ನಮಗೆ ದೇವಾಲಯಕ್ಕಿಂತ, ಅಭಿವೃದ್ಧಿ ಬೇಕು: ಎಂಎಲ್ಸಿ ವಿಶ್ವನಾಥ್ ಪತ್ರಕ್ಕೆ ಡಾ.ಪ್ರೇಮ ತಿರುಗೇಟು
ಚಿತ್ರದುರ್ಗ, ಸೆಪ್ಟೆಂಬರ್ 27: ನಮಗೆ ದೇವಾಲಯಗಳ ಅಭಿವೃದ್ಧಿ ಅಗತ್ಯ ಬೇಕಾಗಿಲ್ಲ. ನಮಗೆ ಮುಖ್ಯವಾಗಿ ಬೇಕಾಗಿರುವುದು ರಾಜಕೀಯ, ಶಿಕ್ಷಣ, ಅಭಿವೃದ್ಧಿ ಮತ್ತು ಆಡಳಿತದ ಅವಕಾಶಗಳು ಬೇಕು ಎಂದು ರಾಜ್ಯ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ಡಾ.ಪ್ರೇಮ ಹೇಳಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಕಾಡುಗೊಲ್ಲರ ಆರಾಧ್ಯ ದೈವ ಜುಂಜಪ್ಪ ದೇವಸ್ಥಾನ ನಿರ್ಮಿಸಲು ಸಿಎಂ ಯಡಿಯೂರಪ್ಪ ಅವರಿಗೆ ಬರೆದ ಪತ್ರಕ್ಕೆ ಡಾ.ಪ್ರೇಮ ಅವರು ಖಾರವಾಗಿ ತಿರುಗೇಟು ನೀಡಿದ್ದಾರೆ.
ಕಾಡುಗೊಲ್ಲ ಅತ್ಯಂತ ಹಿಂದುಳಿದಿರುವ ಬುಡಕಟ್ಟು ಸಮುದಾಯವಾಗಿದ್ದು, ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸ್ವಾತಂತ್ರ್ಯ ಬಂದು ಎಪ್ಪತ್ಮೂರು ವರ್ಷ ಕಳೆದರೂ ಕೂಡ ಗೊಲ್ಲರ ಹಟ್ಟಿಗಳು ಯಾವುದೇ ಅಭಿವೃದ್ಧಿಯನ್ನು ಕಾಣದಂತಾಗಿವೆ. ಇಂದಿಗೂ ಇವರಿಗೆ ರಾಜಕೀಯ ಮೀಸಲಾತಿ ದೊರೆತಿಲ್ಲ. ಇದಲ್ಲದೆ ಸಾಮಾಜಿಕ ಮೀಸಲಾತಿ, ಶೈಕ್ಷಣಿಕ ಮೀಸಲಾತಿಯು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿ ಹೊಂದುವುದಕ್ಕೆ ದೇವಸ್ಥಾನಗಳು ಮುಖ್ಯವಲ್ಲ
ನಮಗೆ ಸಮುದಾಯಗಳು ಅಭಿವೃದ್ಧಿ ಹೊಂದುವುದಕ್ಕೆ ದೇವಸ್ಥಾನಗಳು ಮುಖ್ಯವಲ್ಲ ಎಂದು ಡಾ. ಪ್ರೇಮ ಹೇಳಿದ್ದು, ಅಭಿವೃದ್ಧಿ ಹೊಂದಲು ಅಧಿಕಾರಗಳು ಮತ್ತು ರಾಜಕೀಯ ಅವಕಾಶಗಳು, ಮೂಲಭೂತ ಸೌಕರ್ಯಗಳು ಮುಖ್ಯವೆಂದರು.
ಪಶು ಸಂಗೋಪನಾ ಸಚಿವರ ಜಾತಿ ಪ್ರಮಾಣ ಪತ್ರ ಬೋಗಸ್: ಆಂಜನೇಯ ಆರೋಪ
ಚುನಾವಣೆ ಬಂದಾಗ ದೇವಸ್ಥಾನ ಕಟ್ಟಿಕೊಡ್ತಿವಿ, ನಿಗಮ ಮಂಡಳಿ ಮಾಡುತ್ತೇವೆ, ಪರಿಷತ್ ಸದಸ್ಯ ಮಾಡುತ್ತೇವೆ ಎಂದು ದೇವರ ಹೆಸರಿನಲ್ಲಿ ಅಮಾಯಕ ಕಾಡುಗೊಲ್ಲರನ್ನು ದಿಕ್ಕು ತಪ್ಪಿಸಿ, ಮಂಕುಬೂದಿ ಎರಚಿ ನಮ್ಮಿಂದ ಮತ ಪಡೆಯಲು ಮಾಡುವ ಗಿಮಿಕ್ ಎಂದು ಎಚ್.ವಿಶ್ವನಾಥ್ ಪತ್ರಕ್ಕೆ ಡಾ.ಪ್ರೇಮ ಖಡಕ್ ಎಚ್ಚರಿಕೆ ನೀಡಿದರು. ನಿಮ್ಮ ಗಿಮಿಕ್ ಬಿಟ್ಟು ನಮಗೆ ರಾಜಕೀಯ ಅವಕಾಶ ಗಿಟ್ಟಿಸಿಕೊಡಿ, ರಾಜಕೀಯ ಸ್ಥಾನಮಾನ ಕೊಡಿಸಿ ಎಂದರು.
ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಮಾಡಿ
ಗೊಲ್ಲರ ಹಟ್ಟಿಗಳು ಅಭಿವೃದ್ಧಿ ಹೊಂದಲು ಪ್ರತ್ಯೇಕ ಯೋಜನೆಗಳು ಮಾಡಿ, ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಮಾಡಿ. ಈ ನಿಗಮಕ್ಕೆ ಕಾಡುಗೊಲ್ಲರನ್ನು ನೇಮಕ ಮಾಡಿ, ಅವರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಲಿಸಿಕೊಡಿ ಒತ್ತಾಯಿಸಿದರು. ತ್ವರಿತವಾಗಿ ಗೊಲ್ಲರಹಟ್ಟಿಗಳು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿ ಎಂದರು.
ನಮಗೆ ದೇವಾಲಯ ಬೇಡ, ಹಟ್ಟಿಗೊಂದು ಶಾಲೆ ಕಟ್ಟಿಕೊಡುವ ಮೂಲಕ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿ, ನಮ್ಮ ಹಟ್ಟಿಗೆ ಕುಡಿಯುವ ನೀರು, ರಸ್ತೆಗಳು ನಿರ್ಮಾಣ, ಶೌಚಾಲಯ, ಚರಂಡಿ ವ್ಯವಸ್ಥೆ ಮಾಡಿಕೊಡಿ. ಬಿದ್ದೊಗಿರುವ ಮನೆಗಳಿವೆ. ಈಗಲೂ ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದಾರೆ. ಮೊದಲು ಗುಡಿಸಲು ಮುಕ್ತ ಗೊಲ್ಲರಹಟ್ಟಿಗಳನ್ನು ಘೋಷಿಸಿ, ನಮಗೆ ಆಸ್ಪತ್ರೆಗಳನ್ನು ಕಟ್ಟಿಸಿಕೊಡಿ ಎಂದು ಆಗ್ರಹಿಸಿದರು.
ಜುಂಜಪ್ಪ ಪ್ರತಿಮೆ ಯಾರು ಕೇಳಿದರು?
ನಿಮಗೆ ಜುಂಜಪ್ಪ ಪ್ರತಿಮೆ ಯಾರು ಕೇಳಿದರು?, ಜುಂಜಪ್ಪನ ಪರಿಷತ್ ಕೇಳಿದ್ಯಾವರು ಯಾರು? ಎಂದು ಪ್ರಶ್ನಿಸಿದರು. ಕಾಡುಗೊಲ್ಲರು ವಿಗ್ರಹ ಆರಾಧಕರು ಅಲ್ಲ, ಕಾಡುಗೊಲ್ಲರಿಗೆ ಬೇನುವಗಳೇ ಪೂಜಿಸಿಕೊಂಡು ಬರುತ್ತಿದ್ದಾರೆ. ಜುಂಜಪ್ಪನ ಗುಡಿ ಹತ್ತಿರ ಸಮುದಾಯ ಭವನ ನಿರ್ಮಾಣ ಮಾಡಿ. ಗೊಲ್ಲರಹಟ್ಟಿಗಳ ಅಭಿವೃದ್ಧಿ ಮಾಡಿ ಎಂದರು. ಚುನಾವಣೆ ಸಂದರ್ಭದಲ್ಲಿ ಗಿಮಿಕ್ ಪ್ರಚಾರ ಮಾಡಬೇಡಿ. ದಯಮಾಡಿ ಚುನಾವಣೆಯಲ್ಲಿ ಮತಗಳಿಸಲು ಮುಗ್ಧ ಜನರನ್ನು ಮೂಢರನ್ನಾಗಿ ಮಾಡಬೇಡಿ, ಕಾಡುಗೊಲ್ಲರಲ್ಲಿ ನಂಬಿಕೆಗಳಿವೆ ಎಂದರು.
ಕಣ್ಣರಿಯದಿದ್ದರೂ ಕರುಳರಿಯದೇ
ಕಳೆದ ಚುನಾವಣೆಯ ವೇಳೆ ಶಿರಾದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೊಟ್ಟ ಭರವಸೆ ಎಲ್ಲಿಗೆ ಹೊಯ್ತು?. ಸರ್ಕಾರ ಬಂದ 24 ಗಂಟೆಯಲ್ಲಿ ಕಾಡುಗೊಲ್ಲರಿಗೆ ಜಾತಿ ಪಟ್ಟಿ ಕೊಡ್ತೀನಿ ಅಂತ ಹೇಳಿ, 24 ತಿಂಗಳು ಕಳೆಯುತ್ತಾ ಬರುತ್ತಿದೆ. ಎಲ್ಲಿಗೆ ಹೋಯ್ತು ಆ ಭರವಸೆ ಎಂದು ಪ್ರಶ್ನಿಸಿದರು. ಚುನಾವಣೆ ಬಂದಾಗ ನಮ್ಮ ಸಮುದಾಯದವರು ಮತಕ್ಕಾಗಿ ಸಮುದಾಯವನ್ನು ಬಲಿ ಕೊಡಬೇಡಿ. ಬದಲಿಗೆ ರಾಜಕೀಯ ಸ್ಥಾನಮಾನ, ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ. ನಮ್ಮವರು ಸಹ ಬೇರೆಯವರ ತರ ವರ್ತನೆ ಮಾಡಬೇಡಿ, ನಮ್ಮ ಸಮಾಜದ ಬಂಧುಗಳು ಅರ್ಥಮಾಡಿಕೊಳ್ಳಬೇಕು. ಕಣ್ಣರಿಯದಿದ್ದರೂ ಕರುಳರಿಯದೇ ಎಂಬ ಕರುಳಿನ ಮಾತು, ಕರುಳಿನ ಭಾಷೆಯನ್ನು ಅರ್ಥಮಾಡಿಕೊಳ್ಳಬೇಕು ತಿಳಿ ಹೇಳಿದರು.
Recommended Video