ದಾವಣಗೆರೆ ಜಿಲ್ಲೆಯಲ್ಲಿ 8168 ಮಕ್ಕಳಲ್ಲಿ ಅಪೌಷ್ಟಿಕತೆ!
ದಾವಣಗೆರೆ, ಜೂನ್ 23: ದಾವಣಗೆರೆ ಜಿಲ್ಲೆಯಲ್ಲಿ 180 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ, 8168 ಮಕ್ಕಳಲ್ಲಿ ಅಪೌಷ್ಟಿಕತೆ ಇರುವುದು ಆತಂಕ ಮೂಡಿಸಿದೆ.
ದಾವಣಗೆರೆ ಜಿಲ್ಲೆಯಲ್ಲಿ ಆರು ವರ್ಷದೊಳಗಿನ 1,30,220 ಹಾಗೂ 6 ರಿಂದ 16 ವರ್ಷದೊಳಗಿನ 1,18,140 ಮಕ್ಕಳು ಸೇರಿದಂತೆ ಒಟ್ಟು 2,48,360 ಮಕ್ಕಳಿದ್ದಾರೆ. ಶಿಕ್ಷಣ ಇಲಾಖೆಯು ಕೂಡ 272 ಮಕ್ಕಳನ್ನು ತೀವ್ರ ಆರೋಗ್ಯ ಸಮಸ್ಯೆ ಹೊಂದಿರುವ ಮಕ್ಕಳೆಂದು ಗುರುತಿಸಿದೆ.
ದಾವಣಗೆರೆಯ ಮಗುವಿನಲ್ಲಿ MIS-C ಸೋಂಕು ಪತ್ತೆ!
"ತೀವ್ರ ಅಪೌಷ್ಟಿಕತೆ ಹಾಗೂ ಅಪೌಷ್ಟಿಕತೆ ಹೊಂದಿರುವ ಮಕ್ಕಳ ಆರೋಗ್ಯ ಸುಧಾರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಲ್ಲದೆ ಈ ಮಕ್ಕಳ ತಾಯಂದಿರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ. ಮಕ್ಕಳ ಮನೆಗೆ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರು ಭೇಟಿ ನೀಡಿ, ಮೊಟ್ಟೆ ಹಾಗೂ ಪೌಷ್ಠಿಕ ಆಹಾರ ನೀಡಿ, ಪಾಲಕರಿಂದ ಸಹಿ ಪಡೆಯುವ ವ್ಯವಸ್ಥೆ ಜಾರಿಗೊಳಿಸಿದೆ. ಆಯುಷ್ ಇಲಾಖೆಯಿಂದಲೂ ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಶಕ್ತಿವರ್ಧಕ ಮತ್ತು ಸ್ಪಿರುಲಿನಾ ಚಿಕ್ಕಿ ವಿತರಿಸಲು ಕ್ರಮ ಕೈಗೊಂಡಿದೆ,'' ಎಂದು ಮಹಿಳಾ ಮತ್ತು ಮಕ್ಕಳ ಉಪನಿರ್ದೇಶಕ ವಿಜಯ್ ಕುಮಾರ್ ಹೇಳಿದ್ದಾರೆ.
"ಕಳೆದ ವರ್ಷ 73 ಹಾಗೂ ಈ ವರ್ಷ 20 ಬಾಲ್ಯ ವಿವಾಹಗಳನ್ನು ತಡೆಗಟ್ಟಿದ್ದು, ಒಟ್ಟು 10 ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ವಿಕಲಚೇತನರು, ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಂಧಿಸಿದಂತೆ ಶೇ.90 ರಷ್ಟು ಲಸಿಕೆ ಕಾರ್ಯ ಆಗಿದೆ. ಕೋವಿಡ್ನಿಂದ ಮೃತಪಟ್ಟ ಜಿಲ್ಲೆಯ ಓರ್ವ ಅಂಗನವಾಡಿ ಕಾರ್ಯಕರ್ತೆಯ ಅವಲಂಬಿತರಿಗೆ ಸರ್ಕಾರದಿಂದ 30 ಲಕ್ಷ ರೂ. ಪರಿಹಾರ ನೀಡಲಾಗಿದೆ,'' ಎಂದು ತಿಳಿಸಿದ್ದಾರೆ.
