ಕೋವಿಡ್: ಬಜೆಟ್ ಅಧಿವೇಶನದಲ್ಲಿ ಉಭಯ ಸದನ ಶಿಫ್ಟ್ನಲ್ಲಿ ಕಾರ್ಯನಿರ್ವಹಣೆ ಸಾಧ್ಯತೆ
ನವದೆಹಲಿ, ಜನವರಿ 12: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಅಧಿಕವಾಗುತ್ತಿದೆ. ಈ ನಡುವೆ 400 ಕ್ಕೂ ಹೆಚ್ಚು ಸಂಸತ್ ಸಿಬ್ಬಂದಿಗಳಲ್ಲಿ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಮುಂಬರುವ ಫೆಬ್ರವರಿ 1ರಂದು ಆರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಉಭಯ ಸದನಗಳು (ರಾಜ್ಯಸಭೆ ಹಾಗೂ ಲೋಕಸಭೆ) ಎರಡು ಶಿಫ್ಟ್ನಲ್ಲಿ ಕಾರ್ಯ ನಿರ್ವಹಣೆ ಮಾಡುವ ಸಾಧ್ಯತೆ ಇದೆ.
ದೇಶದಲ್ಲಿ ಕೊರೊನಾವೈರಸ್ ಸೋಂಕು ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಈ ನಡುವೆ ಎಲ್ಲಾ ಕೋವಿಡ್ ನಿಯಮಗಳನ್ನು ಪಾಲನೆ ಮಾಡುವುದು, ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಗತ್ಯವಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿದೆ.
ಐಟಿಆರ್ ಫೈಲಿಂಗ್: ತೆರಿಗೆದಾರರಿಗೆ ಕೊಂಚ ರಿಲೀಫ್ ನೀಡಿದ ಐಟಿ ಇಲಾಖೆ
ಈ ಹಿನ್ನೆಲೆಯಿಂದಾಗಿ ಮುಂಬರುವ ಮೊದಲಾರ್ಧದಲ್ಲಿ ಸದನಗಳನ್ನು ಶಿಫ್ಟ್ವಾರು ನಡೆಸಲು ಸಂಸದೀಯ ವ್ಯವಹಾರಗಳ ಸಚಿವಾಲಯ ಪ್ರಸ್ತಾವನೆಯನ್ನು ಕಳುಹಿಸಿದೆ. ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಮತ್ತು ಫೆಬ್ರವರಿ ಎರಡನೇ ವಾರದವರೆಗೆ ಮುಂದುವರಿಯುತ್ತದೆ. ಈ ನಡುವೆ ಚಳಿಗಾಲದ ಅಧಿವೇಶನವು ನವೆಂಬರ್ 20 ರಂದು ಪ್ರಾರಂಭವಾಗಿದ್ದು, ಡಿಸೆಂಬರ್ 23 ರವರೆಗೆ ನಡೆದಿದೆ. ಕೋವಿಡ್ ಪ್ರಕರಣಗಳು ಕಡಿಮೆ ಇದ್ದ ಹಿನ್ನೆಲೆಯಿಂದಾಗಿ ಉಭಯ ಸದನಗಳು ಕೋವಿಡ್ ಮಾರ್ಗಸೂಚಿ ಪ್ರಕಾರವಾಗಿ ಸಾಮಾನ್ಯವಾಗಿ ನಡೆದಿದೆ.
ಇದೀಗ ಬಜೆಟ್ ಅಧಿವೇಶನದಲ್ಲಿ ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ನಡೆಸಿದ ಅಧಿವೇಶನದಂತೆ ಆರೋಗ್ಯ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಲಿದೆ. "ಸಂಸದೀಯ ವ್ಯವಹಾರಗಳ ಸಚಿವಾಲಯದ ಪ್ರಸ್ತಾವನೆಯನ್ನು ಸರ್ಕಾರವು ಅನುಮೋದಿಸಿದರೆ ನಂತರ ಎರಡೂ ಸದನಗಳು ಅಂದರೆ ಲೋಕಸಭೆ ಮತ್ತು ರಾಜ್ಯಸಭೆಯು ಶಿಫ್ಟ್ನಲ್ಲಿ ಕಾರ್ಯನಿರ್ವಹಣೆ ಮಾಡಲಿದೆ."
ಪಾಳಿ ಅಥವಾ ಶಿಫ್ಟ್ ಹೇಗೆ ಇರಲಿದೆ?
ಮೊದಲ ಪಾಳಿಯಲ್ಲಿ ರಾಜ್ಯಸಭೆಯು ಬೆಳಿಗ್ಗೆ 9 ರಿಂದ ಪ್ರಾರಂಭವಾಗಲಿದೆ ಮತ್ತು ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ. ಎರಡನೇ ಪಾಳಿ ಲೋಕಸಭೆಯು ನಡೆಯಲಿದೆ. ಮಧ್ಯಾಹ್ನ 3 ರಿಂದ ಆರಂಭವಾಗಲಿದೆ. ಬಜೆಟ್ ದಿನವನ್ನು ಹೊರತುಪಡಿಸಿ ರಾತ್ರಿ 8 ರವರೆಗೆ ಸದನ ಮುಂದುವರಿಯುತ್ತದೆ. ಬಜೆಟ್ ದಿನದಂದು ಲೋಕಸಭೆಯು ಮೊದಲ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಮೂಲಗಳು ಎಎನ್ಐಗೆ ಮಾಹಿತಿ ನೀಡಿದೆ. "ಸಂಸತ್ನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಪಾಳಿಯಲ್ಲಿ ಸದನಗಳನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಸದನದ ಕಾರ್ಯನಿರ್ವಹಣೆಯ ಸಮಯದಲ್ಲಿ ಸಂಸದರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಉಭಯ ಸದನಗಳ ಸಭಾಂಗಣಗಳಲ್ಲಿ ಕುಳಿತುಕೊಳ್ಳುತ್ತಾರೆ," ಎಂದು ಕೂಡಾ ಮೂಲಗಳು ಎಎನ್ಐಗೆ ತಿಳಿಸಿದೆ.
ಇತ್ತೀಚೆಗೆ ಸಂಸತ್ತಿನ 400 ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಪರಿಣಾಮವಾಗಿ, ರಾಜ್ಯಸಭೆಯ ಅಧ್ಯಕ್ಷರು ಮತ್ತು ಲೋಕಸಭೆಯ ಸ್ಪೀಕರ್ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಈ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಉಭಯ ಸದನಗಳ ಸುಗಮ ಕಾರ್ಯನಿರ್ವಹಣೆಗೆ ಯೋಜನೆಯನ್ನು ಸಿದ್ಧಪಡಿಸಲು ಉಭಯ ಸದನಗಳಿಗೆ ಸೂಚನೆಗಳನ್ನು ನೀಡಿದ್ದಾರೆ. (ಒನ್ಇಂಡಿಯಾ ಸುದ್ದಿ)