ವಿವಿ ಸಾಗರ, ಗಾಯಿತ್ರಿ ಜಲಾಶಯ ವೀಕ್ಷಿಸಿದ ಯದುವೀರ್ ಅರಸ್
ಚಿತ್ರದುರ್ಗ ಜೂ,26: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಬಳಿ ಇರುವ ವಾಣಿ ವಿಲಾಸ ಜಲಾಶಯ ಹಾಗೂ ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಯಿತ್ರಿ ಜಲಾಶಯಕ್ಕೆ ಮೈಸೂರು ಮಹಾರಾಜರಾದ ಯದುವೀರ್ ಅರಸ್ ಮತ್ತು ತ್ರಿಷಿಕಾ ಕುಮಾರಿ ಭಾನುವಾರ ಭೇಟಿ ನೀಡಿ ಡ್ಯಾಂ ವೀಕ್ಷಣೆ ಮಾಡಿದರು.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಈ ಎರಡು ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಜಯಚಾಮರಾಜ ಒಡೆಯರ್ ಮನೆತನದ ಹೆಣ್ಣು ಮಗಳಾದ ಗಾಯಿತ್ರಿ ದೇವಿಯ ನೆನಪಿಗಾಗಿ ಜಲಾಶಯ ನಿರ್ಮಿಸಿ, ಅವರ ಹೆಸರನ್ನೇ ಗಾಯಿತ್ರಿ ಡ್ಯಾಂ ಗೆ ಹಾಗೂ ವಿವಿ ಸಾಗರ ಜಲಾಶಯಕ್ಕೆ ಕೆಂಪರಾಜಮ್ಮಣಿ ಹೆಸರನ್ನು ನಾಮಕರಣ ಮಾಡಲಾಗಿದೆ. ಅಜ್ಜಿಯ ಹೆಸರಿನ ಎರಡು ಜಲಾಶಯಗಳನ್ನು ಮೊಮ್ಮಗ ಯದುವೀರ್ ವೀಕ್ಷಣೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆ; ಸರ್ಕಾರದ ವಿರುದ್ಧ ರಮೇಶ್ ಕುಮಾರ್ ಗರಂ
ರೈತರ ಜಮೀನುಗಳಿಗೆ ನೀರು ಹರಿಯುತ್ತಿದೆ
ಯದುವೀರ್ ಮತ್ತು ತ್ರಿಷಿಕಾ ಕುಮಾರಿ ಜಲಾಶಯ ವೀಕ್ಷಿಸಿದ ಬಳಿಕ ಫೋಟೋ ತೆಗೆಸಿಕೊಂಡಿದ್ದಾರೆ. ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಿಂದ ಜಲಾಶಯದ ವಿಸ್ತೀರ್ಣ, ನೀರಿನ ಸಾಮರ್ಥ್ಯ, ಉಪಯೋಗದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ರಾಜಮಾತೆ ಪ್ರಮೋದಾ ದೇವಿ, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರು ಜೊತೆಗಿದ್ದರು.
ಹಿರಿಯೂರು ತಾಲೂಕಿನ ರೈತಾಪಿ ವರ್ಗದ ಕೃಷಿಗೆ ಅನುಕೂಲವಾಗುವಂತೆ ಹಿರಿಯೂರು ತಾಲ್ಲೂಕಿನಲ್ಲಿ ಎರಡು ಜಲಾಶಯಗಳನ್ನು ನಿರ್ಮಿಸಲಾಗಿದೆ. ವಾಣಿ ವಿಲಾಸಪುರ ಬಳಿ ಇರುವ ವಾಣಿ ವಿಲಾಸ ಜಲಾಶಯ ಹಾಗೂ ಗಾಯಿತ್ರಿ ಜಲಾಶಯ. ಈ ಗಾಯಿತ್ರಿ ಜಲಾಶಯದ ನೀರು ಜವನಗೊಂಡನಹಳ್ಳಿಗೆ ಸೀಮಿತವಾಗದೆ ಪಕ್ಕದ ಶಿರಾ ತಾಲೂಕಿನ ಹುಣಸೆಹಳ್ಳಿ, ಉಜ್ಜನಕುಂಟೆ, ಮೇಳೆ ಕೋಟೆ, ಮತ್ತಿತರರ ಗ್ರಾಮದ ರೈತರ ಜಮೀನುಗಳಿಗೆ ನೀರು ಹರಿಯುತ್ತದೆ.
