ಒಕ್ಕಲಿಗರ ಬಗ್ಗೆ ಕ್ಷಮೆ ಕೇಳುವಂತಹ ಹೇಳಿಕೆ ನೀಡಿಲ್ಲ: ಜಮೀರ್
ಚಿತ್ರದುರ್ಗ, ಜುಲೈ 26 : "ನಾನು ಯಾವ ಕಾರಣಕ್ಕೆ ಕ್ಷಮೆ ಕೇಳಬೇಕು, ಅಂತದ್ದು ನಾನು ಏನು ಹೇಳಿಲ್ಲ, ನಿನ್ನೆಯೇ ನಾನು ಬಿಡಿಸಿ ಹೇಳಿದ್ದೇನೆ, ನನ್ನ ಅಭಿಮಾನ ಹೇಗಿತ್ತು, ಯಾವ ಹಿನ್ನೆಲೆಯಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದೇನೆ, ನಾನು ಕ್ಷಮೆ ಕೇಳುವಂತಹ ಹೇಳಿಕೆ ನೀಡಿಲ್ಲ" ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಸಮುದಾಯದ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. "ನನಗೆ ಒಕ್ಕಲಿಗರ ಮೇಲೆ ಇರುವ ಅಭಿಮಾನ ಹೇಗಿತ್ತು, ನಾನು ರಾಜಕೀಯಕ್ಕೆ ಹೇಗೆ ಬಂದೆ, ಯಾವ ಹಿನ್ನಲೆಯಲ್ಲಿ ಬಂದಿದ್ದೇನೆ ಎಂಬುದನ್ನು ಆದಿಚುಂಚನಗಿರಿ ಸ್ವಾಮೀಜಿ ಅವರನ್ನು ಕೇಳಿ. ಜಮೀರ್ ಯಾರು ಅಂತಾ ಕೇಳಿ, ಅವರು ನಮ್ಮ ಮಠದ ಹುಡುಗ ಅಂತಾರೆ. ಅಲ್ಲಿ ಯಾರನ್ನಾದರೂ ಕೇಳಿ. ನಾನು ಕ್ಷಮೆ ಕೇಳುವುದಕ್ಕೆ ಏನು ತಪ್ಪು ಮಾಡಿದ್ದೇನೆ? ಎನ್ನುವುದನ್ನು ಹೇಳಿ, ತಪ್ಪಿದ್ದರೆ ನಾನು ಕ್ಷಮೆ ಕೇಳುತ್ತೇನೆ" ಎಂದರು.
ಒಕ್ಕಲಿಗರ ಬಗ್ಗೆ ಮಾತಾಡಿ ಜಮೀರ್ ಎಡವಟ್ಟು ಮಾಡಿಕೊಂಡರೇ?
ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿ, "ಇದೊಂದು ರಾಜಕೀಯ ಅಷ್ಟೇ, 2023ಕ್ಕೆ ಚುನಾವಣೆ ಇದೆ ಅದಕ್ಕಾಗಿಯೇ ಹೀಗೆಲ್ಲಾ ಮಾಡುತ್ತಿದ್ದಾರೆ. ನಾನು ಏನೇನೂ ಹೇಳಿಲ್ಲ, ಅಂದರೆ ನಾನು ಯಾಕೆ ಕ್ಷಮೆ ಕೇಳಬೇಕು?" ಎಂದು ಜಮೀರ್ ಮತ್ತೊಮ್ಮೆ ಪುನರುಚ್ಚರಿಸಿದರು.
ಸಿದ್ದರಾಮಯ್ಯ ಸಿಎಂ; ಹಾವೇರಿಯಲ್ಲಿ ಮೌನ ಮುರಿದ ಜಮೀರ್!
ದೇವೇಗೌಡರೇ ನನ್ನ ಗುರುಗಳು
"ನಾನು ಒಕ್ಕಲಿಗರ ಬಗ್ಗೆ ಯಾವ ಪದ ಬಳಕೆ ಮಾಡಿದ್ದೇನೆ ಎಂದು ಗೊತ್ತಾದರೆ ಕ್ಷಮೆ ಕೇಳುತ್ತೇನೆ. ಏನಾದರೂ ತಪ್ಪಾಗಿ ಮಾತನಾಡಿದ್ದರೆ, ನೋವುಂಟು ಮಾಡಿದ್ದರೆ ತೋರಿಸಲಿ. ನಾನು ಕೂಡ ಒಕ್ಕಲಿಗರ ನಡುವೆ ಬೆಳೆದಿರುವ ಹುಡುಗ, ರಾಜಕೀಯಕ್ಕೆ ಬರಲು ಆದಿಚುಂಚನಗಿರಿ ಸ್ವಾಮೀಜಿ ಕಾರಣ. ನನ್ನ ರಾಜಕೀಯ ಗುರುಗಳು ದೇವೇಗೌಡರು, 2005ರಲ್ಲಿ ಉಪಚುನಾವಣೆಗೆ ಸ್ಪರ್ಧಿಸಿದ್ದಾಗ 16 ಗಂಟೆ ಹಗಲು -ರಾತ್ರಿ ದುಡಿದಿದ್ದಾರೆ. ಅವರ ಮಕ್ಕಳಿಗೂ ಅವರು ಅಷ್ಟು ಕೆಲಸ ಮಾಡಿರುವ ಉದಾಹರಣೆಯಿಲ್ಲ, ಅದನ್ನ ನಾನು ಎಂದಿಗೂ ಮರೆಯಲ್ಲ" ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.
