ಮುರುಘಾ ಶರಣದಿಂದ ಸನ್ಯಾಸ ದೀಕ್ಷೆ ಪಡೆದಿದ್ದ ಸಿದ್ದಲಿಂಗ ಸ್ವಾಮೀಜಿ ಲಿಂಗೈಕ್ಯ
ಚಿತ್ರದುರ್ಗ, ಜನವರಿ 03: ಕುಣಿಗಲ್ ಯೋಗವನ ಬೆಟ್ಟದ ಸ್ಥಾಪಕರು ಹಾಗೂ ಆಯುರ್ವೇದ ಪಂಡಿತರಾಗಿದ್ದ ಕಪರ್ದಿ ಸಿದ್ದಲಿಂಗ ಸ್ವಾಮೀಜಿ (78) ಶನಿವಾರದಂದು ಲಿಂಗೈಕ್ಯರಾಗಿದ್ದಾರೆ. ಚಿತ್ರದುರ್ಗದ ಮುರುಘಾ ಮಠದಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದ ಸಿದ್ದಲಿಂಗ ಸ್ವಾಮೀಜಿ ಇತ್ತೀಚೆಗೆ ಅನಾರೋಗ್ಯ ಪೀಡಿತರಾಗಿದ್ದರು. ಅಲೋಪಥಿ ಪದ್ಧತಿ ಚಿಕಿತ್ಸೆ ನಿರಾಕರಿಸಿ, ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು.
ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ನಾಡಿನಾದ್ಯಂತ ಅಪಾರ ಭಕ್ತರನ್ನು ಹೊಂದಿದ್ದ ಶ್ರೀಗಳು ಲಕ್ಷಾಂತರ ಜನರಿಗೆ ಆಯುರ್ವೇದ ಚಿಕಿತ್ಸೆ ನೀಡಿದ್ದಾರೆ.
ಶ್ರೀಗಳ ಅಂತ್ಯಕ್ರಿಯೆಯು ಹಾಸನ ಜಿಲ್ಲೆ ಆಲೂರು ತಾಲೂಕಿನ ಮರಸು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಬಸವತತ್ವದ ಪ್ರಕಾರ ನೆರವೇರಲಿದೆ ಎಂದು ಯೋಗವನ ಬೆಟ್ಟದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯೋಗವನ ಬೆಟ್ಟಗಳ ಅಧ್ಯಕ್ಷರಾಗಿ ಬಸವಕುಮಾರ ಸ್ವಾಮೀಜಿಗಳನ್ನು ನೇಮಿಸಲಾಗಿದೆ ಎಂದು ಚಿತ್ರದುರ್ಗದ ಮಾಜಿ ಶಾಸಕ ಎಸ್. ಕೆ ಬಸವರಾಜನ್ ತಿಳಿಸಿದ್ದಾರೆ. 30 ವರ್ಷಗಳ ಹಿಂದೆ ಚಿತ್ರದುರ್ಗದ ಮುರುಘಾಮಠದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಂದ ಸನ್ಯಾಸ ದೀಕ್ಷೆ ಪಡೆದು ಸಿದ್ದಲಿಂಗ ಸ್ವಾಮಿಯಾದವರು ಎರಡು ವರ್ಷಗಳ ಕಾಲ ಬಸವ ತತ್ವ ಅಧ್ಯಯನ ಮಾಡಿದ್ದರು.