ಸುವರ್ಣಮುಖಿ ನದಿಗೆ ಅಡ್ಡಲಾಗಿ ಕಟ್ಟಿದ ಗಾಯತ್ರಿ ಜಲಾಶಯ
ಚಿಕ್ಕಮಗಳೂರಿನ ಗಿರಿ ಕಂದಕಗಳಲ್ಲಿ ಹುಟ್ಟುವ ವೇದಾವತಿ ನದಿಗೆ ಅಡ್ಡಲಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಪುರದ ಬಳಿ ಮರಿಕಣಿವೆ ಅಥವಾ ವಾಣಿವಿಲಾಸಸಾಗರ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ವಾಣಿ ವಿಲಾಸ ಸಾಗರವನ್ನು ಆರ್ಕಿಟೆಕ್ಚರಲ್ ಮಾಸ್ಟರ್ಪೀಸ್ ಎಂದು ಗುರುತಿಸಲಾಗಿದೆ. ಈ ಅಣೆಕಟ್ಟನ್ನು ಮೈಸೂರಿನ ಶ್ರೀ ಕೃಷ್ಣರಾಜ ಒಡೆಯರ್ರ ಅವರ ತಾಯಿ ಕೆಂಪರಾಜಮ್ಮಣಿ ಆದೇಶದ ಮೇರೆಗೆ 'ತಾರಾ ಚಾಂದ್ ದಲಾಲ್' ಎಂಬ ಇಂಜಿನಿಯರ್ ನೇತೃತ್ವದ ತಂಡವು ಮೈಸೂರು ದಿವಾನಗರಾಗಿದ್ದ ಶೇಷಾದ್ರಿ ಅಯ್ಯರ್ ಅವರ ನೇತೃತ್ವದಲ್ಲಿ ನಿರ್ಮಿಸಿದೆ.
ಅಲ್ಲದೇ ಮೈಸೂರಿನಲ್ಲಿ ಇರುವ ಕೆಆರ್ಎಸ್ ಅಣೆಕಟ್ಟು ನಿರ್ಮಾಣಕ್ಕೆ ವಾಣಿವಿಲಾಸ ಸಾಗರದ ನೀಲನಕ್ಷೆಯೇ ಮೂಲ ಎಂದು ಹೇಳಲಾಗುತ್ತದೆ. ಸುವರ್ಣಮುಖಿ ನದಿಗೆ ಅಡ್ಡಲಾಗಿ ಗಾಯಿತ್ರಿ ಜಲಾಶಯವನ್ನು 1963ರಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಅತಿ ಕಡಿಮೆ ವೆಚ್ಚ ಅಂದರೆ 40 ಲಕ್ಷ ರೂಪಾಯಿ ಖರ್ಚು ಮಾಡಿ ಕಟ್ಟಲಾಗಿದೆ. ಈ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 0.97 ಟಿಎಂಸಿ ನೀರಿನ ಸಂಗ್ರಹ ಹೊಂದಿದೆ. ಜಲಾಶಯವು 145 ಅಡಿ ಎತ್ತರ ಹೊಂದಿದ್ದು, 16 ಕಿಲೋಮೀಟರ್ ಉದ್ದದ ಎರಡು ನಾಲೆಗಳಿವೆ. ಒಟ್ಟು ಜಲಾವೃತ ಪ್ರದೇಶ 1031,00 ಕಿ. ಮೀ. ಇದ್ದು, ಸದರಿ ಯೋಜನೆಯು ಒಟ್ಟು 2305.00 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿರುತ್ತದೆ.
