"ವೆಂಟಿಲೇಟರ್ ಬಳಸುವ ಪರಿಸ್ಥಿತಿ ಬರುವುದೇ ಬೇಡ"; ಬಿ. ಶ್ರೀರಾಮುಲು
ದಾವಣಗೆರೆ, ಏಪ್ರಿಲ್ 14: ಶೀಘ್ರದಲ್ಲಿಯೇ ದಾವಣಗೆರೆ ಜಿಲ್ಲೆಗೆ ಕೋವಿಡ್ ತಪಾಸಣಾ ಲ್ಯಾಬ್ ಅನ್ನು ಮಂಜೂರು ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಕೊರೊನಾ ತಪಾಸಣೆಗಾಗಿ 16 ಲ್ಯಾಬ್ ಗಳಿವೆ. 10 ಲ್ಯಾಬ್ ಗಳನ್ನು ಹೊಸದಾಗಿ ಮಂಜೂರು ಮಾಡಲಾಗುವುದು. ಅದರಲ್ಲಿ ಒಂದನ್ನು ದಾವಣಗೆರೆ ಜಿಲ್ಲೆಗೂ ಒದಗಿಸಲಾಗುವುದು ಎಂದರು.
12ನೇ ಸ್ಥಾನಕ್ಕೆ ಇಳಿದ ರಾಜ್ಯ
ರಾಜ್ಯದಲ್ಲಿ ಒಟ್ಟು 258 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 65 ಜನರು ಗುಣಮುಖರಾಗಿದ್ದಾರೆ. ಈ ಮೊದಲು ಕೊರೊನಾ ಸೋಂಕಿತರಲ್ಲಿ ರಾಜ್ಯ 3ನೇ ಸ್ಥಾನದಲ್ಲಿತ್ತು. ನಿಯಂತ್ರಣ ಕ್ರಮ ಕೈಗೊಂಡ ಮೇಲೆ 12ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 10 ಸಾವಿರ ಐಸಿಯು ಬೆಡ್ ಸೌಲಭ್ಯ ಹೊಂದಿದ್ದೇವೆ. ಸರ್ಕಾರಿ ಹಾಗೂ ಖಾಸಗಿ ಸೇರಿ 700 ವೆಂಟಿಲೇಟರ್ ಸೌಲಭ್ಯವಿದೆ. ರಾಜ್ಯದ ಯಾವೊಬ್ಬ ರೋಗಿಯೂ ವೆಂಟಿಲೇಟರ್ಗೆ ಹೋಗದಂತೆ ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ನೀಡಬೇಕು. ವೆಂಟಿಲೇಟರ್ ಆಪರೇಟರ್ಗಳಿಗೆ ತರಬೇತಿ ನೀಡಲು ಕ್ರಮ ವಹಿಸಲಾಗುವುದು. ಬೇರೆ ರಾಷ್ಟ್ರಗಳ ಜನರಿಗೆ ಹೋಲಿಸಿದಲ್ಲಿ ನಮ್ಮ ದೇಶದ ಜನರಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿದೆ. ಇದು ಕೊರೊನಾ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ನಮ್ಮಲ್ಲಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ವೈರಾಣುವಿನಿಂದ ಅಂತರ ಕಾಯ್ದುಕೊಳ್ಳಬೇಕು ಎಂದರು.
ಕೊರೊನಾ ನಿಯಂತ್ರಣದಲ್ಲಿ ಕರ್ನಾಟಕ ಗೆದ್ದಿದೆ: ಸಚಿವ ಶ್ರೀರಾಮುಲು
"ಮೋದಿಯವರ ಮಂತ್ರವನ್ನು ಎಲ್ಲರೂ ಪಾಲಿಸೋಣ"
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏಳು ಸೂಚನೆ ನೀಡಿದ್ದಾರೆ. ಅವುಗಳನ್ನು ಎಲ್ಲರೂ ಪಾಲಿಸೋಣ. ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಜಿಲ್ಲಾವಾರು ಮಾಹಿತಿ ಪಡೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರೆಲ್ಲರೂ ಮನೆಯಲ್ಲಿಯೇ ಇದ್ದು, ಕೊರೊನಾ ವೈರಸ್ ನಿಯಂತ್ರಣಕ್ಕೆ ಸಹಕರಿಸೋಣ ಎಂದರು. ರಾಜ್ಯದ ಕಲಬುರಗಿ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಒಟ್ಟು 20 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಲಾಗಿದೆ. ಎಲ್ಲ ರಾಜಕೀಯ ಪಕ್ಷದವರು ಪಕ್ಷಾತೀತವಾಗಿ ಕೋವಿಡ್ ನಿಯಂತ್ರಣಕ್ಕೆ ಬೆಂಬಲ ನೀಡುತ್ತಿದ್ದಾರೆ. ಇಂದು ದಾವಣಗೆರೆ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಮೊದಲು ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದಾಗ ಆತಂಕ ವಾತಾವರಣವಿತ್ತು. ನಂತರ ಜಿಲ್ಲಾಡಳಿತ ಹಾಗೂ ವೈದ್ಯಕೀಯ ಇಲಾಖೆಗಳ ನಿರಂತರ ಶ್ರಮದಿಂದ ಕೊರೊನಾ ಪಾಸಿಟಿವ್ ಸೋಂಕಿತರು ಗುಣಮುಖರಾಗಿದ್ದಾರೆ. ಅದಕ್ಕಾಗಿ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆಂದು ತಿಳಿಸಿದರು.
