ಮೋದಿ, ಅಮಿತ್ ಶಾ ಅವರ ಗುಲಾಮ ಯಡಿಯೂರಪ್ಪ: ಆಂಜನೇಯ ವಾಗ್ದಾಳಿ
ಚಿತ್ರದುರ್ಗ, ಆಗಸ್ಟ್ 23: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೈಕಮಾಂಡ್ನ ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್ ಆಂಜನೇಯ ಟೀಕಿಸಿದರು.
ಚಿತ್ರದುರ್ಗದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
Recommended Video
ಮೈತ್ರಿಯಿಂದ ಕಾಂಗ್ರೆಸ್ ಗೆ ಧಕ್ಕೆ: ಮಾಜಿ ಸಚಿವ ಆಂಜನೇಯ
ಬಿಎಸ್ ಯಡಿಯೂರಪ್ಪ ಅವರು ಮೂಲತಃ ದೊಡ್ಡ ಹೋರಾಟಗಾರ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ಬಳಿಕ ಅವರು ಅಸಹಾಯಕರಾಗಿದ್ದಾರೆ. ಯಡಿಯೂರಪ್ಪ ಅವರು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿನ ಬಿಜೆಪಿ ಕೂಡ ಗುಲಾಮಗಿರಿಗೆ ಒಗ್ಗಿಕೊಂಡಿದೆ. ಪ್ರಮಾಣ ವಚನ ಸ್ವೀಕಾರ ಮಾಡಲೂ ಯಡಿಯೂರಪ್ಪ ಅವರು ಹೈಕಮಾಂಡ್ನ ಸೂಚನೆಗೆ ಕಾಯಬೇಕಾಯಿತು. ಸಚಿವ ಸಂಪುಟ ವಿಸ್ತರಣೆ ಮಾಡಲು ಸುಮಾರು ಒಂದು ತಿಂಗಳು ಬೇಕಾಯಿತು. ಇನ್ನು ಸಚಿವರಿಗೆ ಖಾತೆ ಹಂಚಿಕೆ ಮಾಡಲು ಇನ್ನೆಷ್ಟು ದಿನ ಕಾಯಬೇಕಾಗುವುದೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ನೀಡಿದ್ದ ಬಿಜೆಪಿ
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾವ ರಾಜಕೀಯ ಪಕ್ಷಕ್ಕೂ ಸ್ಪಷ್ಟ ಜನಾದೇಶ ಸಿಗಲಿಲ್ಲ. ಮೈತ್ರಿ ಸರ್ಕಾರಕ್ಕೆ ಬಿಜೆಪಿ ನಿರಂತರವಾಗಿ ತೊಂದರೆಗಳನ್ನು ನೀಡಿತ್ತು. ಆಡಳಿತ ಪಕ್ಷದಲ್ಲಿನ ಶಾಸಕರಿಂದ ರಾಜೀನಾಮೆ ಕೊಡಿಸಿ ಅಧಿಕಾರ ಹಿಡಿಯುವ ಅನೈತಿಕವಾದ ಕೆಟ್ಟ ಸಂಸ್ಕೃತಿಗೆ ನಾಂದಿ ಹಾಡಿದೆ. ಈಗ ವಾಮಮಾರ್ಗದಿಂದ ಅಧಿಕಾರ ಹಿಡಿದಿರುವ ಬಿಜೆಪಿಗೆ ಕೂಡ ಜನಬೆಂಬಲವಿಲ್ಲ ಎಂದರು.
ಬಿಜೆಪಿ ಸರ್ಕಾರ ಪತನವಾಗಲಿದೆ
ಬಿಜೆಪಿಯೊಳಗೆ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಈಗಲೇ ಅಪಸ್ವರ ಕೇಳಿಬರುತ್ತಿದೆ. ಅಭದ್ರತೆಯಲ್ಲಿ ಇರುವ ಯಡಿಯೂರಪ್ಪ ಸರ್ಕಾರ ಅವಧಿಗೂ ಮುನ್ನವೇ ಅಂತ್ಯಕಾಣುತ್ತದೆ. ಇದು ಸತ್ಯ. ಹಾಗೆಂದು ಯಡಿಯೂರಪ್ಪ ಅವರ ಸರ್ಕಾರಕ್ಕೆ ಕಾಂಗ್ರೆಸ್ ವಿನಾಕಾರಣ ತೊಂದರೆ ನೋಡಲು ಹೋಗುವುದಿಲ್ಲ. ಸರ್ಕಾರವನ್ನು ಅಸ್ಥಿರಗೊಳಿಸುವ ಯಾವ ಪ್ರಯತ್ನಕ್ಕೂ ಮುಂದಾಗುವುದಿಲ್ಲ. ಸರ್ಕಾರ ತಾನಾಗಿಯೇ ಪತನವಾಗುವುದರಿಂದ ಮಧ್ಯಂತರದಲ್ಲಿಯೇ ಚುನಾವಣೆ ಎದುರಾಗಲಿದೆ. ಅದಕ್ಕೆ ಪಕ್ಷ ಸನ್ನದ್ಧವಾಗಿದೆ ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿದ್ದ ಶಾಸಕರ ರಾಜೀನಾಮೆಯಿಂದ ತೆರವಾಗಿರುವ ವಿಧಾನಸಭಾ ಕ್ಷೇತ್ರಗಳಿಗೆ ಕೂಡಲೇ ಉಪ ಚುನಾವಣೆ ನಡೆಯಬೇಕು. ಈ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಇಳಿಸಲು ಪಕ್ಷ ಸಿದ್ಧತೆ ನಡೆಸಿದೆ. ಅನೈತಿಕ ರಾಜಕಾರಣ ನಡೆಸಿರುವ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.