ನೋಟಿಸ್ ಬಂದಿಲ್ಲ, ಹೇಳಿಕೆ ನಿಲ್ಲಿಸಿ ಅಂದಿದ್ದಾರಷ್ಟೆ
"ನನಗೆ ಕಾಂಗ್ರೆಸ್ನಿಂದ ಯಾವುದೇ ನೋಟಿಸ್ ಬಂದಿಲ್ಲ, ಕೇವಲ ಮಾಧ್ಯಮದಲ್ಲಿ ಹಾಗೆ ಬರುತ್ತಿದೆ. ನನಗೆ ಪಕ್ಷದಿಂದ ಯಾವುದೇ ನೋಟಿಸ್ ತಲುಪಿಲ್ಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ ದೂರವಾಣಿ ಕರೆ ಮಾಡಿ, ಜಮೀರ್ ಇದೆಲ್ಲಾ ಬೇಡ ಇಲ್ಲಿಗೆ ನಿಲ್ಲಿಸಿ, ಅಧ್ಯಕ್ಷರಿಗೂ ಇದನ್ನೇ ಹೇಳಿದ್ದೇವೆ, ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನಡೆ ಆಗುತ್ತಿದೆ, ಸುಮ್ಮನಿರಿ ಎಂದಿದ್ದಾರೆ. ಹೀಗಾಗಿ ನಾವು ಸುಮ್ಮನಿದ್ದೇವೆ" ಎಂದು ತಿಳಿಸಿದರು.
ಚುನಾವಣೆಗೆ ಯಾರ ನೇತೃತ್ವದಲ್ಲಿ ಹೋಗಲಿದ್ದಾರೆ ಎಂದು ಕೇಳಿದ್ದಕ್ಕೆ, "ಕಾಂಗ್ರೆಸ್ ನಾಯಕತ್ವದಲ್ಲಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಾಯಕತ್ವದಲ್ಲಿ ಹೋಗುತ್ತೇವೆ" ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.
ಸಿಟಿ ರವಿ ಯಾರಿಗೆ ಬಕೆಟ್ ಹಿಡಿದಿದ್ದರು ಎಂದು ನನಗೆ ಗೊತ್ತಿದೆ
"ಕುಮಾರಸ್ವಾಮಿ ಆಯ್ತು, ಈಗ ಸಿದ್ದರಾಮಯ್ಯಗೆ ಬಕೆಟ್ ಹಿಡಿಯುತ್ತಿದ್ದಾರೆ" ಎಂದ ಸಿ. ಟಿ. ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜಮೀರ್, "ಸಿ. ಟಿ. ರವಿ ಅವರು ಈ ಮಟ್ಟಕ್ಕೆ ಬೆಳೆಯಲು ಯಾರು ಕಾರಣ ಅಂತ ನನಗೆ ಗೊತ್ತಿದೆ. 2007ರಲ್ಲಿ ಸಿ. ಟಿ. ರವಿ ಏನಾಗಿದ್ದರು, ಅವಾಗ ಯಾರಿಗೆ ಬಕೆಟ್ ಹಿಡಿದು ಈ ಮಟ್ಟಕ್ಕೆ ಬೆಳೆದಿದ್ದಾರೆ ಎಂಬುದು ನನಗೆ ಗೊತ್ತಿದೆ, ಅದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸದಾಶಿವ ನಗರ ಗೆಸ್ಟ್ ಹೌಸ್ಗೆ ಯಾಕೆ ಬಂದಿದ್ದರು, ಹೋಗಿ ಅವರನ್ನೇ ಕೇಳಿ" ಎಂದು ಸಿ. ಟಿ. ರವಿಗೆ ತಿರುಗೇಟು ನೀಡಿದರು.
ಜಮೀರ್ಗೆ ಎಚ್ಚರಿಕೆ
ರಾಜ್ಯ ಪ್ರವಾಸ ಮಾಡುತ್ತಿರುವ ಜಮೀರ್ ಪದೇ ಪದೇ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರೂ ಸಹ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲ, ಆದರೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಪತ್ರ ಬರೆದು ಜಮೀರ್ಗೆ ಈ ರೀತಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ. ಇನ್ನೂ ಈ ಕುರಿತು ಡಿ. ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ಜಮೀರ್ಗೆ ವಾರ್ನಿಂಗ್ ನೀಡಿರುವ ಮಾಹಿತಿ ಮಾಧ್ಯಮಗಳ ಮೂಲಕ ಸಿಕ್ಕಿದೆ, ಹೈಕಮಾಂಡ್ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನೆಲ್ಲಾ ಕೈಗೊಳ್ಳಲಿದೆ ಎಂದರು.
Recommended Video