"ಮಾತಿಗೆ ತಪ್ಪಿದ ಸಿಎಂ" ಪಟ್ಟ ಪಡೆದುಕೊಳ್ಳಬೇಡಿ ಎಂದ ಸ್ವಾಮೀಜಿ
ಚಿತ್ರದುರ್ಗ, ಡಿಸೆಂಬರ್ 13: ಉಪ ಚುನಾವಣೆಯಲ್ಲಿ ಜಯ ಸಾಧಿಸಿದ ಬಿಜೆಪಿಯಲ್ಲಿ ಈಗ ಸಂಪುಟ ವಿಸ್ತರಣೆ, ಸಚಿವ ಸ್ಥಾನ ಹಂಚಿಕೆ ಬಗ್ಗೆ ಚರ್ಚೆ ಜೋರಾಗಿದೆ. ಈ ನಡುವೆ ಗೊಲ್ಲ ಸಮುದಾಯದವರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಕೂಗು ಚಿತ್ರದುರ್ಗದಿಂದ ಕೇಳಿಬಂದಿದೆ. "ಸ್ಥಿರ ಸರ್ಕಾರ ಬಂದ ಮೇಲೆ ಗೊಲ್ಲ ಸಮುದಾಯಕ್ಕೆ ಸಚಿವ ಸ್ಥಾನ ಕೊಡುತ್ತೇವೆ ಎಂದು ಬಿಎಸ್ ವೈ ಹೇಳಿದ್ದರು. ಕೊಡದಿದ್ದರೆ ಅವರಿಗೆ ಮಾತಿಗೆ ತಪ್ಪಿದ ಮುಖ್ಯಮಂತ್ರಿ ಎಂಬ ಪಟ್ಟ ಕೊಡಬೇಕಾಗುತ್ತದೆ" ಎಂದು ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಹೇಳಿದ್ದಾರೆ.
"ನಾನಂತೂ ಸಚಿವ ಸ್ಥಾನ ಕೇಳಿಲ್ಲ, ಖಾತೆ ಬಗ್ಗೆ ಮಾತೇ ಇಲ್ಲ"
ಇಂದು ಚಿತ್ರದುರ್ಗದ ಶ್ರೀ ಯಾದವಾನಂದ ಗುರುಪೀಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಅನರ್ಹ ಶಾಸಕರನ್ನು ಅರ್ಹರನ್ನಾಗಿಸುವಲ್ಲಿ ನಮ್ಮ ಸಮುದಾಯ ಪ್ರಮುಖ ಪಾತ್ರ ವಹಿಸಿದೆ. ಹೀಗಾಗಿ ಅಸಂಘಟಿತ ಸಮುದಾಯವನ್ನು ಸಂಘಟಿತರನ್ನಾಗಿಸುವ ನಿಟ್ಡಿನಲ್ಲಿ ನಮ್ಮ ಸಮುದಾಯದಿಂದ ಆಯ್ಕೆಯಾಗಿರುವ ಮಾಜಿ ಸಚಿವ ದಿವಂಗತ ಎ.ಕೃಷ್ಣಪ್ಪ ಅವರ ಪುತ್ರಿ ಹಿರಿಯೂರಿನ ಶಾಸಕಿ ಪೂರ್ಣಿಮಾ ಕೆ.ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕು" ಎಂದು ಒತ್ತಾಯಿಸಿದರು.
ಯಡಿಯೂರಪ್ಪ ಸಂಪುಟ ವಿಸ್ತರಣೆ, ಯಾರಿಗೆ ಯಾವ ಖಾತೆ ಸಿಗಲಿದೆ?
"ಒಂದು ವೇಳೆ ಸ್ಥಾನ ನೀಡದಿದ್ದರೆ ಮತ್ತೊಮ್ಮೆ ಬಿಎಸ್ ವೈ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇವೆ. ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ, ಒಂದು ವೇಳೆ ಕೊಟ್ಟ ಮಾತಿನಂತೆ ಅವರು ನಡೆದುಕೊಳ್ಳದಿದ್ದರೆ ಅವರಿಗೆ ಮಾತಿಗೆ ತಪ್ಪಿದ ಮುಖ್ಯಮಂತ್ರಿ ಎಂಬ ಪಟ್ಟ ಕೊಡುತ್ತೇವೆ" ಎಂದರು.
ವರಿಷ್ಠರು ಕೈ ಹಿಡಿದರೆ ಮಂತ್ರಿ ಸ್ಥಾನ ಪಕ್ಕ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವ ಕೆ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ವರಿಷ್ಠರು ಕೈಹಿಡಿದರೆ ಮಂತ್ರಿಪಟ್ಟ ಸಿಗುವ ಸಾಧ್ಯತೆ ಇದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲ ಶಾಸಕಿ, ಹಿಂದುಳಿದ ವರ್ಗದ ನಾಯಕಿಯಾಗಿರುವ ಕೆ. ಪೂರ್ಣಿಮಾ ಅವರ ಹೆಸರು ಕಳೆದ ಬಾರಿ ಸಚಿವ ಸ್ಥಾನಕ್ಕೆ ಪ್ರಬಲ ಹೆಸರು ಕೇಳಿಬಂದಿತ್ತು. ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ ನೀಡಿದ್ದರಿಂದ ಕಳೆದ ಬಾರಿ ಕೈತಪ್ಪಿತ್ತು. ಒಂದು ವೇಳೆ ಪೂರ್ಣಿಮಾಗೆ ಮಂತ್ರಿ ಸ್ಥಾನ ಸಿಕ್ಕರೆ ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಹಿಂದುಳಿದ ಜನಾಂಗವಿದ್ದು ಮುಂಬರುವ ಯಾವುದೇ ಚುನಾವಣೆಯಲ್ಲಿ ಬಿಜೆಪಿ ಕೈ ಹಿಡಿಯುವುದಕ್ಕೆ ಪ್ಲಸ್ ಪಾಯಿಂಟ್ ಆಗುತ್ತದೆ ಎನ್ನಲಾಗಿದೆ.