ವಿವಿ ಸಾಗರಕ್ಕೆ ಆಗಸ್ಟ್ನಲ್ಲಿ ಹರಿಯುವುದೇ ನೀರು?
ಚಿತ್ರದುರ್ಗ, ಜುಲೈ 23: ಜಿಲ್ಲೆಯ ಬಹುಮುಖ್ಯ ಯೋಜನೆಯಾದ ಭದ್ರಾ ಮೇಲ್ದಂಡೆ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇದ್ದರೆ ಆಗಸ್ಟ್ ತಿಂಗಳಲ್ಲಿ ವಿವಿ ಸಾಗರಕ್ಕೆ ನೀರು ಹರಿಸಬಹುದು ಎಂದು ವಿವಿ ಸಾಗರ ಹೋರಾಟ ಸಮಿತಿ ಮುಖಂಡರು ತಿಳಿಸಿದ್ದಾರೆ.
ಇಪ್ಪತ್ತು ದಿನಗಳ ಹಿಂದೆ ವಿವಿ ಸಾಗರ ಹೋರಾಟ ಸಮಿತಿ ನಡೆಸಿದ ಪ್ರತಿಭಟನಾ ಸಮಾವೇಶ, ಹಿರಿಯೂರು ಬಂದ್, ವಿವಿ ಸಾಗರ ಜಲಾಶಯದ ಮುತ್ತಿಗೆಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ತ್ವರಿತ ಗತಿಯಲ್ಲಿ ಕೆಲಸ ಮುಗಿಸಲು ಮುಂದಾಗಿದ್ದು, ಆಗಸ್ಟ್ ತಿಂಗಳಲ್ಲಿ ವಿವಿ ಸಾಗರಕ್ಕೆ ನೀರು ಹರಿಸಲಾಗುವುದೆಂಬ ಮಾಹಿತಿ ಲಭ್ಯವಾಗಿದೆ.
ಆಗಸ್ಟ್ 10ರೊಳಗೆ ವಿವಿ ಸಾಗರಕ್ಕೆ ನೀರು ಬರದಿದ್ರೆ ರಾಜೀನಾಮೆ: ವೆಂಕಟರಮಣಪ್ಪ
ಬೆಟ್ಟದ ತಾವರೆಕೆರೆ ಹತ್ತಿರ ಇರುವ ಎರಡನೇ ಪ್ಯಾಕೇಜ್ ನ ಎರಡನೇ ಪಂಪ್ ಹೌಸ್ ಪವರ್ ಸಪ್ಲೈ ಕೊಡುವ ಬಾಕಿ ಇದ್ದು, ಶಾಂತಿಪುರ ಪಂಪ್ ಹೌಸ್ ಟ್ರಯಲ್ ರನ್ ಆಗಿದೆ. ಸದ್ಯಕ್ಕೆ ನೀರು ಹರಿಸಲು ಯಾವುದೇ ಅಡ್ಡಿಯಿಲ್ಲ ಎನ್ನಲಾಗಿದೆ. ಇನ್ನು ಅಜ್ಜಂಪುರ ಬಳಿ ಇರುವ ರೈಲ್ವೆ ಸೇತುವೆ ಕೆಳಗೆ ಪೈಪ್ ಜೋಡಿಸುವ ಕಾಮಗಾರಿ ಹದಿನೈದು ದಿನಗಳಲ್ಲಿ ಮುಗಿಯುವ ಸಾಧ್ಯತೆ ಇದೆ.
ಚಿತ್ರದುರ್ಗ ಶಾಖಾ ಕಾಲುವೆ ಬದಲಾಗಿ ವೈ ಜಂಕ್ಷನ್ ಬಳಿ ಇರುವ ತುಮಕೂರು ಶಾಖಾ ಕಾಲುವೆ ಹತ್ತಿರ ಪರ್ಯಾಯ ಮಾರ್ಗವಾಗಿ ನೀರು ಹರಿಸುವ ಕಾಮಗಾರಿ ಕೆಲಸ ನಡೆಯುತ್ತಿದೆ. ಹತ್ತು ದಿನದೊಳಗೆ ಕಾಮಗಾರಿ ಮುಗಿದರೆ ಹೆಬ್ಬೂರು ಹಳ್ಳಕ್ಕೆ ನೀರು ಹರಿಸಿ, ಬಾಗೂರು ಹಳ್ಳದ ಮೂಲಕ ಚೌಳು ಹಿರಿಯೂರು ಹತ್ತಿರ ವೇದಾವತಿ ನದಿಗೆ ಸಂಪರ್ಕಿಸಿದರೆ ನೀರು ವಾಣಿ ವಿಲಾಸ ಜಲಾಶಯಕ್ಕೆ ಬಂದು ಸೇರುತ್ತದೆ.
ಒತ್ತಡಕ್ಕೆ ಮಣಿದ ಜಿಲ್ಲಾಡಳಿತ, ವಿವಿ ಸಾಗರ ಹೋರಾಟಕ್ಕೆ ತಾತ್ಕಾಲಿಕ ಜಯ
ಜಿಲ್ಲಾ ಉಸ್ತುವಾರಿ ಸಚಿವರು ಜುಲೈ 5ರಂದು ಭದ್ರಾ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿ ಕಾಮಗಾರಿ ವೀಕ್ಷಿಸಿ, "ಜುಲೈ 31ಕ್ಕೆ ನೀರು ಹರಿಸಲಾಗುವುದು. ಒಂದು ವೇಳೆ ಆಗಸ್ಟ್ 10ರ ಒಳಗೆ ಭದ್ರಾ ನೀರನ್ನು ವಿವಿ ಸಾಗರಕ್ಕೆ ಹರಿಸದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ" ಎಂದು ಹೇಳಿದ್ದರು.