ಹಸಿರು ಕಣಿವೆಯ ಗುಡ್ಡಗಳ ಸುಂದರ ಪರಿಸರದಲ್ಲಿ ಗಾಯತ್ರಿ ಜಲಾಶಯ
ಕರ್ನಾಟಕದ ಚಿಕ್ಕ ಜಲಾಶಯಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿರುವ ಗಾಯತ್ರಿ ಜಲಾಶಯವೂ ಒಂದು. ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗೂ ಶಿರಾ ತಾಲೂಕಿನ ಗಡಿ ಭಾಗದಲ್ಲಿ ಹಸಿರು ಕಣಿವೆಯ ಗುಡ್ಡಗಳ ಸುಂದರ ಪರಿಸರದಲ್ಲಿ ಗಾಯತ್ರಿ ಜಲಾಶಯವಿದೆ. ಈ ಜಲಾಶಯ 0.97 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.
ಶಿರಾ ತಾಲೂಕಿನ ಬುಕ್ಕಾಪಟ್ಟಣ, ಬೆಳ್ಳಾರ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೋರನಕಣಿವೆಯ ವ್ಯಾಪ್ತಿಯಲ್ಲಿ ಮೈದಾನ ಪ್ರದೇಶಗಳಲ್ಲಿ ಹರಿದು ಬರುವ ಸುವರ್ಣಮುಖಿ ನದಿಯು ಗಾಯತ್ರಿ ಜಲಾಶಯದ ನೀರಿನ ಮೂಲವಾಗಿದೆ. 1963ರಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸುವರ್ಣಮುಖಿ ನದಿಗೆ ಅಡ್ಡಲಾಗಿ ಅತಿ ಕಡಿಮೆ ವೆಚ್ಚ ಅಂದರೆ 40 ಲಕ್ಷ ರೂಪಾಯಿ ಖರ್ಚು ಮಾಡಿ ಈ ಜಲಾಶಯ ನಿರ್ಮಾಣ ಮಾಡಲಾಗಿದೆ.
ಸಮಯ ಕಳೆಯ ಬಯಸುವವರಿಗೆ ಉತ್ತಮ ಸ್ಥಳ
ಬೆಂಗಳೂರಿನಿಂದ ಸುಮಾರು 170 ಕಿ.ಮೀ ಗಳಷ್ಟು ದೂರದಲ್ಲಿರುವ ಈ ತಾಣವು ವಾರಾಂತ್ಯದ ರಜೆಗಳಲ್ಲಿ ಹಾಯಾಗಿ ಸಮಯ ಕಳೆಯ ಬಯಸುವವರಿಗೆ ಒಂದು ಉತ್ತಮ ಸ್ಥಳವಾಗಿದೆ. ಮುಖ್ಯವಾಗಿ ಪ್ರಶಾಂತಮಯ ಸ್ಥಳದಲ್ಲಿರುವುದರಿಂದ ಈ ಜಲಾಶಯ ಮನಸ್ಸಿಗೆ ಮುದ ನೀಡುತ್ತದೆ.
ಈ ಆಣೆಕಟ್ಟು ನಿರ್ಮಾಣದ ಪ್ರಮುಖ ಉದ್ದೇಶ ಸುತ್ತಮುತ್ತಲಿನ ಹೊಲಗದ್ದೆಗಳಿಗೆ ನೀರುಣಿಸುವುದಾಗಿದೆ. ಇದರಿಂದ ಉಂಟಾದ ಹಿನ್ನೀರಿನ ಜಲಾಶಯವು ಒಂದು ಆದರ್ಶಮಯವಾದ ಪಿಕ್ನಿಕ್ ಸ್ಥಳವಾಗಿದ್ದು ಬಹಳಷ್ಟು ಜನರಿಗೆ ಇದರ ಕುರಿತು ತಿಳಿದೇ ಇಲ್ಲ ಎಂದರೆ ಆಶ್ಚರ್ಯವಾದರೂ ಸತ್ಯವಾದ ಸಂಗತಿ. ಈ ಜಲಾಶಯವನ್ನು ತಲುಪುವುದು ಕಷ್ಟಕರವಾಗಿಲ್ಲವಾದರೂ ನೇರವಾದ ಬಸ್ಸುಗಳ ಸೌಲಭ್ಯವಿಲ್ಲ. ನಿಮ್ಮ ಸ್ವಂತ ಅಥವಾ ಬಾಡಿಗೆ ವಾಹನಗಳ ಮೂಲಕ ಸಾಗಬೇಕು.