ಎಲ್ಲಾ ಶಾಸಕರ ಅಭಿಪ್ರಾಯ ಕೇಳಿ ಮುಂದಿನ ಸಿಎಂ ಆಯ್ಕೆ
ಚಿತ್ರದುರ್ಗ, ಜುಲೈ 23: "ಸಿಎಂ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪ ಬದಲಾವಣೆ ವಿಚಾರವಾಗಿ ಮುಂದಿನ ಸಿಎಂ ಆಯ್ಕೆ ಮಾಡಲು ಎಲ್ಲಾ ಶಾಸಕರ ಅಭಿಪ್ರಾಯ ಕೇಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ, "ರಾಷ್ಟ್ರೀಯ ನಾಯಕರ ಆದೇಶ ಪಾಲಿಸುವುದಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಈಗಾಗಲೇ ಹೇಳಿದ್ದಾರೆ,'' ಎಂದು ತಿಳಿಸಿದರು.
"ರಾಜ್ಯದ ಬಿಜೆಪಿ ಕಾರ್ಯಕರ್ತರು ಸಿಎಂ ಯಡಿಯೂರಪ್ಪ ಹೇಳಿಕೆ ಮೆಚ್ಚಿಕೊಂಡಿದ್ದಾರೆ. ಸಿಎಂ ಕೂಡ ಬಿಜೆಪಿ ಪಕ್ಷ ನನ್ನ ತಾಯಿ ಸಮಾನ ಎನ್ನುವ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಂದರೆ ಜುಲೈ 25ಕ್ಕೆ ವರಿಷ್ಠರಿಂದ ಏನು ಸೂಚನೆ ಬರುತ್ತದೆಯೋ ಅದನ್ನು ಪಾಲಿಸುವುದಾಗಿ ಸಿಎಂ ಹೇಳಿದ್ದಾರೆ,'' ಎಂದು ಈಶ್ವರಪ್ಪ ತಿಳಿಸಿದರು.
ಇನ್ನು ಪರೀಕ್ಷೆ ಬರೆದು ಪಾಸಾಗಿದ್ದೇವೆಂದ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೆ.ಎಸ್. ಈಶ್ವರಪ್ಪ, "ಅದೆಲ್ಲ ಹಳೇ ಓಬಿರಾಯನ ಕಥೆಗಳು ಅಂತಾರಲ್ಲ ಹಾಗೇ ಇದೆ. ಯೋಗೇಶ್ವರ್, ಯತ್ನಾಳ್, ಬೆಲ್ಲದ್ ಹೀಗೆ ಅಂದರು, ಹಾಗೆ ಅಂದರು ಅನ್ನೋದೆಲ್ಲ ಮುಗೀತು. ಈಗ ಏನಿದ್ದರೂ ರಾಷ್ಟ್ರೀಯ ನಾಯಕರು, ಬಿಎಸ್ವೈ ಮಾತು ಅಷ್ಟೇ ಉಳಿದಿರುವುದು.''
"ಇನ್ನು ಯಾರ ಮಾತಿಗೂ ಬೆಲೆ ಇಲ್ಲ, ಸಂಚು ಏನು ಅಲ್ಲ ಅವರ ಭಾವನೆ ಹೇಳಿದ್ದಾರೆ ಅಷ್ಟೇ, ಅದು ತಪ್ಪು ಅನ್ನುವುದನ್ನು ಪಕ್ಷ ಈಗಾಗಲೇ ಅವರಿಗೆ ಹೇಳಿದೆ. ಪಕ್ಷ ಸೂಚಿಸಿದ ದಿಕ್ಕಿನಲ್ಲಿ ಬರದಿದ್ದರೆ ಅನುಭವಿಸಬೇಕಾಗುತ್ತದೆ,'' ಎಂದು ಸಚಿವ ಸಿ.ಪಿ. ಯೋಗೇಶ್ವರ್ಗೆ ಟಾಂಗ್ ನೀಡಿದರು.
"ಸಿಎಂ ಸ್ಥಾನಕ್ಕೆ ಅವರವರ ಅಭಿಮಾನಿಗಳು ಹೆಸರು ಹೇಳುತ್ತಿರುತ್ತಾರೆ. ಬೇಡ ಅಂದರೂ ಅಭಿಮಾನಿಗಳು ಕೇಳುವುದಿಲ್ಲ, ಎಲ್ಲಾ ಶಾಸಕರ ಅಭಿಪ್ರಾಯ ಕೇಳಿ ಹೈಕಮಾಂಡ್ನಿಂದ ಮುಂದಿನ ಸಿಎಂ ಆಯ್ಕೆ ಮಾಡಲಾಗುತ್ತದೆ,'' ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.