ಎರಡು ತಿಂಗಳಲ್ಲಿ ಭದ್ರಾ ನೀರು ವಿವಿ ಸಾಗರಕ್ಕೆ: ನಾರಾಯಣ ಸ್ವಾಮಿ
ಚಿತ್ರದುರ್ಗ, ಜೂನ್ 14: ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳನ್ನು ತುಂಬಿಸಲು ಮೊದಲ ಆದ್ಯತೆ ನೀಡಿ ನಂತರ ಹನಿ ನೀರಾವರಿ ಕಾಮಗಾರಿ ಕೈಗೊಂಡರೆ ಸೂಕ್ತ ಎಂದು ಬಿ.ಆರ್.ಪ್ರಾಜೆಕ್ಟ್ ನ ಅಧಿಕಾರಿಗಳ ಸಭೆಯಲ್ಲಿ ಚಿತ್ರದುರ್ಗ ಸಂಸದ ಎ. ನಾರಾಯಣ ಸ್ವಾಮಿ ಭದ್ರಾ ಮೇಲ್ದಂಡೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯ ವಾಸ್ತವಿಕ ಸ್ಥಿತಿಗತಿಯ ಪರಿಶೀಲನೆಗೆಂದು ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಮುಂದಿನ ಎರಡು ವರ್ಷಗಳಲ್ಲಿ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಚಿತ್ರದುರ್ಗ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.
ಡೆಡ್ ಸ್ಟೋರೇಜ್ ತಲುಪಿದ ವಾಣಿ ವಿಲಾಸ ಜಲಾಶಯ ನೀರಿನ ಮಟ್ಟ
ಅಜ್ಜಂಪುರ ಬಳಿ ಇರುವ ರೈಲ್ವೆ ಗೇಟ್ ಸೇತುವೆ ಬಳಿ ಲೈನಿಂಗ್ ಕಾಮಗಾರಿ ಬಾಕಿ ಇದೆ. ಈಗ ಮಳೆಗಾಲ ಆರಂಭವಾಗಿದ್ದು, ಅಲ್ಲಿನ ಕಾಮಗಾರಿ ಕೆಲಸ ಮಾಡಲು ವಿಳಂಬವಾಗುತ್ತದೆ. ಹಾಗಾಗಿ ಮಳೆ ಬಿದ್ದರೂ ಕಾಮಗಾರಿ ಮಾಡಲು ಅನುಕೂಲವಾಗುವಂತೆ ತಾತ್ಕಾಲಿಕವಾಗಿ ಶೀಟ್ ಹಾಕಿಕೊಂಡು ಲೈನಿಂಗ್ ಕಾಮಗಾರಿ ಮಾಡುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಳಿದಂತೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿ ಎಲ್ಲಿ ವಿಳಂಬವಾಗುತ್ತಿದೆ ಎಂಬುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಲಕ್ಕುವಳ್ಳಿ ಡ್ಯಾಂ, ಶಾಂತಿಪುರ ಬಳಿ ಇರುವ ನೀರು ಲಿಫ್ಟ್ ಮಾಡುವ ಪಂಪ್ ಹೌಸ್, ಅಜ್ಜಂಪುರ ಕಾಲುವೆ, ಅಜ್ಜಂಪುರ ರೈಲ್ವೆ ಮೇಲ್ಸೇತುವೆ, ವೈ ಜಂಕ್ಷನ್ ಹಾಗೂ ಪ್ರಮುಖವಾಗಿ ಸಮಸ್ಯೆ ಉಂಟಾಗಿರುವ ಹೆಬ್ಬೂರು ಹರೀಶ್ ಎಂಬುವವರ ಜಮೀನಿನ ಜಾಗವನ್ನು ವೀಕ್ಷಣೆ ಮಾಡಲಾಯಿತು.
ಬೆಂಗಳೂರಿನ ದಾಹ ತಣಿಸಲು ಶರಾವತಿ, ತುಂಗಾ ಭದ್ರಾ ನೀರು
ಎರಡು ತಿಂಗಳಲ್ಲಿ ಭದ್ರಾ ನೀರು ವಿವಿ ಸಾಗರಕ್ಕೆ: ಬಿ.ಆರ್. ಪ್ರಾಜೆಕ್ಟ್ ನಲ್ಲಿ ಅಧಿಕಾರಿಗಳ ಜೊತೆ ಸಭೆ ಮುಗಿಸಿ ನಂತರ ಕಾಮಗಾರಿ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಎ. ನಾರಾಯಣ ಸ್ವಾಮಿ, ಮುಂದಿನ ಎರಡು ತಿಂಗಳಲ್ಲಿ ಭದ್ರಾ ಕಾಮಗಾರಿ ಮುಗಿಯಲಿದ್ದು, ಇನ್ನು ಎರಡು ತಿಂಗಳಲ್ಲಿ ಭದ್ರಾ ನೀರನ್ನು ವಿವಿ ಸಾಗರಕ್ಕೆ ಹರಿಸಲಾಗುವುದು ಎಂದು ಹೇಳಿದರು. ಕಾಮಗಾರಿ ವೀಕ್ಷಣೆಗೆ ಹಿರಿಯೂರು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್, ವಿವಿ ಸಾಗರ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್, ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಆರ್. ತಿಮ್ಮಯ್ಯ, ಹಿರಿಯ ಪತ್ರಕರ್ತ ಎನ್.ಎಲ್. ಬಸವರಾಜ್, ವಕೀಲ ಬಬ್ಬೂರು ಸುರೇಶ್, ಯಶವಂತ್ ರಾಜ್, ಸಿದ್ದರಾಮಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.