"ದಾವಣಗೆರೆ ಜಿಲ್ಲೆಯಲ್ಲಿ 19 ವರ್ಷದೊಳಗಿನ 7 ಲಕ್ಷ ಮಕ್ಕಳಿದ್ದು, ಶೇ.10ರಷ್ಟು ಮಕ್ಕಳಿಗೆ ಸೋಂಕು ಬರುವ ಅಂದಾಜು ಮಾಡಿಕೊಂಡಿದ್ದು, ಈ ಪೈಕಿ ಶೇ.10 ಅಂದರೆ 7 ಸಾವಿರ ಮಕ್ಕಳ ಮೇಲೆ ಪರಿಣಾಮ ಉಂಟಾಗುವ ಸಂಭವವಿದೆ. ಇದುವರೆಗೆ ಕೋವಿಡ್ನಿಂದ ಮಕ್ಕಳಲ್ಲಿ ತೀವ್ರ ಗಂಭೀರತೆ ಉಂಟಾಗಿರುವ ಪ್ರಕರಣಗಳು ವರದಿಯಾಗಿಲ್ಲ. ಜಿಲ್ಲೆಯಲ್ಲಿ 3ನೇ ಅಲೆ ನಿರ್ವಹಣೆಗಾಗಿ ಈಗಾಗಲೆ 68 ಮಕ್ಕಳ ತಜ್ಞ ವೈದ್ಯರನ್ನು ಗುರುತಿಸಿದ್ದು, ಮಕ್ಕಳಿಗಾಗಿಯೇ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ 60 ಆಕ್ಸಿಜನ್ ಬೆಡ್ ಸಾಮರ್ಥ್ಯದ ಮಕ್ಕಳ ವಾರ್ಡ್ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ 10 ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.''
"ಮಕ್ಕಳಿಗೆ ಸೋಂಕು ತಗುಲಿ, ರೋಗ ಲಕ್ಷಣ ಕಂಡುಬರದ ಮಕ್ಕಳ ಆರೈಕೆಗಾಗಿ ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿಗೆ 2 ರಂತೆ ಒಟ್ಟು 10 ಮಕ್ಕಳ ಕೋವಿಡ್ ಕೇರ್ ಸೆಂಟರ್ಗಳನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರಾರಂಭಿಸಲು ಕ್ರಮ ಕೈಗೊಂಡಿದ್ದು, ಒಟ್ಟು 2500 ಬೆಡ್ಗಳನ್ನು ಸುವ್ಯವಸ್ಥಿತ ರೀತಿಯಲ್ಲಿ ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ,'' ಎಂದು ಡಿಎಚ್ಒ ನಾಗರಾಜ್ ಮಾಹಿತಿ ನೀಡಿದ್ದಾರೆ.
"ವಿಕಲಚೇತನರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆಗಾಗಿ 60 ಮಕ್ಕಳ ವೆಂಟಿಲೇಟರ್ ಅಗತ್ಯತೆ ಹಾಗೂ ಅಗತ್ಯ ಔಷಧಿಗಳ ಪೂರೈಕೆ ಬಗ್ಗೆ ಈಗಾಗಲೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಕ್ಕಳ ತಜ್ಞ ವೈದ್ಯರು, ಆಶಾ, ಅಂಗನವಾಡಿ, ಶುಶ್ರೂಷಕರೊಂದಿಗೆ ಜುಲೈ ಮೊದಲ ವಾರದಲ್ಲಿ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗುವುದು,'' ಎಂದಿದ್ದಾರೆ.
ಕೋವಿಡ್ ಮೊದಲನೆ ಅಲೆಯಲ್ಲಿ 18 ವರ್ಷದೊಳಗಿನ ಒಟ್ಟು 1875 ಮಕ್ಕಳು ಸೋಂಕಿಗೆ ಒಳಗಾಗಿದ್ದರು, 2ನೇ ಅಲೆಯಲ್ಲಿ ಒಟ್ಟು 2283 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಯಾವುದೇ ಮಕ್ಕಳಲ್ಲಿ ತೀವ್ರ ಗಂಭೀರ ಸ್ವರೂಪದ ಪ್ರಕರಣ ವರದಿಯಾಗಿಲ್ಲ. ಆದರೆ ಮಕ್ಕಳಲ್ಲಿ ಸೋಂಕು ಹರಡುತ್ತಿರುವುದು ಪೋಷಕರಲ್ಲಿ ಭಯ ಹುಟ್ಟಿಸಿದೆ.
Recommended Video