ನಾವೆಲ್ಲ ಭಾರತೀಯರು, ನೀವು?: ಕಾಂಗ್ರೆಸಿಗರಿಗೆ ಆರ್. ಅಶೋಕ್ ಪ್ರಶ್ನೆ
ಚಿತ್ರದುರ್ಗ, ಆಗಸ್ಟ್ 10: "ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳು ಮಾತ್ರ ಬಾಕಿ ಇದೆ. ಕಾಂಗ್ರೆಸ್ ನಾಯಕರಿಗೆ ಬುದ್ಧಿ ಭ್ರಮಣೆಯಾಗಿದೆ. ತಾಕತ್ತು, ಧೈರ್ಯ ಇದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಲಿ" ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಆರ್. ಅಶೋಕ ಸವಾಲು ಹಾಕಿದರು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಮಾತನಾಡಿದ ಅವರು, "ನಮ್ಮ ಪ್ರಧಾನಿ ಇಟಲಿಯಿಂದ ಬಂದಿಲ್ಲ, ನಾವು ಪಕ್ಕಾ ಭಾರತೀಯರು" ಎಂದು ಟಾಂಗ್ ಕೊಟ್ಟರು.
ಚಿತ್ರದುರ್ಗ: ಭಾರೀ ಮಳೆ, ತುಂಬಿ ಹರಿಯುತ್ತಿರುವ ಕೆರೆಕಟ್ಟೆಗಳು
ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಅವರು, "ಪ್ರಧಾನಿ ಮೋದಿ, ಅಮಿತ್ ಶಾ, ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಪಕ್ಷದವರ ಬಳಿ ಮಾತನಾಡಿದ್ದಾರಾ?" ಎಂದು ಅಶೋಕ್ ಪ್ರಶ್ನಿಸಿದರು.
"ಅಮಿತ್ ಶಾ ಬಂದ ಬಳಿಕ ಮುಖ್ಯಮಂತ್ರಿ ಬದಲಾವಣೆ ಎನ್ನುತ್ತಾರೆ. ಇದು ಕಾಂಗ್ರೆಸ್ ನಾಯಕರ ಬಲಹೀನತೆ ಹೇಳಿಕೆ. ದಾವಣಗೆರೆಯಲ್ಲಿ ನಡೆದ ಸಮಾವೇಶದ ಬಳಿಕ ಅವರಲ್ಲಿ ಒಳ ಜಗಳ ಶುರುವಾಗಿದೆ. ಕಾಂಗ್ರೆಸ್ ಪಕ್ಷ ಕೊಳೆತು ನಾರುವ ಗೊಂದಲವನ್ನು ಮುಚ್ಚಿಹಾಕಲು ಈ ರೀತಿ ಮಾತನಾಡುತ್ತಿದ್ದಾರೆ" ಎಂದು ಅಶೋಕ ಆರೋಪಿಸಿದರು.
ಬೊಮ್ಮಾಯಿ ಚುನಾವಣೆ: "ಮುಂದಿನ ಚುನಾವಣೆಯನ್ನು ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಬೊಮ್ಮಾಯಿ ಅವರು ಸರಳ ಸಿಎಂ ಆಗಿದ್ದಾರೆ. ನಮ್ಮ ಸರ್ಕಾರ ಭದ್ರವಾಗಿದೆ, ಮೋದಿ, ಅಮಿತ್ ಶಾ ಅವರ ಭಯ ಕಾಂಗ್ರೆಸ್ನವರಿಗೆ ಹೆಚ್ಚಿದೆ. ಬೊಮ್ಮಾಯಿ ಇಂದು ಮತ್ತೆ ಮುಂದೆಯೂ ಸಿಎಂ ಆಗಿರುತ್ತಾರೆ" ಎಂದು ಅಶೋಕ್ ತಿಳಿಸಿದರು.
ನಾವೆಲ್ಲ ಪಕ್ಕಾ ಇಂಡಿಯನ್ಸ್: "ಸಿದ್ದರಾಮಯ್ಯ ಸರ್ಕಾರದಲ್ಲಿ ಶೇ 60 ಕಮಿಷನ್ ಇತ್ತು. ನಮ್ಮ ಸರ್ಕಾರದಲ್ಲಿ ಒಂದು ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಭ್ರಷ್ಟಾಚಾರ ರಹಿತ ಸರ್ಕಾರ ನಮ್ಮದು. ನಮಗೆ ದೇಶದಲ್ಲಿ ಮೋದಿ ಲೀಡರ್ಶಿಪ್ ಇದೆ, ನೀವು ಲೀಡರ್ ಲೆಸ್ ಆಗಿದ್ದೀರ. ಸಿಎಂ ಘೋಷಣೆ ಆದರೆ ಕಾಂಗ್ರೆಸ್ ಎರಡು ಭಾಗ ಆಗುತ್ತದೆ" ಎಂದು ಅಶೋಕ ಭವಿಷ್ಯ ನುಡಿದರು.
"ಸಿದ್ದರಾಮಯ್ಯ ಕಾಂಗ್ರೆಸ್, ಡಿಕೆ ಕಾಂಗ್ರೆಸ್ ಆಗಿ ಇಬ್ಬಾಗ ಆಗುತ್ತದೆ. ನಿಮ್ಮ ತಟ್ಟೆಯ ಹೆಗ್ಗಣ ನೋಡಿ, ನಮ್ಮ ನೊಣ ನೋಡಬೇಡಿ. ಸಿದ್ದರಾಮಯ್ಯ ಜೆಡಿಎಸ್ ಟ್ರೈನಿಂಗ್ ಕ್ಯಾಂಪ್ನವರು, ನಮ್ಮ ಪ್ರಧಾನಿ ಇಟಲಿಯಿಂದ ಬಂದಿಲ್ಲ. ನಾವೆಲ್ಲಾ ಪಕ್ಕಾ ಇಂಡಿಯನ್ಸ್" ಎಂದು ಅಶೋಕ ಟಾಂಗ್ ನೀಡಿದರು.