ಆಂಜನೇಯಗೆ ಅವಮಾನ ಮಾಡಿದ ಸಿದ್ದುಗೆ ಪಂಚೋ ಪಂಚು!
ಭೇಟಿ ನೀಡದ ಮೋದಿ
ಅತವೃಷ್ಟಿಯಿಂದಾಗಿ ಅರ್ಧ ಕರ್ನಾಟಕ ಮುಳುಗಿದೆ. ಮನೆ ಮಠ ಕಳೆದುಕೊಂಡಿರುವ ಸಂತ್ರಸ್ತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಷ್ಟೆಲ್ಲಾ ಅನಾಹುತಗಳು ನಡೆದಿದ್ದರೂ ಜನರ ನೋವು ಆಲಿಸಲು ಇದುವರೆಗೂ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿಲ್ಲ. ರಾಜ್ಯದಿಂದ 25 ಸಂಸದರು ಪ್ರತಿನಿಧಿಸುತ್ತಿದ್ದರೂ ಕೇಂದ್ರ ಸರ್ಕಾರ ನೆರವು ನೀಡುತ್ತಿಲ್ಲ ಎಂದು ಆರೋಪಿಸಿದರು.
ಜೆಡಿಎಸ್ ಜತೆ ಮೈತ್ರಿ ಬೇಡ
ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡ ಕಾರಣಕ್ಕಾಗಿಯೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಎದುರಿಸುವಂತಾಯಿತು ಎಂದು ಆಂಜನೇಯ ಅವರು ಈ ಹಿಂದೆ ಹೇಳಿಕೆ ನೀಡಿದ್ದರು. ಈ ಅಭಿಪ್ರಾಯದಂತೆ ಪಕ್ಷ ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆಯೇ ಎಂಬ ಪ್ರಶ್ನೆಗೆ, ಜೆಡಿಎಸ್ ಜತೆ ಮೈತ್ರಿ ಬೇಡ ಎನ್ನುವುದು ವೈಯಕ್ತಿಕ ಅಭಿಪ್ರಾಯ. ಆದರೆ, ಹಾಗೆಂದು ನಾನು ಹೇಳಲು ಆಗುವುದಿಲ್ಲ. ಅದರ ಕುರಿತು ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದು ಬಹುತೇಕ ಖಚಿತ ಎಂದರು.
ಎಚ್.ಆಂಜನೇಯ ಅವರನ್ನು ಸಿದ್ದರಾಮಯ್ಯ ತಳ್ಳಿದ್ದು ಅಸ್ಪೃಶ್ಯತೆ ಸೂಚಕ: ರಾಮುಲು
ಸೋತಲ್ಲೇ ಗೆಲುವು ಹುಡುಕುತ್ತೇನೆ
ಬೇರೆ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಯಲು ಆಂಜನೇಯ ಪ್ರಯತ್ನಿಸುತ್ತಿದ್ದಾರೆ ಎಂಬ ವದಂತಿ ಕುರಿತ ಪ್ರಶ್ನೆಗೆ ಅವರು, ನಾನು ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬೇರೆ ಕ್ಷೇತ್ರಕ್ಕೆ ಹೋಗಿ ಅಲ್ಲಿ ಸ್ಪರ್ಧಿಸುವುದು ನಿಜವಲ್ಲ. ಎಲ್ಲಿ ನಾನು ಕಳೆದುಕೊಂಡಿದ್ದೇನೆಯೋ ಅಲ್ಲಿಯೇ ಗೆಲುವನ್ನು ಹುಡುಕುತ್ತೇನೆ ಎಂದು ಹೇಳಿದರು.