅಕ್ಕನೊಂದಿಗೆ ಚಾಕೊಲೆಟ್ ಕೊಳ್ಳಲು ಅಂಗಡಿಗೆ ಹೋದ ಬಾಲಕನೊಬ್ಬ ಅಂಗಡಿ ಮಾಲಕಿ ಕಿಟಕಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನ್ನು ಕಂಡು, ತಕ್ಷಣ ಸಮಯಪ್ರಜ್ಞೆ ಮೆರೆದು, ಪ್ರಾಣ ಉಳಿಸಿದ ಘಟನೆ ದಾವಣಗೆರೆಯ ಆವರಗೆರೆ ಸಮೀಪದ ಉತ್ತಮ್ ಚಂದ್ ಬಡಾವಣೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಸುಶಾಂತ ಬಡಾವಣೆ ವಾಸಿಯಾದ ಗುಪ್ತಚರ ಪೊಲೀಸ್ ಇಲಾಖೆಯ ಎಎಸ್ಐ ವೆಂಕಟೇಶ ರೆಡ್ಡಿ, ಡಿ.ಜೆ.ಲಕ್ಷ್ಮೀ ದಂಪತಿಯ ಮಕ್ಕಳಾದ 12 ವರ್ಷದ ಜಿ.ವಿ.ಸುಶಾಂತ ರೆಡ್ಡಿ, 19 ವರ್ಷದ ಮಗಳು ಜಿ.ವಿ.ಪ್ರಣೀತಾ ರೆಡ್ಡಿ ಸಮಯಪ್ರಜ್ಞೆ ಮರೆದ ಸಾಹಸಿಗಳಾಗಿದ್ದಾರೆ.
ಕಾಡಿನಲ್ಲೇ ರಾತ್ರಿ ಕಳೆದ ಪುಟ್ಟ ಬಾಲಕಿ; ದಾವಣಗೆರೆಯಲ್ಲೊಂದು ಅಚ್ಚರಿಯ ಸಂಗತಿ...
ಆತ್ಮಹತ್ಯೆಗೆ ಪ್ರಯತ್ನಿಸಿ ಅಸ್ವಸ್ಥಗೊಂಡಿರುವ ಮಹಿಳೆ ದಾವಣಗೆರೆ ನಗರದ ಬಾಪೂಜಿ ಆಸ್ಪತ್ರೆಯ ಐಸಿಯುನಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.
ಪ್ರಣೀತಾ ರೆಡ್ಡಿ, ಸುಶಾಂತ ರೆಡ್ಡಿ ಅಂಗಡಿಗೆ ಹೋಗಿದ್ದರು. ಕೂಗಿದರೂ ಬಾಗಿಲು ತೆರೆಯಲಿಲ್ಲ. ಮಧ್ಯಾಹ್ನ ಸಮಯ ಅಂಗಡಿಯವರು ಊಟಕ್ಕೆ ಒಳಗಿರಬಹುದೆಂದು ಕಾದಿದ್ದರು.
ಬಳಿಕ ಬಾಲಕ ಸುಶಾಂತ ಮನೆ ಕಿಟಕಿಯಿಂದ ಇಣುಕಿ ನೋಡಿದಾಗ ಅಲ್ಲಿ ಅಂಗಡಿ ಮಾಲಕಿ ಕಿಟಕಿಗೆ ಟವಲು ಹಾಕಿಕೊಂಡು, ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದರು. ಅವರ ಬಾಯಿಯಿಂದ ರಕ್ತ ಸುರಿಯುತ್ತಿದ್ದುದನ್ನು ಕಂಡು ತಕ್ಷಣವೇ ಜೋರಾಗಿ ಕೂಗಿದ್ದಾನೆ.
ಮನೆಯೊಳಗೆ ಅಕ್ಕ ಪ್ರಣೀತಾ ಜೊತೆ ಹೋಗಿ ಮಹಿಳೆ ರಕ್ಷಣೆಗೆ ಮುಂದಾಗಿದ್ದಾನೆ. ಅದೇ ಸಮಯಕ್ಕೆ ಅಂಗಡಿ ಮಾಲಕಿಯ 14 ವರ್ಷದ ಮಗನೂ ಅಲ್ಲಿಗೆ ಬಂದಿದ್ದಾನೆ.
ನೆರೆಹೊರೆಯವರೂ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಮಹಿಳೆಯು ಕೊರಳಿಗೆ ಬಿಗಿದುಕೊಂಡಿದ್ದ ಟವೆಲ್ ಬಿಡಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಅಷ್ಟರಲ್ಲಿ ಸುಶಾಂತ ಅಲ್ಲಿದ್ದವರ ಮೊಬೈಲ್ನಿಂದ ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾನೆ. ಕೆಲವೇ ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಬಂದಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಬಾಪೂಜಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು.
ಅಸ್ವಸ್ಥ ಮಹಿಳೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಗಡಿ ಮಾಲಕಿ ಆತ್ಮಹತ್ಯೆ ಪ್ರಯತ್ನಕ್ಕೆ ಕಾರಣವೇನೆಂದು ಗೊತ್ತಾಗಿಲ್ಲ. ಮಹಿಳೆಯ ಪತಿ ಕೆಲಸದ ನಿಮಿತ್ತ ಹರಿಹರಕ್ಕೆ ಹೋಗಿದ್ದರು. ವಿಷಯ ತಿಳಿದು ಪತಿಯೂ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
Recommended Video
ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಸುಶಾಂತ ರೆಡ್ಡಿ, ಪ್ರಣೀತಾ ರೆಡ್ಡಿ ಸಮಯ ಪ್ರಜ್ಞೆಗೆ ಸ್ಥಳೀಯರು, ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.