ಕೋವಿಡ್ ತಪಾಸಣೆಗೆ ಎರಡು ಲಕ್ಷ ಕಿಟ್ ಖರೀದಿ
ಕೋವಿಡ್ ತಪಾಸಣೆಗಾಗಿ ಎರಡು ಲಕ್ಷ ಕಿಟ್ಗಳನ್ನು ಖರೀದಿಸಲಾಗಿದೆ. ಇದನ್ನು ಎಲ್ಲಾ ಜಿಲ್ಲೆಗಳಿಗೂ ಸರಬರಾಜು ಮಾಡಲಾಗುವುದು. ಇದರಿಂದ ಪ್ರೈಮರಿ ಕಾಂಟ್ಯಾಕ್ಟ್ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್ ನಲ್ಲಿರುವವರನ್ನು ತಪಾಸಣೆಗೆ ಒಳಪಡಿಸಲು ಕ್ರಮ ವಹಿಸುವಂತೆ ತಿಳಿಸಿದರು. ಇದೇ ಸಮಯದಲ್ಲಿ, ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, "ಜಿಲ್ಲೆಯ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ಒಗ್ಗಟ್ಟಾಗಿ ರೋಗ ನಿಯಂತ್ರಣಕ್ಕೆ ಕ್ರಮ ವಹಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆ ಅನೇಕ ದಾನಿಗಳು ಮುಂದೆ ಬಂದು ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಇನ್ನೂ ಹೆಚ್ಚಿನ ದಾನಿಗಳು ಬಂದು ಬಡವರಿಗೆ ನೆರವಾಗಬೇಕು" ಎಂದು ಕೋರಿದರು..
ಬಳ್ಳಾರಿ ಜಿಲ್ಲೆ ಕೊರೊನಾ ವಾರಿಯರ್ಸ್ ಗೆ ಮಾಸ್ಕ್, ಸ್ಯಾನಿಟೈಸರ್ ಕೊರತೆ
21 ಡಾಬಾಗಳಲ್ಲಿ ಪಾರ್ಸೆಲ್ ನೀಡಲು ಅವಕಾಶ
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, "ಜಿಲ್ಲೆಯಲ್ಲಿ ಶೇ.95 ರಷ್ಟು ಪಡಿತರ ವಿತರಣೆ ಮಾಡಲಾಗಿದೆ. ಲಾಕ್ಡೌನ್ ಆದಾಗಿನಿಂದ ಜನ ಸಾಮಾನ್ಯರಿಗೆ ಅಗತ್ಯ ಸಾಮಗ್ರಿಗಳ ಪೂರೈಕೆಗೆ ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ 2 ಎಪಿಸೆಂಟರ್ ಮಾಡಿ ಅಲ್ಲಿರುವವರಿಗೆ ಫ್ಲೂ ಸರ್ವೇ ಮಾಡಲಾಗಿದೆ. ಈವರೆಗೆ ಪ್ರೈಮರಿ ಕಾಂಟ್ಯಾಕ್ಟ್ ನಲ್ಲಿರುವವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸೆಕೆಂಡರಿ ಕಾಂಟ್ಯಾಕ್ಟ್ ನಲ್ಲಿರುವವರನ್ನು ಗುರುತಿಸಲಾಗಿದ್ದು, ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ದಿನನಿತ್ಯದ ಅವಶ್ಯಕ ವಸ್ತುಗಳನ್ನು ಸಾಗಿಸುವ ಟ್ರಕ್ ಹಾಗೂ ಲಾರಿ ಡ್ರೈವರ್ಗಳ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ, ಮುಖ್ಯವಾಗಿ ಚನ್ನಗಿರಿ, ಹೊನ್ನಾಳಿ ಹಾಗೂ ಹರಿಹರ ಹೈವೇಗಳಲ್ಲಿನ ಡಾಬಾಗಳನ್ನು ಪರಿಶೀಲಿಸಿ 21 ಡಾಬಾಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇಲ್ಲಿ ಪಾರ್ಸಲ್ ಮಾತ್ರ ಒದಗಿಸಲಾಗುತ್ತಿದೆ. ಜೊತೆಗೆ ಅವಶ್ಯಕವಾದ ಸಾಮಗ್ರಿಗಳನ್ನು ಸಾಗಿಸಲು ವಿವಿಧ ವಾಹನಗಳ ಓಡಾಟಕ್ಕೆ ಅನುಕೂಲ ಕಲ್ಪಿಸಲಾಗಿದ್ದು, ಪಾಸ್ಗಳನ್ನು ಕೊಡಲಾಗಿದೆ ಎಂದರು.